ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 11, 2011

ಮೂಢ ಉವಾಚ - 65


ರಾಗರಹಿತ ಮನ ದೀಪದ ಕಂಬವಾಗಿ 
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹದೆ ಮೂಢ ||


ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ 
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||


ಸಾತ್ವಿಕತೆಯಿಂದ ಜ್ಞಾನ ಶಾಂತಿ ಆನಂದ
ರಾಜಸಿಕ ಪಡೆಯುವನು ಆಯಾಸ ನೋವ |
ಪರರ ನೋಯಿಪ ತಾಮಸವೆ ಅಜ್ಞಾನ
ಹಿತವದಾವುದೀ ಮೂರರಲಿ ಮೂಢ ||


ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ
ಮೊದಲು ಕಾಯಕದ ಅರಿವು ಇರಬೇಕು  | 
ಬಿಡದಿರಬೇಕು ಗುರಿಯ ಸಾಧಿಪ ಛಲವ 
ಯೋಗ ಭೋಗಸಿದ್ಧಿಗಿದುವೆ ದಾರಿ ಮೂಢ ||
**************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: