ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 18, 2011

ರಾಮಣ್ಣನ ತಪ್ಪು


     ರಾಮಣ್ಣ ದೂರದೂರಿನಲ್ಲಿದ್ದ ತನ್ನ ಹತ್ತಿರದ ಬಂಧು ಜಾನಕಪ್ಪನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ. ಯಾವುದೋ ಕಾರಣಕ್ಕೆ ಅವರ ನಡುವೆ ಸಂಬಂಧ ಅಷ್ಟೊಂದು ಸುಮಧುರವಾಗಿರಲಿಲ್ಲ. ಹಾಗೆಂದು ಅವರಲ್ಲಿ ಪರಸ್ಪರ ದ್ವೇಷವಿರಲಿಲ್ಲ. ಸಂಬಂಧ ಚೆನ್ನಾಗಿರಲು ಇತರ ಬಂಧುಗಳು ಬಿಡುತ್ತ್ತಿರಲಿಲ್ಲ. ರಾಮಣ್ಣ ಸಂಬಂಧ ಸರಿಪಡಿಸಲು ಮಾಡಿದ ಪ್ರಯತ್ನ ಈಡೇರುತ್ತಿರಲಿಲ್ಲ. ಈ ಕೊರಗು ಅವನನ್ನು ಕಾಡುತ್ತಲೇ ಇತ್ತು. ದೂರವಾಣಿಯಲ್ಲಿ ಮಾತನಾಡುತ್ತಿದ್ದಂತೆ ಅದೇ ಊರಿನಲ್ಲಿದ್ದ ರಾಮಣ್ಣನ ಅಣ್ಣ ತಮ್ಮಣ್ಣ ಜಾನಕಪ್ಪನ ಮನೆಗೆ ಬಂದ. ತಮ್ಮಣ್ಣ ಬಂದ ವಿಷಯ ತಿಳಿಸಿದ ಜಾನಕಪ್ಪ ಆಮೇಲೆ ಫೋನು ಮಾಡುವುದಾಗಿ ಹೇಳಿದ. ಸರಿ ಎಂದ ರಾಮಣ್ಣ ಫೋನು ಜೇಬಿನಲ್ಲಿಡಲು ಹೋದಾಗ ಜಾನಕಪ್ಪ ಮತ್ತು ತಮ್ಮಣ್ಣ ಮಾತನಾಡುತ್ತಿರುವುದು ಕೇಳಿಸಿತು. ಜಾನಕಪ್ಪ ಫೋನನ್ನು ಡಿಸ್ ಕನೆಕ್ಟ್ ಮಾಡಿರಲಿಲ್ಲವೆಂದು ತೋರುತ್ತದೆ. ತನ್ನ ಹೆಸರು ಪ್ರಸ್ತಾಪವಾಗಿದ್ದನ್ನು ಕೇಳಿದ ರಾಮಣ್ಣ ಫೋನನ್ನು ಜೇಬಿಗಿಡಲು ಹೋಗಿದ್ದವನು ಮತ್ತೆ ಕಿವಿಗಾನಿಸಿದ. ಅವರಿಬ್ಬರೂ ತನ್ನ ಬಗ್ಗೆ ದೂರುತ್ತಾ ಮಾತನಾಡುತ್ತಿದ್ದುದು ಕೇಳಿಸಿಕೊಂಡ. ತಾನು ಮಾಡದಿದ್ದುದನ್ನು ಮಾಡಿದ್ದೇನೆಂಬಂತೆ ಅವರಿಬ್ಬರೂ ಮಾತನಾಡುತ್ತಿದ್ದುದು ಅವನಿಗೆ ಬೇಸರ ತರಿಸಿತ್ತು. ತಾನು ಆರೀತಿ ಮಾಡದಿದ್ದುದು ಅವರಿಬ್ಬರಿಗೂ ಗೊತ್ತಿದ್ದರೂ ಹಾಗೆ ಮಾತನಾಡಿದ್ದು ಜಿಗುಪ್ಸೆ ತರಿಸಿತ್ತು. ಸ್ವಲ್ಪ ಹೊತ್ತು ಕೇಳಿ ರಾಮಣ್ಣನೇ ಫೋನನ್ನು ಡಿಸ್ ಕನೆಕ್ಟ್ ಮಾಡಿದ. ಎಷ್ಟೋ ಹೊತ್ತಿನ ನಂತರ ರಾಮಣ್ಣ ತಮ್ಮಣ್ಣನಿಗೆ ನೀವಿಬ್ಬರೂ ಮಾತನಾಡಿದ ವಿಷಯ ತನಗೆ ಗೊತ್ತಾಯಿತು ಎಂಬ ಸಂಗತಿ ಹೇಳಿದಾಗ  ತಮ್ಮಣ್ಣ ಕೂಗಾಡಿದ. ಇಬ್ಬರು ಮಾತನಾಡುತ್ತಿದ್ದಾಗ ಅದನ್ನು ಕದ್ದು ಕೇಳಿದ ನಡವಳಿಕೆ ಎಷ್ಟರ ಮಟ್ಟಿಗೆ ಸರಿ ಎಂದ, ಅನ್ ಡ್ಯೂ ಅಡ್ವಾಂಟೇಜ್ ಪಡೆದುಕೊಂಡೆಯೆಂದು ದೂಷಿಸಿದ. ಅವನ ಹತ್ತಿರ ಮಾತನಾಡಿ ಪ್ರಯೋಜನವಿಲ್ಲವೆಂದು ರಾಮಣ್ಣ ಸುಮ್ಮನಾದರೂ ತಮ್ಮಣ್ಣ ತಮ್ಮ ಮಾತನ್ನು ಕದ್ದು ಕೇಳಿದ ರಾಮಣ್ಣನ ಬಗ್ಗೆ ಅಪಪ್ರಚಾರಕ್ಕೆ ತೊಡಗಿದ. ಯಾರೇ ಆಗಲಿ, ಯಾರಾದರೂ ತನ್ನ ಬೆನ್ನ ಹಿಂದೆ ತನ್ನ ವಿರುದ್ಧ ಮಾತನಾಡುತ್ತಿರುವ ವಿಷಯ ಕಿವಿಗೆ ಬಿದ್ದರೆ ಅದನ್ನು ಕೇಳಿಸಿಕೊಳ್ಳುವುದು ತಪ್ಪು ಎಂದು ತಿಳಿದು ಸುಮ್ಮನೆ ಹೋಗುತ್ತಾರೆಯೇ, ಅಥವಾ ಕೇಳಿಸಿಕೊಳ್ಳುತ್ತಾರೆಯೇ, ಬೇರೆಯವರ ವಿಷಯವಾದರೆ ಕೇಳಿಸಿಕೊಳ್ಳುವುದು ಸರಿಯಲ್ಲ ಆದರೆ ತನ್ನ ಬಗ್ಗೆಯೇ ಮಾತನಾಡುತ್ತಿದ್ದರೆ ಕೇಳಿಸಿಕೊಳ್ಳದೇ ಇರುತ್ತಾರೆಯೇ ಎಂಬ ಸಾಮಾನ್ಯ ಸಂಗತಿ ತಮ್ಮಣ್ಣನಿಗೆ ತಿಳಿಯದೇ ಹೋಯಿತಲ್ಲಾ ಎಂದು ರಾಮಣ್ಣ ನೊಂದುಕೊಂಡ.
*********************************

2 ಕಾಮೆಂಟ್‌ಗಳು: