ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 2, 2011

ಮೂಢ ಉವಾಚ - 64

ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಸಿಗದೆಂದು ಕೊರಗದಿರು |
ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ
ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||


ದೇವ ಸುಜನ ಗುರು ಹಿರಿಯರಲಿ ಶ್ರದ್ಧೆ
ತನು ಶುದ್ಧಿ ಜೊತೆಜೊತೆಗೆ ಮನ ಶುದ್ಧಿ |
ನೇರ ನಡೆ ನುಡಿಯು ತ್ರಿಕರಣದಲಿರಲು
ಪರಮಪದಕಿದಕಿಂತ ತಪವುಂಟೆ ಮೂಢ ||


ದಂಡವಿಡುವುದು ಕುಜನರನು ಅಂಕೆಯಲಿ
ನ್ಯಾಯನೀತಿಗಳು ಗೆಲಿಪುವುವು ವಾದದಲಿ |
ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ
ಬದುಕ ಗೆಲಿಪುವುದು ಜ್ಞಾನ ಮೂಢ ||


ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: