ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 8, 2011

ಮಂಕನ ಸಂಸಾರ


     ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು:
"ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರುತ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರ್ನ ಕಂಡು ಮೈ ಉರಿಯುತ್ತೆ". ಅವಳ ಗೆಳತಿ ನಗುತ್ತಿದ್ದರೆ, ಇವಳು ಪೇಪರ್ ಓದುತ್ತಾ ಕುಳಿತಿದ್ದ ಗಂಡನ ಕಡೆಗೆ ಕಿರು(ಕಡು)ನೋಟ ಬೀರಿದಳು. ಬೆಳಿಗ್ಗೆ ನಡೆದ ಮಾತಿನ ಚಕಮಕಿಯಿಂದ ಮುಖ ದಪ್ಪಗೆ ಮಾಡಿಕೊಂಡಿದ್ದ ಮಂಕನ ಮುಖ ಇನ್ನೂ ದಪ್ಪಗಾಯಿತು. ಅದೇ ಸಮಯಕ್ಕೆ ಪಕ್ಕದ್ಮನೆ ಗಿರಿಜಮ್ಮ ಬಂದವರು "ಮನೆಗೆ ನೆಂಟರು ಬಂದು ವಕ್ಕರಿಸಿಕೊಂಡಿದ್ದಾರೆ ಕಣ್ರೀ, ಹಾಲೆಲ್ಲಾ ಮುಗಿದಿದೆ. ಸಂಜೆ ತರಿಸಿ ಕೊಡ್ತೀನಿ, ಸ್ವಲ್ಪ ಹಾಲಿದ್ರೆ ಕೊಡಿ" ಎಂದವರು ಹದಿನೈದೇ ನಿಮಿಷ ಮಾತನಾಡಿದ್ದರು. ಅವರು ನಿಜವಾಗಿ ಗಂಡ ಕೊಡಿಸಿದ್ದ ಹೊಸ ಬಂಗಾರದ ಬಳೆ ತೋರಿಸಲು ಬಂದಿದ್ದು, ಹಾಲು ಒಂದು ನೆಪವಾಗಿತ್ತು. ಹೋಗುವಾಗ ಮಂಕನ ಹೆಂಡತಿಯಿಂದ "ನೀವು ಬಿಡ್ರಿ, ಗಿರಿಜಮ್ಮ, ಪುಣ್ಯವಂತರು. ನಿಮ್ಮ ಮನಸ್ಸಿನಲ್ಲಿ ಇರೋದನ್ನು ಅರ್ಥ ಮಾಡಿಕೊಳ್ಳೋ ಗಂಡನ್ನ ಪಡೆದಿದ್ದೀರಿ. ಎಲ್ಲರಿಗೂ ಆ ಪುಣ್ಯ ಇರಬೇಕಲ್ಲಾ" ಎಂಬ ಶಹಭಾಸಗಿರಿಯನ್ನೂ ಪಡೆದು ಹೋದರು. ತಿಂಡಿ ಆದ ಮೇಲೆ ಬಾಕಿಯಿದ್ದ ಕಾಫಿ ಸಲುವಾಗಿ ಕಾಯುತ್ತಲೇ ಇದ್ದ ಮಂಕನ ಮುಖ ಹೆಂಡತಿಯ ಪರೋಕ್ಷ ಕುಕ್ಕುಮಾತಿನಿಂದ ಮತ್ತಷ್ಟು ಕೆಂಪಡರಿತ್ತು.
     ಗೆಳತಿಯೊಂದಿಗೆ ಹರಟುತ್ತಾ ಪುರುಸೊತ್ತು ಮಾಡಿಕೊಂಡು ಕಾಫಿ ಮಾಡಿದ ಅವಳು ಗೆಳತಿಗೆ ಕೊಟ್ಟು ಗಂಡನ ಮುಂದೆಯೂ ಒಂದು ಲೋಟ ಕಾಫಿ ಕುಕ್ಕಿ ಪಿಸುಗುಟ್ಟಿದಳು: "ಉರಾ ಉರಾ ಅಂತಿರಬೇಡಿ. ಬಂದವರ ಎದುರಿಗಾದರೂ ನಗುನಗುತ್ತಾ ಇರಿ". ಮಂಕ ಮರುಮಾತಾಡದೆ ಅವಳನ್ನು ದುರುಗುಟ್ಟಿ ನೋಡುತ್ತಾ ಎದ್ದು ರೂಮಿಗೆ ಹೋದವನು ಕನ್ನಡಿಯಲ್ಲಿ ಮುಖ ನೋಡಿಕೊಂಡು ಬಲವಂತದ ನಗೆ ನಕ್ಕ. ಅವನ ಮುಖ ಅವನಿಗೇ ವಿಚಿತ್ರವಾಗಿ ಕಂಡಿತು. ಅದೇ ಸಮಯಕ್ಕೆ ಸ್ನೇಹಿತನನ್ನು ಹುಡುಕಿಕೊಂಡು ಮೂಢ ಅಲ್ಲಿಗೇ ಬರಬೇಕೇ! ಸ್ನೇಹಿತನನ್ನು ಕಂಡು ಮಂಕ ಇನ್ನಷ್ಟು ಚಿತ್ರವಿಚಿತ್ರವಾಗಿ ನಕ್ಕ!
*************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: