ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜನವರಿ 26, 2016

ತಾಯಿ ಭಾರತಿಗೆ ನಮಿಸೋಣ!


     26.01.2016ಕ್ಕೆ ಭಾರತದ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತಂದು 66 ವರ್ಷಗಳಾದವು.      ಇದರ ನೆನಪಿನಲ್ಲಿ ಪ್ರತಿವರ್ಷ ಈ ದಿನವನ್ನು ಗಣರಾಜ್ಯೋತ್ಸವವಾಗಿ ಅಚರಿಸಲಾಗುತ್ತಿದೆ. ಭಾರತದ ಸಂವಿಧಾನ ಭಾರತೀಯರೆಲ್ಲರಿಗೆ ಬಹಳ ಪವಿತ್ರವಾದ ಗ್ರಂಥವಾಗಿದೆ. ಸಂವಿಧಾನ ಮೊದಲು ಜಾರಿಗೆ ಬಂದಾಗ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಹೆಸರಿಸಲಾಗಿತ್ತು. 1975-77ರ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇದಕ್ಕೆ ಸಮಾಜವಾದಿ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿ, ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಫ್ರಭುತ್ವವಾದಿ ಗಣರಾಜ್ಯವಾಗಿ ಮಾಡಲಾಯಿತು. ಸಂವಿಧಾನ ಪರಮೋಚ್ಛವಾದ ಸಂಗತಿಯಾಗಿದ್ದು ಭಾರತದ ಎಲ್ಲಾ ಕಾನೂನು, ಕಾಯದೆಗಳು, ಸರ್ಕಾರದ ನಡವಳಿಗಳು ಎಲ್ಲವೂ ಸಂವಿಧಾನದ ಆಶಯದಂತೆಯೇ ಇರಬೇಕಾಗಿದೆ. ಸಾರ್ವಭೌಮ ಎಂಬ ಪದದ ಅರ್ಥ ಭಾರತ ಯಾವುದೇ ವಿದೇಶೀ ಅಥವ ಬಾಹ್ಯ ಶಕ್ತಿಗಳ ನಿಯಂತ್ರಣದಲ್ಲಿರದೆ ತನ್ನದೇ ಆದ ಆಡಳಿತವನ್ನು ತನ್ನ ಪ್ರಜೆಗಳ ಮೂಲಕ ಆರಿಸಲ್ಪಟ್ಟ ಸರ್ಕಾರದ ಮೂಲಕ ನಡೆಸುತ್ತದೆ ಎಂದು. ಸಮಾಜವಾದಿ ಎಂಬ ಪದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಎಲ್ಲರಿಗೂ ಒದಗಿಸುವುದಾಗಿದೆ. ಸಾಮಾಜಿಕ ಸಮಾನತೆಯೆಂದರೆ ಯಾವುದೇ ಜಾತಿ, ಮತ, ಪಂಥ, ಲಿಂಗ ಅಥವ ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡದಿರುವುದು ಮತ್ತು ಆರ್ಥಿಕ ಸಮಾನತೆಯೆಂದರೆ ಎಲ್ಲರಿಗೂ ಯಾವುದೇ ತಾರತಮ್ಯ ಮಾಡದೆ ಸಮಾನ ಆರ್ಥಿಕ ಅವಕಾಶಗಳನ್ನು ಒದಗಿಸುವುದು ಮತ್ತು ಸಮಾನ ಜೀವನ ಮಟ್ಟವನ್ನು ಕಲ್ಪಿಸುವುದು ಎಂಬುದಾಗಿದೆ. ಇನ್ನು ಜಾತ್ಯಾತೀತ ಎಂದರೆ ಎಲ್ಲಾ ಧರ್ಮಗಳ ಕುರಿತು ಸಮಾನ ಧೋರಣೆ ಹೊಂದುವುದು ಎಂದು. ಸರ್ಕಾರ ಯಾವುದೇ ಒಂದು ಧರ್ಮದ ಪರ ಅಥವ ವಿರೋಧ ನಿಲುವು ತಳೆಯುವಂತಿಲ್ಲ. ಪ್ರಜಾಪ್ರಭುತ್ವವಾದಿ ಎಂದರೆ ಸರ್ಕಾರಗಳು ಜನರಿಂದ ನೇರವಾಗಿ ಚುನಾವಣೆ ಮೂಲಕ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ಕೂಡಿರುವುದು. ಗಣರಾಜ್ಯವೆಂದರೆ ರಾಜಪ್ರಭುತ್ವವಿರದೆ ಮತ್ತು ವಂಶಪಾರಂಪರ್ಯ ಆಡಳಿತವಿರದೆ ಜನರಿಂದ ಆರಿಸಲಪ್ಟಟ್ಟವರಿಂದ ಆಡಳಿತವಿರುವ ವ್ಯವಸ್ಥೆ ಆಗಿದೆ. ಸಂವಿಧಾನ ರಚನೆಯಾದ ಮತ್ತು ಘೋಷಿತವಾದ ಸಂದರ್ಭದಲ್ಲಿ ಇದ್ದಂತೆ ಮೂಲ ಆಶಯದಲ್ಲಿದ್ದ ಸಂವಿಧಾನದ ವಿಧಿಗಳಲ್ಲಿ ಅನೇಕ ತಿದ್ದುಪಡಿಗಳಾಗಿದ್ದು ಮೂಲ ಆಶಯಕ್ಕೆ ವಿರೋಧವಾಗಿರುವ ಹಲವಾರು ಅಂಶಗಳು ಈಗ ಸೇರಿವೆ. ಕಳೆದ ಆಗಸ್ಟ್, 2015ರವರೆಗೆ ಬರೋಬ್ಬರಿ 100 ತಿದ್ದುಪಡಿಗಳನ್ನು ಸಂವಿಧಾನಕ್ಕೆ ತರಲಾಗಿದೆ. ತಿದ್ದುಪಡಿಗಳು ಜನಹಿತಕ್ಕೆ ಪೂರಕವಾಗಿದ್ದರೆ ಸ್ವಾಗತಾರ್ಹ. ಆದರೆ ಆಡಳಿತ ನಡೆಸುವವರ ಹಿತವೇ ಪ್ರಾಮುಖ್ಯವಾದ ತಿದ್ದುಪಡಿಗಳು ಸಂವಿಧಾನಕ್ಕೆ ಅಪಚಾರ ತರುತ್ತವೆ. ಉದಾಹರಣೆಗೆ ಹೇಳಬೇಕೆಂದರೆ 1975ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಭ್ರಷ್ಠಾಚಾರದ ಆರೋಪದ ಮೇಲೆ ಅಲಹಾಬಾದ್ ನ್ಯಾಯಾಲಯ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಅರ್ಹಗೊಳಿಸಿದಾಗ ಅಧಿಕಾರ ಉಳಿಸಿಕೊಳ್ಳಲು ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ನಿರರ್ಥಕಗೊಳಿಸಿದರು. ಈ ತಿದ್ದುಪಡಿಗೆ ಆಗ ಕಾಂಗ್ರೆಸ್ ಅಧಿಕಾರದಲ್ಲಿದ್ದ 17 ರಾಜ್ಯಗಳು ಬೆಂಬಲಿಸಿದವು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧ ಹೇರುವ ಅಂಶಗಳನ್ನು ಅಳವಡಿಸಲಾಯಿತು. ಇಂದು ಸಾಮಾಜಿಕ ಆರ್ಥಿಕ ಸಮಾನತೆ, ಜಾತ್ಯಾತೀತತೆ ಅನ್ನುವುದು ನಗೆಪಾಟಲಿನ ಸಂಗತಿಗಳಾಗಿವೆ. ಜಾತಿ, ಮತ, ಪಂಥ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡಬಾರದೆಂದಿದ್ದರೂ ಇಂದು ಎಲ್ಲವೂ ಜಾತಿ, ಮತ ಮತ್ತು ಧರ್ಮದ ಆಧಾರದಲ್ಲೇ ನಡೆಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. ಇರಲಿ ಬಿಡಿ.
     ಇದೇ ತಿಂಗಳು 12ನೆಯ ದಿನಾಂಕದಂದು ಸ್ವಾಮಿ ವಿವೇಕಾನಂದರ 153ನೆಯ ಜನ್ಮದಿನವನ್ನು ಆಚರಿಸಿದೆವು. ಒಳ್ಳೆಯ ಬದಲಾವಣೆಯನ್ನು ನಿರೀಕ್ಷಿಸುವ ಸಂಕ್ರಾಂತಿಯನ್ನು 15ನೆಯ ದಿನಾಂಕದಂದು ಆಚರಿಸಿದೆವು. ನಿಜಕ್ಕೂ ಭಾರತಕ್ಕೆ ಇದೊಂದು ಪರ್ವಕಾಲವಾಗಿದೆ, ಮಹತ್ವದ ಕಾಲಘಟ್ಟವಾಗಿದೆ. ಭಾರತ ವಿಶ್ವದ ಪ್ರಮುಖ ಶಕ್ತಿ ಆಗುವುದಕ್ಕೆ ಎಲ್ಲಾ ಅರ್ಹತೆ ಪಡೆದಿದ್ದರೂ ಅದನ್ನು ತಡೆಯುವಂತಹ ವಿದೇಶೀ ಶಕ್ತಿಗಳು ಮತ್ತು ನಮ್ಮ ನಡುವೆಯೇ ಇರುವ ವಿಚ್ಛಿದ್ರಕಾರಿ ಶಕ್ತಿಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿವೆ. ಇದನ್ನು ತಡೆಯಬೇಕಾದರೆ ನಮ್ಮ ನಿಮ್ಮ ಯೋಗದಾನವೂ ಈಗ ಅತ್ಯಂತ ಅಗತ್ಯವಾಗಿದೆ. ಪ್ರಪಂಚದ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯಿರುವ ದೊಡ್ಡ ಪ್ರಜಾಪ್ರಭುತ್ವವಾದಿ ದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾಸಂಸ್ಥೆಯ ಸದಸ್ಯತ್ವವಿಲ್ಲ. ಎಂತಹ ನಾಚಿಕೆಗೇಡು! ನಾವು ಮಾತ್ರ ಸಜ್ಜನ, ಸಂಭಾವಿತರಂತೆ 'ನಾವು ಯಾರ ತಂಟೆಗೂ ಹೋಗುವುದಿಲ್ಲ, ನಮ್ಮ ತಂಟೆಗೂ ಯಾರೂ ಬರುವುದು ಬೇಡ' ಎಂಬಂತೆ ಕುಳಿತುಕೊಂಡರೆ ಮುಂದೆ ಆಗುವ ಅಪಾಯಗಳನ್ನು ಎದುರಿಸಬೇಕಾದವರು, ಸಹಿಸಬೇಕಾದವರು ನಾವೇ ಎಂಬುದನ್ನು ಮರೆಯಬಾರದು. ನಾವು ಯಾರ ತಂಟೆಗೂ ಹೋಗದೇ ಇದ್ದರೂ ನಮ್ಮನ್ನು ಕೆಣಕುವ, ಅಪಮಾನಿಸುವ ಶಕ್ತಿಗಳು ಪ್ರಬಲವಾಗಿವೆ, ನಮ್ಮ ಸಹಜ ಸಹನೆಯ ಗುಣವನ್ನು ಹೇಡಿತನವೆಂಬಂತೆ ಬಿಂಬಿಸುವ ಘಟನೆಗಳು ನಡೆಯುತ್ತಿವೆ. 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತದ ಬಹುದೊಡ್ಡ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತು. ಆಗಿನ ಪ್ರಧಾನಿ ನೆಹರೂ 'ಅಲ್ಲಿ ಹುಲ್ಲೂ ಸಹ ಬೆಳೆಯುವುದಿಲ್ಲ, ಅದಕ್ಕಾಗಿ ಏಕೆ ಚಿಂತಿಸಬೇಕು?' ಎಂಬ ಹೇಳಿಕೆ ನೀಡಿದ್ದರು. ನೆರೆಯ ಪಾಕಿಸ್ತಾನ ಕಾಶ್ಮೀರದ ದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿದೆ. ಆಯಕಟ್ಟಿನ ಪ್ರದೇಶವನ್ನು ಚೀನಾಕ್ಕೆ ಧಾರೆ ಎರೆದಿದೆ. ಚೀನಾ ಈಗಲೂ ಸಹ ಭಾರತದ ಪ್ರದೇಶದ ಮೇಲೆ ಹತೋಟಿ ಸಾಧಿಸುವ ಪ್ರಯತ್ನ ನಡೆಸುತ್ತಲೇ ಇದೆ, ಯಶಸ್ವಿಯೂ ಆಗುತ್ತಿದೆ. ಜನರನ್ನು ಇಂತಹ ವಿಷಯಗಳಲ್ಲಿ ರಾಷ್ಟ್ರೀಯ ಹಾಗೃತಿ ಉಂಟು ಮಾಡಬೇಕಾದ ಮಾಧ್ಯಮಗಳು ಶಾರುಕ್ ಖಾನ್, ಅಮೀರ್ ಖಾನ್ ಮುಂತಾದ ಕಡೆಗೆ ಹೊರಳಿಸಿ ದಿಕ್ಕು ತಪ್ಪಿಸುತ್ತಿವೆ. ಮತಾಂತರಗಳಿಂದ ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಉತ್ತರ ಭಾರತದ ಏಳು ರಾಜ್ಯಗಳಲ್ಲಿ ಕ್ರೈಸ್ತ ಮತಾವಲಂಬಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರತ್ಯೇಕ ರಾಜ್ಯ, ದೇಶಗಳಾಗುವ ಹಂಬಲ ಹೊಂದಿವೆ. ಪಕ್ಕದ ಕೇರಳ ಮತ್ತು ಪಶ್ಚಿಮ ಬಂಗಾಳಗಳು ಹೊಸ ಕಾಶ್ಮೀರಗಳಾಗುವತ್ತ ದಾಪುಗಾಲಿಡುತ್ತಿವೆ. ಇದಕ್ಕೆ ಪೋಷಕರಾಗಿ, ಬೆಂಬಲವಾಗಿ ಜಾತ್ಯಾತೀತತೆಯ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷಗಳು ನಿಂತಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡುವೆಯೇ ಇದ್ದುಕೊಂಡು ನಮಗೇ ದ್ರೋಹ ಬಗೆಯುತ್ತಿರುವ ಮತಾಂಧರುಗಳು ಭಯೋತ್ಪಾದಕರುಗಳಿಗೆ ರಾಜಾರೋಷವಾಗಿ ಬೆಂಬಲ ಕೊಡುತ್ತಿದ್ದಾರೆ. 15 ನಿಮಿಷಗಳ ಕಾಲ ಪೋಲಿಸರು ಸುಮ್ಮನಿದ್ದರೆ 25 ಕೋಟಿ ಮುಸ್ಲಿಮರು 75 ಕೋಟಿ ಹಿಂದೂಗಳನ್ನು ಹೊಸಕಿಹಾಕಿಬಿಡುತ್ತಾರೆ ಎಂಬಂತಹ ಹೇಳಿಕೆಗಳನ್ನು ಬಹಿರಂಗವಾಗಿ ಹೇಳುವಷ್ಟು ಧಾರ್ಷ್ಟ್ಯ ಅವರಿಗೆ ಇದೆ. ಅವರು ನಮ್ಮ ಲೋಕಸಭಾ ಸದಸ್ಯರೂ ಆಗಿದ್ದಾರೆ ಎಂಬುದು ಆಘಾತಕಾರಿ ಸಂಗತಿಯಾಗಿದೆ. ಪ್ರಚೋದನಕಾರೀ ಭಾಷಣಕ್ಕಾಗಿ ಅವರನ್ನು ಬಂಧಿಸಿದಾಗ ಸಾವಿರಾರು ಜನ ಮತಾಂಧರು ಅವರ ಪರವಾಗಿ ಬೀದಿಗಿಳಿದು ಪ್ರತಿಭಟಿಸುತ್ತಾರೆ!
     ಇತಿಹಾಸದಿಂದ ನಾವು ಪಾಠ ಕಲಿಯುವುದೇ ಇಲ್ಲವೆನ್ನುವುದು ದೊಡ್ಡ ದುರಂತ. ಹಿಂದೆ ಪೃಥ್ವೀರಾಜನ ಏಳಿಗೆ ಸಹಿಸದ ನೆರೆಯ ರಾಜ ಜಯಚಂದ್ರ ಅವನ್ನು ಮಟ್ಟ ಹಾಕಬೇಕೆಂದು ಮಹಮದ್ ಘೋರಿಗೆ ಎಲ್ಲಾ ನೆರವು ನೀಡಿದ್ದ. ಪರಿಣಾಮ ಇಡೀ ಭಾರತ ಮುಂದಿನ ಎಂಟು ಶತಮಾನಗಳ ಮೊಘಲರ ಗುಲಾಮಗಿರಿಗೆ ಒಳಗಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ ಮಂತ್ರಿ ಮಣಿಶಂಕರ ಐಯರ್ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಟಿವಿಯಲ್ಲಿ ಸಂದರ್ಶನ ನೀಡುತ್ತಾ ಹೇಳುತ್ತಾರೆ: "ಮೋದಿಯರನ್ನು ಅಧಿಕಾರದಿಂದ ಇಳಿಸಲು ನಮಗೆ ಸಹಾಯ ಮಾಡಿ." ನಮ್ಮದೇ ಸರ್ಕಾರವನ್ನು, ಜನರಿಂದ ಆಯ್ಕೆಗೊಂಡ ಸರ್ಕಾರವನ್ನು, ಕೆಳಗಿಳಿಸಲು ಶತ್ರುರಾಷ್ಟ್ರದ ಸಹಕಾರ ಕೇಳುವ ಇಂತಹ ದೇಶದ್ರೋಹಿಗಳ ಸಂಖ್ಯೆ ಕಡಿಮೆಯೇನಲ್ಲ. ಜಯಚಂದ್ರನ ಸಂತತಿಯವರಾದ ಇವರಿಗೆ ಅಧಿಕಾರ ಮುಖ್ಯವೇ ಹೊರತು, ದೇಶದ ಹಿತ ಮುಖ್ಯವಲ್ಲ. ಅಧಿಕಾರಕ್ಕಾಗಿ ಯಾವ ಕೆಳಮಟ್ಟಕ್ಕೂ ಇವರು ಹೋಗಬಲ್ಲರು. ನಮ್ಮ ಕೆಲವು ಮಾಧ್ಯಮಗಳೂ ಸಹ ಹಣದ ಆಸೆಗೆ ಬಲಿಯಾಗಿ ದೇಶದ ಗೌರವಕ್ಕೆ ಧಕ್ಕೆ ತರುವಂತಹ ಸುಳ್ಳು ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಿರುವುದು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿರುವುದು ಎದ್ದು ಕಾಣುತ್ತಿದೆ.
     ಇಂತಹ ಸಂದರ್ಭದಲ್ಲಿ ಸಜ್ಜನಶಕ್ತಿಯನ್ನು ಜಾಗೃತಿಗೊಳಿಸುವ ಕೆಲಸವನ್ನು ನಾವು-ನೀವೇ ಮಾಡಬೇಕಿದೆ. ಈ ಕೆಲಸ ಈಗಲೇ ಆಗಬೇಕೆನ್ನುವುದಕ್ಕೆ ಮಹತ್ವದ ಕಾರಣವೂ ಇದೆ. ಭಾರತದಲ್ಲಿ ಈಗ ಯುವಜನರ ಸಂಖ್ಯೆ ಒಟ್ಟು ಜನಸಂಖ್ಯೆಯ 3/2 ರಷ್ಟಿದೆ. ಇನ್ನು 25 ವರ್ಷಗಳಲ್ಲಿ ಯುವಭಾರತ ವೃದ್ಧಭಾರತ ಆಗಿಬಿಡುತ್ತದೆ. ಆಗ ವೃದ್ಧರ ಸಂಖ್ಯೆಯೇ ಜಾಸ್ತಿಯಾಗಿರುತ್ತದೆ. ಆದ್ದರಿಂದ ಈಗ ಮಾಡದಿದ್ದರೆ ಮುಂದೆ ಮಾಡಲಾಗುವುದಿಲ್ಲ. ಒಂದು ವೇದಮಂತ್ರ ಹೇಳುತ್ತದೆ: ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.) 'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಕಾರ್ಯಪ್ರವೃತ್ತವಾಗುತ್ತವೋ, ಎಲ್ಲಿ ಸಜ್ಜನರಾದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ! ಆ ಶಕ್ತಿ ಈಗ ಒಟ್ಟಗೂಡಿ ಕೆಲಸ ಮಾಡುವಂತಹ ಪರ್ವಕಾಲ ಇದೇ ಆಗಿದೆ. ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ | ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ