ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 20, 2014

ದೇವರು: ಒಂದು ತರ್ಕವಿತರ್ಕ- 3


     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಮೈಗೂಡಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.
     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.
    ಹೌದು, ದೇವರನ್ನು ಪೂಜಿಸುವುದಾದರೂ ಹೇಗೆ? ಹೇಗೆ ಪೂಜಿಸಿದರೆ ದೇವರು ಸುಪ್ರೀತನಾಗುತ್ತಾನೆ? ಅಷ್ಟಕ್ಕೂ ದೇವರು ತನ್ನನ್ನು ಪೂಜಿಸಬೇಕೆಂದು ಬಯಸುತ್ತಾನೆಯೇ? ಮಂಡಿಯೂರಿ ಪ್ರಾರ್ಥಿಸಬೇಕೇ? ಮೇಣದ ಬತ್ತಿಗಳನ್ನು ಹಚ್ಚಬೇಕೇ? ಮಂಗಳಾರತಿ ಮಾಡಬೇಕೇ? ಪ್ರಾಣಿಬಲಿ ಕೊಡಬೇಕೇ? ಕವಿ ಕೇಳುತ್ತಾನೆ: 'ಓ ದೇವರೇ, ನಿನ್ನನ್ನು ಹೇಗೆ ಅರ್ಚಿಸಲಿ? ಸರ್ವವ್ಯಾಪಕನಾದ ನಿನ್ನನ್ನು ಒಂದು ಸಣ್ಣ ಪೀಠದ ಮೇಲೆ ಕುಳಿತುಕೋ ಎನ್ನಲೇ? ಎಲ್ಲೆಲ್ಲೂ ಇರುವ ನಿನ್ನನ್ನು ಪೂಜೆ ಮಾಡುತ್ತೇನೆ, ಬಾ ಎಂದು ಗಂಟೆ ಬಾರಿಸಿ ಆಹ್ವಾನಿಸಲೇ? ನಿನ್ನದೇ ಸೃಷ್ಟಿಯಾದ ಹಣ್ಣು, ಹೂವುಗಳನ್ನು ಸರ್ವತೃಪ್ತನಾದ, ಏನನ್ನೂ ಬಯಸದ ನಿನಗೆ ನೈವೇದ್ಯವೆಂದು ನೀಡಲೇ?' ದೇವರು ತನ್ನ ಪೂಜೆ ಮಾಡಬೇಕೆಂದು ಬಯಸುವುದೂ ಇಲ್ಲ, ಮಾಡದಿದ್ದರೆ ಶಿಕ್ಷಿಸುವುದೂ ಇಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ವಾಸ್ತವವಾಗಿ ದೇವರು ಸಮಚಿತ್ತ, ಸಮದರ್ಶಿಯಾಗಿರುವುದು ಕಣ್ಣುಳ್ಳವರಿಗೆ ಅರಿವಿಗೆ ಬರುತ್ತದೆ. ಅವನು ಯಾವುದೇ ಮತ/ಜಾತಿ/ಧರ್ಮಗಳ ಪಕ್ಷಪಾತಿಯಲ್ಲ. ತನ್ನನ್ನು ಹೊಗಳುವವರಿಗೆ ಹೆಚ್ಚು ಕೃಪೆ ತೋರುವುದೂ ಇಲ್ಲ, ತೆಗಳುತ್ತಾರೆಂದು ಕೆಟ್ಟದ್ದನ್ನೂ ಮಾಡುವುದಿಲ್ಲ. ಇಸ್ಲಾಮ್ ಧರ್ಮವನ್ನೇ ಪಾಲಿಸುವ, ಕ್ರಿಶ್ಚಿಯನ್ ಧರ್ಮವನ್ನೇ ಅನುಸರಿಸುವ ದೇಶಗಳಿವೆ. ಬೇರೆ ಬೇರೆ ಧರ್ಮಗಳನ್ನು ಮತ್ತು ವಿವಿದ ಧರ್ಮಗಳನ್ನು ಅನುಸರಿಸುವ, ನಾಸ್ತಿಕತೆಗೆ ಒತ್ತು ಕೊಡುವ ಕಮ್ಯುನಿಸ್ಟ್ ದೇಶಗಳಿವೆ. ದೇವರು ಪಕ್ಷಪಾತಿಯಾಗಿದ್ದರೆ ಒಬ್ಬೊಬ್ಬರಿಗೆ ಒಂದೊಂದು ತರಹ ಸೂರ್ಯ, ಚಂದ್ರರ ಬೆಳಕು ಬೀಳುವಂತೆ ಮಾಡುತ್ತಿದ್ದ, ಒಂದೊಂದು ಕಡೆ ಒಂದೊಂದು ರೀತಿಯಾಗಿ ಗಾಳಿ ಬೀಸುವಂತೆ ಅಥವ ಬೀಸದಿರುವಂತೆ ಮಾಡುತ್ತಿದ್ದ, ಮಳೆ ಬೀಳುವಂತೆ ಅಥವ ಬೀಳದಿರುವಂತೆ ಮಾಡುತ್ತಿದ್ದ ಅಲ್ಲವೇ?
     ದೇವರು ತನ್ನನ್ನು ಪೂಜಿಸುವವರನ್ನೂ, ಪೂಜಿಸದವರನ್ನೂ, ನಂಬುವವರನ್ನೂ, ನಂಬದಿರುವವರನ್ನೂ ಒಂದೇ ರೀತಿ ನೋಡುತ್ತಾನೆಂದರೆ ನಾವು ದೇವರಿಗೆ ಏಕೆ ಹೆದರಬೇಕು? ನಿಜ, ನಾವು ದೇವರಿಗೆ ಹೆದರಬೇಕಿಲ್ಲ. ನಮ್ಮ ಬಗ್ಗೆಯೇ ನಾವು ಹೆದರಬೇಕು. ದೇವರ ನ್ಯಾಯವಿಧಾನ ನೀತಿ ಹಾಗೆ ರೂಪಿತವಾಗಿದೆ. ವೇದವಿರಲಿ, ಭಗವದ್ಗೀತೆಯಿರಲಿ, ಬೈಬಲ್ ಇರಲಿ, ಕುರಾನ್ ಇರಲಿ, ಒಂದು ಸಮಾನ ಅಂಶವನ್ನು ಪ್ರತಿಪಾದಿಸುತ್ತವೆ: ಅದೆಂದರೆ ಒಳ್ಳೆಯ ಕೆಲಸಗಳಿಗೆ ಸದ್ಗತಿ ಮತ್ತು ಕೆಟ್ಟ ಕೆಲಸಗಳಿಗೆ ಶಿಕ್ಷೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ  ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರದ ಆರ್ಥ. ಮಾಡಿದ್ದುಣ್ಣೋ ಮಹರಾಯ! ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಫಲ ನಿರ್ಧರಿಸಲ್ಪಡುತ್ತದೆ. ಹೀಗಾಗಿ ಒಳ್ಳೆಯ ಕೆಲಸ ಮಾಡುವವರು ಯಾರಿಗೂ, ದೇವರಿಗೂ ಸಹ ಹೆದರಬೇಕಿಲ್ಲ. ಎಲ್ಲಿ ಕೆಟ್ಟ ಕೆಲಸ ಮಾಡುತ್ತೇವೆಯೋ ಎಂದು ಹೆದರಬೇಕಾಗುತ್ತದೆ. ಅಂದರೆ ನಾವು ನಮಗೆ ಮಾತ್ರ ಹೆದರಬೇಕಿದೆ.
     ಹಾಗಾದರೆ ನಾವು ದೇವರಿಗೆ ಹೆದರಬೇಕಿಲ್ಲವೆಂದಾದರೆ ಅವನನ್ನು ಪೂಜಿಸಬೇಕಿಲ್ಲ ಅಲ್ಲವೇ ಎಂದರೆ ಪೂಜಿಸಬೇಕು ಎನ್ನುವೆ. ಏನು ಸ್ವಾಮಿ, ಹೀಗೂ ಮಾತಾಡುತ್ತೀರಿ, ಹಾಗೂ ಮಾತಾಡುತ್ತೀರಿ. ಯಾವುದಾದರೂ ಒಂದು ರೀತಿಯಲ್ಲಿ ಮಾತನಾಡಿ, ಗೊಂದಲ ಮಾಡಬೇಡಿ ಎನ್ನುತ್ತೀರೆಂದು ನನಗೆ ಗೊತ್ತು. ಪೂರ್ತಿ ವಿವರಿಸಿಬಿಡುತ್ತೇನೆ, ನಂತರ ನೀವೇ ನಿರ್ಧರಿಸಿ. ಪ್ರತಿ ಮಾನವನೂ ಮೂರು ರೀತಿಯ ಋಣಗಳಿಗೆ ಬಾಧ್ಯನಾಗಿರುತ್ತಾನೆ. ಅವೆಂದರೆ, ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳು ಈಗಿನ ವಿಷಯಕ್ಕೆ ಸಂಬಂಧಿಸಿದ್ದಲ್ಲವಾದ್ದರಿಂದ ಇಲ್ಲಿ ಚರ್ಚಿಸುವುದು ಬೇಡ. ದೇವಋಣ ಅಂದರೆ ಏನು? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ತೀರುವುದಿಲ್ಲವೆಂದಾದರೆ ತೀರಿಸುವುದಾದರೂ ಹೇಗೆ? 
ಸಾಲವನು ಪಡೆದಿಹೆವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಈ ಪ್ರಕೃತಿ, ಈ ಸಮಾಜ ನಮ್ಮೊಬ್ಬರ ಸಲುವಾಗಿ ಇರುವುದಲ್ಲ. ಇದು ಸಮಸ್ತ ಜೀವಗಳ ಸ್ವತ್ತು. ಇದನ್ನು ನಮಗೆ ಅಗತ್ಯವಿರುವಷ್ಟು ಉಪಯೋಗಿಸಲು ಮಾತ್ರ ನಮಗೆ ಹಕ್ಕಿದೆ. ಅದನ್ನು ಬಿಟ್ಟು ಅದನ್ನು ಹಾಳುಗೆಡವುವುದರಿಂದ, ಇತರ ಜೀವಿಗಳಿಗೆ ಲಭ್ಯವಾಗದಂತೆ ಮಾಡುವುದರಿಂದ ದೇವರ ವಿಧಿ-ವಿಧಾನಗಳಿಗೆ ಧಕ್ಕೆ ತಂದಂತೆ ಆಗುತ್ತದೆ. ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಲಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ ಮತ್ತು ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ, ಮಾಡಬೇಕಾಗಿರುವ ದೇವರ ಪೂಜೆಯೆಂದರೆ ಇದೇ ಹೊರತು ಮತ್ತೊಂದಲ್ಲ. 
     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ಜಿಜ್ಞಾಸೆ, ಗೊಂದಲಗಳನ್ನು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು 'ಅಜಾತರು' ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ. 
     ಸಾರರೂಪವಾಗಿ ಹೇಳಬೇಕೆಂದರೆ: 
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ  ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಂತೂ ಅಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ. 
೩. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೪. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ.
೫. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.
     ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!
ದೇವರನು ಅರಸದಿರಿ ಗುಡಿ ಗೋಪುರಗಳಲಿ
ಇರದಿಹನೆ ದೇವ ಹೃದಯ ಮಂದಿರದಲ್ಲಿ |
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮ ಒಲಿಯುವನು ಮೂಢ || 
-ಕ.ವೆಂ.ನಾಗರಾಜ್.
**********************
ದಿನಾಂಕ 6.10.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.


9 ಕಾಮೆಂಟ್‌ಗಳು:

  1. 'ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ'
    ನಿಮ್ಮ ಲೇಖನಗಳು ತುಂಬಾ ಇಷ್ಟವಾಗ್ತಿವೆ - ನನ್ನ ಮನಸ್ಥಿತಿಯೂ ನಿಮ್ಮಂತೆ ಯೋಚಿಸುವುದರಿಂದ ಇರಬೇಕು. ಸಾಮಾನ್ಯವಾಗಿ ಯೋಚಿಸುವವರಿಗೆ ಇಂತಹವುಗಳನ್ನು ಅರ್ಥ ಮಾಡಿಸುವುದು ಕಷ್ಟ.
    'ದೇವರು ತನ್ನನ್ನು ಪೂಜಿಸುವವರನ್ನೂ, ಪೂಜಿಸದವರನ್ನೂ, ನಂಬುವವರನ್ನೂ, ನಂಬದಿರುವವರನ್ನೂ ಒಂದೇ ರೀತಿ ನೋಡುತ್ತಾನೆಂದರೆ ನಾವು ದೇವರಿಗೆ ಏಕೆ ಹೆದರಬೇಕು? ನಿಜ, ನಾವು ದೇವರಿಗೆ ಹೆದರಬೇಕಿಲ್ಲ. ನಮ್ಮ ಬಗ್ಗೆಯೇ ನಾವು ಹೆದರಬೇಕು'

    ಪ್ರತ್ಯುತ್ತರಅಳಿಸಿ
  2. ಸಂಗ್ರಹ ಯೋಗ್ಯ ಮಾಲಿಕೆ.

    shared at:
    https://www.facebook.com/photo.php?fbid=602047969839656&set=gm.483794418371780&type=1&theater

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಮೂಲ್ಯ ಸಮಯವನ್ನು ನನ್ನಂತಹವನ ಬರಹಗಳನ್ನೂ ಓದಲು ಬಿಡುವು ಮಾಡಿಕೊಳ್ಳುವ ಬದರೀನಾಥರಿಗೆ ವಿಶೇಷ ಧನ್ಯವಾದಗಳು.

      ಅಳಿಸಿ
    2. nageshamysore
      ವಿಪರ್ಯಾಸ, ದ್ವಂದ್ವವೆಂದರೆ ಒಂದೆಡೆ ದೇವರೆನ್ನುವ ಹೆಸರೆ ಅನೇಕ ಸಮಾನಮನಸ್ಕರನ್ನು ಒಗ್ಗೂಡಿಸಿ ಒಂದು ವೇದಿಕೆಯಡಿ ಒಗ್ಗೂಡಿಸುತ್ತದೆ. ಮತ್ತೊಂದೆಡೆ ಅದೇ ದೇವರ ಸಿದ್ದಾಂತವೆ ಅನೇಕ ಗುಂಪುಗಳನ್ನಾಗಿಸಿ ಸಮಗ್ರ ಒಗ್ಗಟ್ಟಿಗೆ ಅಡ್ಡಗಾಲು ಹಾಕುತ್ತವೆ. ಆದರೆ ಈ ಎರಡರಲ್ಲೂ ದೇವರ ನೇರ ಕೈವಾಡವಿಲ್ಲ ಎನ್ನುವುದೂ ನಿಜವೆ. ಎಲ್ಲವು ಮಾನವರಿಂದಾದ ಸ್ವಯಂಕೃತಾಪರಾಧ. ಸಮತೋಲನದಲ್ಲಿ ಅಸಮತೋಲನ ತಂದಿಡುವ ಸ್ವಾರ್ಥಲಾಲಸೆ, ಧ್ಯೇಯೋದ್ದೇಶಗಳಿಂದ ದೇವರನ್ನೆ ಗುಂಪುಗಾರಿಕೆಯ ಮೂರ್ತರೂಪಾಗಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಾನೆ. 'ನಂಬಿಕೆಗಳು ವೈಯಕ್ತಿಕ, ಸಮಗ್ರತೆ ಸಾರ್ವತ್ರಿಕ' ಎನ್ನುವ ದೃಷ್ಟಿಕೋನವಿದ್ದರೆ ಎಲ್ಲಾ ಸರಿಯಿರುತ್ತಿತ್ತೇನೊ. ಆದರೆ ಅದರ ಪೂರಕ ಸಾಮಾಜಿಕ ವಾತಾವರಣದಲ್ಲಿ ನಾವಿಲ್ಲ ಎನ್ನುವುದು ದುರಂತ.

      kavinagaraj
      ನಿಜ, ನಾಗೇಶರೇ. ಅದಕ್ಕಾಗಿಯೇ ಹೇಳಿದ್ದು: 'ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ' ಅಂತ! :)

      ಅಳಿಸಿ
    3. ಗಣೇಶ
      >>>ದೇವರು ತನ್ನ ಪೂಜೆ ಮಾಡಬೇಕೆಂದು ಬಯಸುವುದೂ ಇಲ್ಲ, ಮಾಡದಿದ್ದರೆ ಶಿಕ್ಷಿಸುವುದೂ ಇಲ್ಲ. ತನ್ನನ್ನು ಹೊಗಳುವವರಿಗೆ ಹೆಚ್ಚು ಕೃಪೆ ತೋರುವುದೂ ಇಲ್ಲ, ತೆಗಳುತ್ತಾರೆಂದು ಕೆಟ್ಟದ್ದನ್ನೂ ಮಾಡುವುದಿಲ್ಲ.
      -ಯಾಕೆಂದರೆ ದೇವರು ಇದ್ದರೆ ತಾನೆ?
      >>>ದೇವರು ಪಕ್ಷಪಾತಿಯಾಗಿದ್ದರೆ ಒಬ್ಬೊಬ್ಬರಿಗೆ ಒಂದೊಂದು ತರಹ ಸೂರ್ಯ, ಚಂದ್ರರ ಬೆಳಕು ಬೀಳುವಂತೆ ಮಾಡುತ್ತಿದ್ದ, ಒಂದೊಂದು ಕಡೆ ಒಂದೊಂದು ರೀತಿಯಾಗಿ ಗಾಳಿ ಬೀಸುವಂತೆ ...
      -ಕೆಲವು ಕಡೆ ವಿಪರೀತ ಹಿಮಪಾತ, ಕೆಲವು ಕಡೆ ಬಿರುಗಾಳಿ ಮಳೆ, ಕೆಲವೆಡೆ ಬರ ಇದೆಯಲ್ಲಾ..?
      >>>ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? =ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ..
      -ಅಲ್ಲೇ ಗೊತ್ತಾಯಿತಲ್ಲ... ಪ್ರಕೃತಿ ರಕ್ಷಣೆ ಮಾಡಿದರೆ ನಮ್ಮ ಉಳಿವು-ದೇವರಿಂದಲ್ಲ.
      >>>ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ...
      -ಇದು ಒಂದು "ಮೂಢ"ನಂಬಿಕೆ. ಜನರನ್ನು ಸುಮ್ಮನೆ ಭಯಬೀಳಿಸುವುದು.
      >>>ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ.
      -ದೇವರಿಂದಲೂ ಬದಲಾಯಿಸಲು ಸಾಧ್ಯವಿಲ್ಲವಾ? ಹಾಗಿದ್ದರೆ ಕರ್ಮವೇ ದೇವರಿಗಿಂತ ಮೇಲು ಎಂದಾಯಿತಲ್ಲಾ?
      >>>ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ.
      -ದೇವರಿಲ್ಲ ಎನ್ನೋಣ :)

      kavinagaraj n November 27, 2014 - 2:18pm
      ಅವರವರ ಭಾವಕ್ಕೆ! ನಿಮ್ಮ ಅನಿಸಿಕೆಗೆ ಗೌರವವಿದೆ. ಆದರೆ, ಅದು ನನ್ನ ನಂಬಿಕೆಯನ್ನು ಬದಲಾಯಿಸುವಷ್ಟು ಪ್ರಖರತೆ ಹೊಂದಿಲ್ಲ. ದೇವರಿಲ್ಲ ಎಂಬ ಬಗ್ಗೆ ಬಹಳಷ್ಟು ವಾದಗಳು ಮಂಡಿತವಾಗಿವೆ. ಇರಲಿ ಬಿಡಿ, ಇಂತಹ ವಾದಗಳು ಇಲ್ಲದಿದ್ದರೆ ಗಣೇಶರೂ, ನಾಗರಾಜರುಗಳೂ ಏಕಮನಸ್ಕರಾಗಿಬಿಡುತ್ತಿದ್ದು ಜಗತ್ತಿಗೆ ಅರ್ಥವಿರುತ್ತಿರಲಿಲ್ಲ. ಇಬ್ಬರೂ ಇದ್ದರೆ ಮಾತ್ರ ಜಗತ್ತಿಗೆ ಅರ್ಥ, ಬೆಲೆ! ಧನ್ಯವಾದಗಳು, ಗಣೇಶರೇ.

      ಅಳಿಸಿ
    4. ಗಣೇಶ
      >>ನಿಮ್ಮ ಅನಿಸಿಕೆಗೆ ಗೌರವವಿದೆ. ಆದರೆ, ಅದು ನನ್ನ ನಂಬಿಕೆಯನ್ನು ಬದಲಾಯಿಸುವಷ್ಟು ಪ್ರಖರತೆ ಹೊಂದಿಲ್ಲ.
      -:( ನಾನೂ ಇದೇ ಉತ್ತರ ನಿರೀಕ್ಷಿಸಿದ್ದೆ.
      ಆನಂದ್ ಅವರ ಜತೆ ( http://bit.ly/1vZFmmt ) ನೈತಿಕ ಪೋಲೀಸರ ಬಗ್ಗೆ ಚರ್ಚಿಸಿದ್ದೆ. ನಾನಾಗಲೀ, ಅವರಾಗಲೀ ನಮ್ಮ ನಮ್ಮ ನಿಲುವಿನಿಂದ ಒಂದಿಂಚೂ ಬದಲಾಗಲಿಲ್ಲ.
      ಹೀಗೆ ನಾವೇ ನಮ್ಮ ನಮ್ಮ ತೀರ್ಮಾನಕ್ಕೆ ಕಟ್ಟುಬಿದ್ದಿರುವಾಗ, "ಮತಾಂಧ"ರಲ್ಲಿ ಬದಲಾವಣೆ ನಿರೀಕ್ಷಿಸುವುದು ಸರಿಯಾ?
      ನಾವು ಬದಲಾಗಿ ಅವರಿಗೆ ಮಾದರಿಯಾಗೋಣ- ಕಷ್ಟವೇನಿಲ್ಲ. ದೇವರು ದಯಾಮಯ ಎಂದೆಲ್ಲಾ ಹೊಗಳಿದ್ದೀರಿ-ಕೇವಲ ಆರು ತಿಂಗಳು "ದೇವರಿಲ್ಲ" ಎಂದು ನೀವು ನಂಬಿದರೆ ಆತ ನಿಮಗೇನೂ ತೊಂದರೆ ಮಾಡಲಿಕ್ಕಿಲ್ಲ. ನಾನೂ ಆರು ತಿಂಗಳು "ದೇವರಿದ್ದಾನೆ" ಎಂದು ನಿಮ್ಮಂತೆ ಭಕ್ತಿ ಮಾಡುವೆ. "ಓ...ಆರು ತಿಂಗಳು ಜಾಸ್ತಿ ಅಂದಿರಾ? ಹೋಗಲಿ ಒಂದು ತಿಂಗಳು...?

      kavinagaraj
      ಗಣೇಶರೇ, ಇದನ್ನು ಉತ್ತಮ ಪ್ರತಿಕ್ರಿಯೆ ಮತ್ತು ಕೀಟಲೆಯ ಪ್ರತಿಕ್ರಿಯೆ ಎರಡೂ ರೀತಿಯಲ್ಲಿ ತಿಳಿಯುವೆ. ಕಾಲಕಾಲಕ್ಕೆ ನನ್ನ ತಿಳುವಳಿಕೆಯ ಮಿತಿಗೊಳಪಟ್ಟು ನನ್ನ ಅಭಿಪ್ರಾಯ ಪರಿಷ್ಕರಿಸಿಕೊಳ್ಳುತ್ತಲೇ ಇರುವೆ. ಈಚೆಗೆ ಉಪನಿಷತ್ತಿನ ಸನತ್ಕುಮಾರ-ನಾರದ ಸಂವಾದ ಓದುತ್ತಿದ್ದೆ. ನಮ್ಮ ನಮ್ಮ ಮೆದುಳು ಗ್ರಹಿಸುವಷ್ಟು ಮಾತ್ರ ನಾವು ನಂಬಬೇಕೆಂಬ ಮಾತು ಅಲ್ಲಿ ಓದಿದೆ. ನಮ್ಮ ಮೆದುಳು ಗ್ರಹಿಸಲಾರದ ವಿಷಯದಲ್ಲಿ ಕಲ್ಪನೆಯು ವಾಸ್ತವಕ್ಕಿಂತ ಭಿನ್ನವಾಗಿರುತ್ತದೆ ಎಂಬ ಅಂಶ ಮೆಚ್ಚುಗೆಯಾಯಿತು. ಕಲ್ಪನೆ ಸಹ ನಮ್ಮ ಮೆದುಳು ಒಪ್ಪುವಂತಿರಬೇಕಷ್ಟೆ. ಇರಲಿ, ನನ್ನ ಅಭಿಪ್ರಾಯದಿಂದ ಇತರರಿಗೆ ಬಾಧಕವಿಲ್ಲವಲ್ಲ, ಅಷ್ಟು ಸಾಕು ನನಗೆ! ನಾನು, ನೀವು ಏನೆಂದುಕೊಂಡರೂ ವಸ್ತುಸ್ಥಿತಿಗೆ ಬಾಧಕವಂತೂ ಇಲ್ಲ! :) ಧನ್ಯವಾದಗಳು.

      ಅಳಿಸಿ