ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಏಪ್ರಿಲ್ 8, 2018

ಪಾಠ ಮರೆತುಹೋಯಿತು!

     

     ಆ ಮಗು ಒಂದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವನ ಶಾಲೆಯ ಮಾಸ್ತರು ಬಸವಣ್ಣನವರ ವಿಚಾರ ಹೇಳುತ್ತಾ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಹೇಳಿದ್ದರು. ಶಾಲೆ ಮುಗಿಸಿ ಮರಳಿ ಬರುವಾಗ ಮಳೆ ಪ್ರಾರಂಭವಾದುದರಿಂದ ಒಂದು ಮನೆಯ ಮುಂಭಾಗದಲ್ಲಿ ನಿಂತಿತ್ತು. ಆಗ ಓಡಿ ಬಂದ ನಾಯಿಯೊಂದೂ ಸಹ ರಕ್ಷಣೆಗಾಗಿ ಅದೇ ಮನೆಯ ಬಳಿ ಬಂದು ನಿಂತಿತು. ಇವನು ನಿಂತಿದ್ದರಿಂದ ನಾಯಿಗೆ ಜಾಗ ಸಾಲದಾಗಿ ಅರ್ಧ ನೆನೆಯುತ್ತಿತ್ತು. ಮಗು ಯೋಚಿಸಿತು, "ನನಗಾದರೆ ಮನೆಯಿದೆ, ಬಟ್ಟೆಯಿದೆ. ಪಾಪ, ಈ ನಾಯಿಗೆ ಏನಿದೆ?" ನಾಯಿಗೆ ಜಾಗ ಬಿಟ್ಟು ನೆನೆದುಕೊಂಡೇ ಮನೆಗೆ ವಾಪಸು ಬಂದ ಮಗನನ್ನು ಕಂಡ ತಾಯಿಗೆ ನೆನೆದುಕೊಂಡು ಬಂದ ಕಾರಣ ತಿಳಿಸಿತು.ನೆನೆದಿದ್ದ ಮಗುವನ್ನು ಒರೆಸಿ ಬೇರೆ ಬಟ್ಟೆ ಹಾಕಿದ ತಾಯಿ ಮಗುವನ್ನು ಮುದ್ದಾಡಿದಳು. ವಿಷಯ ತಿಳಿದ ತಂದೆಯೂ ಖುಷಿಪಟ್ಟು ಮಗುವಿಗೆ ಹೊಸ ಬಟ್ಟೆ, ಚಾಕೊಲೇಟ್ ಕೊಡಿಸಿದ. ಕಾಲ ಸರಿಯಿತು, ಮಗು ದೊಡ್ಡದಾಗುತ್ತಾ ಹೋದಂತೆ ಆ ಮಾಸ್ತರ ಪಾಠ ಮರೆತುಹೋಗುತ್ತಾ ಒಂದೊಮ್ಮೆ ಪೂರ್ತಿ ಮರೆತೇಹೋಯಿತು.
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: