ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 15, 2011

ಮೂಢ ಉವಾಚ - 66


ವಿಷವಿರುವವರೆಗೆ ಆರೋಗ್ಯವೆಲ್ಲಿ
ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ |
ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ
ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ ||


ಶ್ರವಣಕೆ ಶತಪಾಲು ಮಿಗಿಲು ಮನನ
ಮನನಕೆ ಶತಪಾಲು ಮಿಗಿಲನುಸರಣ |
ಅನುಸರಣಕಿಂ ಮಿಗಿಲಲ್ತೆ ನಿರ್ವಿಕಲ್ಪ
ನಿರ್ವಿಕಲ್ಪತೆಯಿಂ ಅರಿವು ಮೂಢ ||


ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಕೆನ್ನಾಲಿಗೆಯ ತಣಿಪುದೆಂತೋ ಮೂಢ||


ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು 
ನಾಲಿಗೆಯೆರಡಲಗಿನ ಕಠಾರಿ ಮೂಢ|| 

***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: