ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 26, 2011

ಭಾವಕಟ್ಟು




       ಅಣೆಕಟ್ಟಿನಲ್ಲಿ ನೀರಿದೆ. ಒಳಹರಿವು ಹೆಚ್ಚಾದಂತೆ ನೀರನ್ನು ಕ್ರೆಸ್ಟ್ ಗೇಟ್ ತೆರೆದು ಹೊರಬಿಡಲಾಗುತ್ತದೆ. ನೀರನ್ನು ಹೊರಬಿಡದೆಹೋದರೆ? ಅಣೆಕಟ್ಟು ತುಂಬಿ ಹೆಚ್ಚಾದ ನೀರು ಹೊರಬರುತ್ತದೆ. ನೀರಿನ ದಬ್ಬುವ ಶಕ್ತಿ ಒಳಹರಿವು ಹೆಚ್ಚಾದಂತೆ ಹೆಚ್ಚುತ್ತಾ ಹೋಗಿ ಅಣೆಕಟ್ಟಿಗೆ ಅಪಾಯವಾಗಬಹುದು. ಭೂಕಂಪ, ಪ್ರಕೃತಿ ವಿಕೋಪ, ಮಾನವ ನಿರ್ಮಿತ ಅನಾಹುತ, ಇತ್ಯಾದಿ ಯಾವುದೇ ಕಾರಣಕ್ಕೆ ಅಣೆಕಟ್ಟು ಒಡೆದರೆ? ಆಗ ಆಗುವ ನಷ್ಡ ಅಗಾಧ. ಮಾನವನ ಮನಸ್ಸನ್ನೂ ಅಣೆಕಟ್ಟು ಇರುವ ಜಲಾಶ್ರಯಕ್ಕೆ ಹೋಲಿಸಬಹುದು. ನೀರಿನ ಬದಲಿಗೆ ಅಲ್ಲಿ ಭಾವನೆಗಳು ಇರುತ್ತದೆ. ಭಾವನೆಗಳು ಮಡುಗಟ್ಟಲು ಬಿಟ್ಟರೆ ಅನಾಹುತ ತಪ್ಪಿದ್ದಲ್ಲ. ಅಣೆಕಟ್ಟಿನಿಂದ ನೀರನ್ನು ಅಗತ್ಯ ಪ್ರಮಾಣದಲ್ಲಿ ಹೊರಬಿಡುತ್ತಾ ಹೋದರೆ ಒಳ್ಳೆಯ ಬೆಳೆ ಬೆಳೆಯಲು ಉಪಯೋಗವಾಗುತ್ತದೆ. ಅದೇ ರೀತಿ ಭಾವನೆಗಳನ್ನು ಸೂಕ್ತ ರೀತಿಯಲ್ಲಿ ಹೊರಹಾಕಿದರೆ ಒಳ್ಳೆಯ ಪರಿಣಾಮ ಕಾಣಬಹುದು. ಅವಮಾನ, ಅಸಹಾಯಕತೆ, ಸಿಟ್ಟು, ಈಡೇರದ ಬಯಕೆ, ಹಗೆತನ, ಹೊಟ್ಟೆಕಿಚ್ಚು, ಇತ್ಯಾದಿ ಕಾರಣಗಳಿಂದ ಉಂಟಾಗುವ ಭಾವನೆಗಳ ಹೊಯ್ದಾಟದ ಭಾರಕ್ಕೆ ಸೋತು ಮನಸ್ಸು ಸ್ಪೋಟಿಸಿದರೆ ಅದರಿಂದ ಹಾನಿ ನಿಶ್ಚಿತ. ಅಂತಹ ಸಂದರ್ಭಗಳಲ್ಲಿ ತಕ್ಷಣಕ್ಕೆ ಪ್ರತಿಕ್ರಿಯಿಸದೆ ಮೌನವಾಗಿದ್ದು, ತನ್ನ ಮಾತಿನಿಂದ ಆಗಬಹುದಾದ ಪರಿಣಾಮಗಳನ್ನು ಕುರಿತು ನಿಧಾನವಾಗಿ ಯೋಚಿಸಿ, ಸಮಯ, ಸಂದರ್ಭ ಅನುಸರಿಸಿ ನಿಧಾನವಾಗಿ  ಭಾವನೆಗಳನ್ನು ಹೊರಬಿಟ್ಟಲ್ಲಿ ಒಳ್ಳೆಯದಾಗುತ್ತದೆ.ನಾವೂ ಈ ಭಾವಕಟ್ಟು ನಿರ್ಮಿಸಿಕೊಳ್ಳೋಣವೇ?
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ