ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 1, 2011

ಮೂಢ ಉವಾಚ - 63

ಮಂತ್ರ ಪಠಿಸಿದೊಡೇನು ಅರ್ಥವನರಿಯದೆ
ಜಪವ ಮಾಡಿದೊಡೇನು ಒಳತುಡಿತವಿರದೆ |
ವಿಚಾರವಿರದಾಚಾರದ ಬದುಕು ಬದುಕೆ
ಕಾರ್ಯದಲರ್ಥವಿರಲು ಬೆಳಕು ಮೂಢ ||


ಕಣ್ಮುಚ್ಚಿ ಮಣಮಣಿಸೆ ಜಪವೆನಿಸುವುದೆ
ಒಳಗಣ್ಣು ತೆರೆದು ಧ್ಯಾನಿಪುದೆ ಜಪವು |
ಮಡಿ ಮೈಲಿಗೆಯೆಂದು ಪರದಾಡಿದೊಡೇನು
ಮನಶುದ್ಧಿಯಿಲ್ಲದಿರೆ ವ್ಯರ್ಥ ಮೂಢ ||

ಪೂಜೆ ಮಾಡಿದೊಡೆ ಪಾಪ ಹೋಗುವುದೆ
ತನುಶುಚಿಯಾಗಿರಲು ಮನಶುಚಿಯಾಗುವುದೆ |
ಪಾಪ ಪುಣ್ಯಗಳ ಕೊಡುವವನು ಅವನಲ್ಲ
ನಿನ್ನ ನೀನರಿಯದಿರೆ ಫಲವಿಲ್ಲ ಮೂಢ ||


ಕಲಿವ ಶ್ರಮವಿರದೆ ಅರಿವು ಬಂದೀತೆ
ಇರುವಲ್ಲೆ ನಿಂತಿರಲು ದಾರಿ ಸವೆದೀತೆ |
ಆರಂಭವದು ವಿಷ ಅಂತ್ಯದಲಿ ಅಮೃತವು
ಪರಮಪದಕಾಗಿ ಪರಿತಪಿಸು ಮೂಢ ||
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: