ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಆಗಸ್ಟ್ 20, 2011

ಧೊಂಡಿಯ ವಾಘನ ಖಡ್ಗ

     ಭಾರತ ಆಂಗ್ಲರ ಗುಲಾಮಗಿರಿಗೆ ಒಳಗಾಗಿದ್ದ ಕಾಲದ ಘಟನೆಯಿದು. ಕರ್ನಾಟಕವೂ ಸಹ  ಆಂಗ್ಲರ ಆಡಳಿತಕ್ಕೆ ಅಷ್ಟು ಸುಲಭವಾಗಿ ಪ್ರತಿರೋಧವಿಲ್ಲದೆ ಒಳಪಟ್ಟಿರಲಿಲ್ಲ. ಇಂತಹ ಪ್ರತಿರೋಧ ಒಡ್ಡಿ ಬ್ರಿಟಿಷರ ನಿದ್ದೆಗೆಡಿಸಿದವರಲ್ಲಿ ಧೊಂಡಿಯ ವಾಘ್ ಸ್ಮರಿಸಬೇಕಾದ ಹೆಸರು. ಹಿಂದಿನ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿರುವ ಚನ್ನಗಿರಿಯವನು ಧೊಂಡಿಯವಾಘ. ಕಟ್ಟುಮಸ್ತಾದ ದೇಹಧಾರ್ಢ್ಯ ಹೊಂದಿದ್ದ ಇವನು ೧೭೯೪ರಲ್ಲಿ ಟಿಪ್ಪುಸುಲ್ತಾನನ ಸೈನ್ಯಕ್ಕೆ ಸೇರಿದ. ಪರಧರ್ಮಸಹಿಷ್ಣು ಎಂದು ಬಣ್ಣಿಸಲಾಗುತ್ತಿರುವ ಮೈಸೂರು ಹುಲಿ ಟಿಪ್ಪುಸುಲ್ತಾನ್ ಇವನನ್ನು ಮುಸ್ಲಿಮನಾಗಿ ಮತಾಂತರ ಹೊಂದಲು ಒತ್ತಾಯಿಸಿದರೂ, ಪ್ರಲೋಭನೆಗಳನ್ನು ಒಡ್ಡಿದರೂ ಒಪ್ಪದ ಇವನನ್ನು ಬಲವಂತವಾಗಿ ಮತಾಂತರಿಸಲಾಯಿತು. ಆದರೂ ಸ್ವಧರ್ಮ ಬಿಡಲು ಒಪ್ಪದ ಇವನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿರಿಸಿದರು. ಟಿಪ್ಪು ಹತನಾಗುವವರೆಗೆ ಅಂದರೆ ೧೭೯೯ರವರೆಗೆ ಸೆರೆಮನೆಯಲ್ಲೇ ಸುಮಾರು ೫ ವರ್ಷಗಳ ಕಾಲ ಕಳೆದಿದ್ದ ಧೊಂಡಿಯ ನಂತರ ಅಲ್ಲಿಂದ ಪಾರಾಗಿ ಬಿದನೂರಿಗೆ ಬಂದು ತನ್ನದೇ ಒಂದು ಸೈನ್ಯ ಕಟ್ಟಿದ. ನೌಕರಿಯಿಂದ ತೆಗೆಯಲ್ಪಟ್ಟ ಸ್ವಾಭಿಮಾನಿ ನೌಕರರು, ಸೈನಿಕರು, ಬ್ರಿಟಿಷರ ಆಳ್ವಿಕೆಯಿಂದ ಬೇಸರಗೊಂಡಿದ್ದ ಯುವಕರು ಅವನೊಂದಿಗೆ ಸೇರಿಕೊಂಡರು. 
     ಬಿದನೂರು - ಶಿಕಾರಿಪುರ ಪ್ರದೇಶದಿಂದ ೧೮೦೦ರ ಸುಮಾರಿನಲ್ಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ಇವನೊಂದಿಗೆ ಸುತ್ತಮುತ್ತಲಿನ ರಾಜರುಗಳು ಕೈಜೋಡಿಸಿದ್ದರು. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್‌ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು. ಧೊಂಡಿಯ ವಾಘ್‌ನನ್ನು ಮಣಿಸುವುದು ಆಂಗ್ಲರಿಗೆ ಸುಲಭವಾಗಿರಲಿಲ್ಲ. ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ  ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದೊಮ್ಮೆ ಈರೀತಿಯ ಹೋರಾಟ ಮಾಡಿದ ಸಂದರ್ಭದಲ್ಲಿ ಆಂಗ್ಲ ಸೈನಿಕರಿಂದ ತಪ್ಪಿಸಿಕೊಳ್ಳಲು ಹರಿಯುತ್ತಿದ್ದ ದೊಡ್ಡ ಹಳ್ಳವನ್ನು ತನ್ನ ಕುದುರೆಯನ್ನು ಹುರಿದುಂಬಿಸಿ ಹಾರಿಸಿದ ಧೀರನವನು. ಇಂತಹುದೇ ಮತ್ತೊಂದು ಸಂದರ್ಭದಲ್ಲಿ ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆಂಜನೇಯ)  ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದು, ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ಧೊಂಡಿಯ ವಾಘ.
                                      ಧೊಂಡಿಯವಾಘನ ಖಡ್ಗ
     'ಎರಡು ಲೋಕಗಳ ಒಡೆಯ' ಎಂಬ ಬಿರುದು ಸಂಪಾದಿಸಿದ್ದ ಹುಲಿಯಂತೆಯೇ (ವಾಘ್ = ಹುಲಿ) ಹೋರಾಡಿದ ಅವನನ್ನು   ಆಂಗ್ಲರು ಶಿವಮೊಗ್ಗದ ಸಮೀಪ ಸುತ್ತುವರೆದಾಗ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕಕ್ಕೆ ಹೋದಾಗ ಮರಾಠಾ ಸೇನಾಪತಿ ಗೋಖಲೆಯಿಂದಲೂ ಪ್ರತಿರೋಧ ಎದುರಿಸಬೇಕಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡು ಜೂನ್, ೧೮೦೦ರಲ್ಲಿ ತುಂಗಭದ್ರಾ - ಮಲಪ್ರಭಾ ನದಿಗಳ ನಡುವಿನ ಪ್ರದೇಶಕ್ಕೆ ಬಂದ ಇವನು ನಂತರದಲ್ಲಿ ಹೊಂಚು ಹಾಕಿ ೧೦೦೦೦ ಕುದುರೆ ಸವಾರರು, ೫೦೦೦ ಕಾಲ್ದಳ, ೮ಫಿರಂಗಿಗಳನ್ನು ಹೊಂದಿದ್ದ ಪ್ರಬಲ ಮರಾಠಾ ಸರದಾರ ಗೋಖಲೆಯನ್ನು ಎದುರಿಸಿ ಕೊಂದುಹಾಕಿದ್ದು ಆತನ ಧೈರ್ಯದ ಪ್ರತೀಕವೇ ಸರಿ. ಲಾರ್ಡ್ ವೆಲ್ಲೆಸ್ಲಿ ಧೊಂಡಿಯನನ್ನು ಮಲಪ್ರಭಾ ಬಲದಂಡೆಯ ಸಮೀಪಕ್ಕೂ ಬಂದು ಬೆನ್ನಟ್ಟಿದಾಗ ತನ್ನ ಸಾಮಗ್ರಿಗಳು, ಆನೆಗಳು, ಕುದುರೆಗಳನ್ನು ಬಿಟ್ಟು ಪುನಃ ತಪ್ಪಿಸಿಕೊಂಡು ಶಿರಹಟ್ಟಿಗೆ ಬಂದ. ನಿಜಾಮನ ಸೀಮೆ ತಲುಪಿದ ಇವನನ್ನು ಅಲ್ಲಿಯೂ ಬೆನ್ನಟ್ಟಿದ ಆಂಗ್ಲರು ಕೋಣಗಲ್ಲು ಎಂಬಲ್ಲಿ ಸುತ್ತುಗಟ್ಟಿದಾಗ ಧೊಂಡಿಯವಾಘ ೧೦-೦೯-೧೮೦೦ರಲ್ಲಿ ವೀರಮರಣ ಹೊಂದಿದ. ಅವಕಾಶ ಸಿಕ್ಕಿದ್ದರೆ ಧೊಂಡಿಯವಾಘ ಎರಡನೆಯ ಹ್ಶೆದರಾಲಿ ಆಗುತ್ತಿದ್ದ ಎಂಬುದು ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್ ಥಾರ‍್ನ್‌ಟನ್ನನ ಉದ್ಗಾರ. ಕುಟಿಲತೆಗೆ ಹೆಸರಾದ ಬ್ರಿಟಿಷರು ಕೇವಲ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದಿಂದ ಬೆದರಿ ದೇಶ ಬಿಟ್ಟು ಹೋದರು ಎಂಬುದು ಸರಿಯಲ್ಲ ಮತ್ತು ವಾಸ್ತವತೆಗೆ ಮಾಡಿದ ಅಪಚಾರವಾಗುತ್ತದೆ.  ಧೊಂಡಿಯವಾಘನಂತಹ ಅಸಂಖ್ಯಾತ ಹೋರಾಟಗಾರರ ಪಾಲು ಮಹತ್ವದ್ದಾಗಿದ್ದು  ಅವರೆಲ್ಲರ ಸಾಮೂಹಿಕ ಹೋರಾಟದ ಫಲವೇ ಸ್ವಾತಂತ್ರ್ಯ. ಅಂತಹವರನ್ನು ಗುರುತಿಸಿ ಗೌರವಿಸುವುದು, ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 
                             
   ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯ
     ಧೊಂಡಿಯವಾಘ್ ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ಅರ್ಪಿಸಿದ್ದ ಖಡ್ಗ ಈಗಲೂ ದೇವಾಲಯದಲ್ಲಿದೆ. ವಿಜಯದಶಮಿಯಂದು ಈ ಖಡ್ಗದಿಂದಲೇ ಬನ್ನಿ ಕಡಿಯುವ ಸೌಭಾಗ್ಯ ಶಿಕಾರಿಪುರದ ತಾಲ್ಲೂಕು ದಂಡಾಧಿಕಾರಿಯವರಿಗೆ ಸಿಗುತ್ತದೆ. ಎರಡು ವರ್ಷಗಳು ಈ ಖಡ್ಗವನ್ನು ಹಿಡಿಯುವ ಮತ್ತು ಬನ್ನಿ ಕಡಿಯುವ ಪುಣ್ಯ ನನಗೆ ಸಿಕ್ಕಿತ್ತು. ಬ್ರಿಟಿಷರನ್ನು ನಡುಗಿಸಿದ ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ. 
*************************
-ಕ.ವೆಂ.ನಾಗರಾಜ್. 
(ಆಧಾರ: ಜ್ಞಾನಗಂಗೋತ್ರಿ -ಕಿರಿಯರ ವಿಶ್ವಕೋಶ-ಸಂಪುಟ-೭)


3 ಕಾಮೆಂಟ್‌ಗಳು:

  1. ಎಷ್ಟೋ ಜನ ಸ್ವಾತಂತ್ರ್ಯ ಹೋರಾಟಗಾರರು ಇದೆ ರೀತಿ ಇತಿಹಾಸದ ಪುಟಗಳಿಂದ ಕಾಣೆಯಾಗಿದ್ದು ವಿಷಾದದ ಸಂಗತಿ....ನಾವು ಕೆಲವು ಪ್ರಮುಖ ವ್ಯಕ್ತಿಗಳನ್ನು ಮಾತ್ರ ನೆನಪಿಸಿಕೊಳ್ಳುತ್ತೇವೆ. ಧೊಂಡಿಯ ವಾಘ್ ನಂತವರನ್ನು ಮರೆತು ಬಿಟ್ಟಿದ್ದೇವೆ.....ನಾನು ಯಾವತ್ತು ಇವರ ಬಗ್ಗೆ ಎಲ್ಲೂ ಓದಿಲ್ಲ. ಧನ್ಯವಾದಗಳು ಸರ್....

    ಪ್ರತ್ಯುತ್ತರಅಳಿಸಿ
  2. ಅಶೋಕರೇ, ನನಗೂ ಮೊದಲು ಗೊತ್ತಿರಲಿಲ್ಲ. ಶಿಕಾರಿಪುರಕ್ಕೆ ತಹಸೀಲ್ದಾರನಾಗಿ ಹೋದಾಗ ವಿಷಯ ತಿಳಿಯಿತು. ನಂತರ ಮಾಹಿತಿಯನ್ನು ಹುಡುಕಿ ಸಂಗ್ರಹಿಸಿದೆ.

    ಪ್ರತ್ಯುತ್ತರಅಳಿಸಿ
  3. 'ಸಂಪದ'ದಲ್ಲೂ ಈ ಲೇಖನ ಪ್ರಕಟಿಸಿದ್ದು ಬಂದ ಚೇತೋಹಾರಿ ಪ್ರತಿಕ್ರಿಯೆಗಳಿವು:
    ಸತೀಶ ಎನ್:20AUG20113:21
    ಉತ್ತಮ ಮಾಹಿತಿ, ಧೋಂಡಿಯಾ ವಾಘ್ ನಂತ ಎಷ್ಟೋ ಜನರ ಹೋರಾಟದ ಪಲವೇ ಈ ಸ್ವಾತಂತ್ರ್ಯ ಆದರೆ ಗಾಂದೀಜಿಗೆ ಮಾತ್ರ ಹೆಸರು ಬಂದಿದೆ ಇದು ವಾಸ್ತವ, ಹಾಗೆ ಶ್ರೀ ಆಂಜನೇಯನ ಮೂರ್ತಿ ಸುಂದರವಾಗಿದೆ ಮಾಹಿತಗಾಗಿ ಹಾಗೂ ಶ್ರೀ ಆಂಜನೇಯನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು
    **
    ನಾರಾಯಣ ಭಾಗ್ವತ 20AUG20116:23
    ಕವಿನಾಗರಾಜರವರೆ,
    ಮಾಹಿತಿಪೂರ್ಣ ಲೇಖನ. ಧನ್ಯವಾದಗಳು.
    **
    ಜಯಂತ್ ರಾಮಾಚಾರ್ 21AUG2011 8:52
    ನಾಗರಾಜ್ ಅವರೇ ಉತ್ತಮ ಮಾಹಿತಿಗೆ ಧನ್ಯವಾದಗಳು.
    **
    ಗಣೇಶ 21AUG2011 8:45
    ಕವಿನಾಗರಾಜರೆ,
    ಧೊಂಡಿಯ ವಾಘನ ಖಡ್ಗದ ಚಿತ್ರ ನೋಡಿಯೇ ಮೈನವಿರೇಳಿತು.
    ಈ ಹುಲಿಯ ವಿವರ ನೀಡಿದ್ದಕ್ಕೆ ಧನ್ಯವಾದಗಳು.
    -ಗಣೇಶ.
    **
    ಶ್ರೀಧರ್ ಬಂಡ್ರಿ 22AUG2011 9:48
    ಧೊಂಡಿಯ ವಾಘ್ ಒಬ್ಬ ವೀರ ಸೇನಾನಿ ಎಂಬ ಅಲ್ಪ-ಸ್ವಲ್ಪ ಮಾಹಿತಿ ಬಿಟ್ಟರೆ ಅವನ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ನಿಮ್ಮ ಮಾಹಿತಿಯುಕ್ತ ಲೇಖನದಿಂದ ಹೆಚ್ಚಿನ ವಿವರ ತಿಳಿದಂತಾಯಿತು, ಧನ್ಯವಾದಗಳು, ಕವಿ ನಾಗರಾಜ್‍ ಅವರೇ. ಧೊಂಡಿಯಾ ವಾಘ್ ಶಿರಹಟ್ಟಿಗೆ ಬಂದು ನಿಜಾಮನ ಸೀಮೆ ಸೇರಿಕೊಂಡರೂ ಬ್ರಿಟೀಷರು ಅವನನ್ನು ಬಿಡಲಿಲ್ಲ ಎಂದು ತಿಳಿಸಿದ್ದೀರಿ. ನಿಜಾಮರೆಂದರೆ ಹೈದರಾಬಾದಿನ ಖುತುಬ್ ಷಾಹಿಗಳನ್ನು ಮಾತ್ರ ಆ ಹೆಸರಿನಿಂದ ಗುರುತಿಸುತ್ತಾರೆ. ಮತ್ತು ಅವರ ಸೀಮೆ ಈಗಿನ ಕೊಪ್ಪಳ ಜಿಲ್ಲೆಯಿಂದ ಒಡಗೂಡಿದ ರಾಯಚೂರು ಸೀಮೆಯಾಕಡೆಗಿತ್ತು. ಬಹುಶಃ ನೀವು ಇಲ್ಲಿ ಉಲ್ಲೇಖಿಸಿರುವುದು ಸವಣೂರಿನ ನವಾಬನ ಪ್ರಾಂತವೆಂದುಕೊಳ್ಳುತ್ತೇನೆ?!
    **
    ಹೊಳೆ ನರಸೀಪುರ ಮಂಜುನಾಥ 22AUG2011 9:56
    ಕವಿ ನಾಗರಾಜರೆ, ಅಣ್ಣಾ ಹಜಾರೆ ಹಚ್ಚಿರುವ ಸ್ವಾಭಿಮಾನದ ಕಿಡಿ ದೇಶಾದ್ಯ೦ತ ಹೊತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಧೊ೦ಡಿಯ ವಾಘ್ ಅ೦ತಹ ಸ್ವಾತ೦ತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಅದೆಷ್ಟೋ ಎಲೆ ಮರೆಯ ಕಾಯಿಗಳನ್ನು ನೆನಪಿಸಿಕೊಳ್ಳಬೇಕಾದ್ದು ಎಲ್ಲ ಭಾರತೀಯರ ಕರ್ತವ್ಯ. ನಿಜಕ್ಕೂ ಸಮಯೋಚಿತ ಲೇಖನ, ಒ೦ದು ಪ್ರಶ್ನೆ, ಆ ಕತ್ತಿಯೇ ಅಷ್ಟು ದೊಡ್ಡದಾಗಿದೆಯಲ್ಲ, ಅದನ್ನು ಹಿಡಿದು ಹೋರಾಟ ಮಾಡುತ್ತಿದ್ದ ವಾಘ್, ಅದಿನ್ನೆಷ್ಟು ಆಜಾನುಬಾಹುವಾಗಿದ್ದಿರಬೇಕು?
    **
    RAMAMOHANA.N 22AUG2011 10:29
    ಮುಂದಿನ ನಮ್ಮ ಜಾನಾಂಗಕ್ಕೆ ಉಪಯುಕ್ತ ಮಾಹಿತಿ.
    ಎಷ್ಟೊ ವಿಷಯಗಳನ್ನು ತಿರುಚಿ ಬರೆಸುವುದಲ್ಲದೆ, ಅನೇಕ ಮಾಹಿತಿಗಳನ್ನು ಮರೆ ಮಾಚಿದ್ದಾರೆ ಈಗಿನ ನಾಯಕರುಗಳು..
    ತಾವು ನೀಡಿದ ಈ ಮಾಹಿತಿ ಅತ್ಯಮೂಲ್ಯ. ಧನ್ಯವಾದಗಳು ನಾಗರಾಜ್ ಸಾರ್.
    -ರಾಮಮೋಹನ
    **
    ಪಾರ್ಥಸಾರಥಿ 22AUG2011 12:15
    ಕವಿನಾಗರಾಜರೆ
    ಪ್ರಸಕ್ತ ’ಜೋಗಯ್ಯ’ ನ ಅಲೆಯಲ್ಲಿ , ಕತ್ತಿ ಹಿರಿದು ನಿಂತ ನಿಮ್ಮ ಎದುರಿಗೆ ಬರಲು ಭಯ ಎನಿಸಿತ್ತದೆ :-))))))ಉತ್ತಮ ವಿವರಣೆಯ ಲೇಖನ
    -ಪಾರ್ಥಸಾರಥಿ
    ***

    ಪ್ರತ್ಯುತ್ತರಅಳಿಸಿ