ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಆಗಸ್ಟ್ 24, 2011

ಕೆಳದಿ ಕವಿಮನೆತನ: ಬೇರು ಶೋಧಿಸಲು ಹೊರಟ ಚಿಗುರುಗಳು

ಕೆಳದಿ ಕವಿಮನೆತನ:  ಬೇರು ಶೋಧಿಸಲು ಹೊರಟ ಚಿಗುರುಗಳು
     ವಂಶಮೂಲವನರಸಿ ಜಾಡರಿತು ಸಾರೆ
     ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ|
     ಮುನ್ನೂರು ವರುಷಗಳ ಹಾದಿಯಿದು ಜಾಣಾ
     ಹತ್ತು ತಲೆಮಾರುಗಳ ಯಶಗೀತೆ ಕಾಣಾ||
     ಮಾನವನ ಜೀವನದಲ್ಲಿ ಸಂಬಂಧಗಳಿಗೆ - ತಾಯಿ, ತಂದೆ, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಮಕ್ಕಳು, ಇತ್ಯಾದಿಗಳಿಗೆ - ಮಹತ್ವವಿದೆ. ಇಂದಿನ ಜೀವನಶೈಲಿ ಅವಿಭಕ್ತ ಕುಟುಂಬಗಳಿಗೆ ಮಾರಕವಾಗಿದೆ. ಈಗಿನ ಪೀಳಿಗೆಯವರಿಗೆ ಅವಿಭಕ್ತ ಕುಟುಂಬದ ಪರಿಚಯ ಬಹುಷಃ ಇಲ್ಲವೆಂದೇ ಹೇಳಬಹುದು. ಈಗಂತೂ ಕುಟುಂಬ ಎಂದರೆ ಗಂಡ, ಹೆಂಡತಿ, ಮಕ್ಕಳು ಮಾತ್ರ ಎನ್ನುವ ಭಾವನೆ ಬಂದಿರುವುದು ದುರಂತ. ಇತರ ಸಂಬಂಧಗಳಿಗೆ ಬೆಲೆ ಕೊಡದಿರುವುದರಿಂದ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಪ್ಪ, ಷಡ್ಡಕ, ಓರಗಿತ್ತಿ, ನಾದಿನಿ, ಮೈದುನ, ಸೋದರತ್ತೆ, ದಾಯಾದಿ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಅಂಕಲ್, ಆಂಟಿ, ಕಸಿನ್‌ಗಳಲ್ಲೇ ಈಗ ಎಲ್ಲಾ ಮುಗಿದುಹೋಗುತ್ತಿದೆ. ಹೆಚ್ಚಿನ ಕುಟುಂಬಗಳಲ್ಲಿ ಈಗ ಒಂದೇ ಮಗುವಿರುವುದರಿಂದ ಆ ಮಕ್ಕಳಿಗೆ ಅಣ್ಣ, ತಮ್ಮ, ಅಕ್ಕ, ತಂಗಿ - ಇಂತಹ ಪ್ರೀತಿಯ ಅನುಬಂಧಗಳ ಅನುಭವವೂ ಆಗದೆ ಸ್ವಾರ್ಥಪ್ರೇರಿತ ಜನಾಂಗ ರೂಪಿತಗೊಳ್ಳುತ್ತಿದೆಯೇನೋ ಎಂದೂ ಭಾಸವಾಗುತ್ತಿದೆ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇದೆ. ಒಳ್ಳೆಯ ನಾಗರಿಕ ಸಮಾಜ ರೂಪಿತವಾಗಬೇಕಾದರೆ ಸಮಾಜದ ಮೂಲಘಟಕವಾದ ಕುಟುಂಬಗಳಲ್ಲಿ ಉತ್ತಮ ಸಂಬಂಧ, ಸಾಮರಸ್ಯವಿರುವ ವಾತಾವರಣವಿರಬೇಕು ಎಂಬುದರಲ್ಲಿ ಅರ್ಥವಿದೆ. ಅಜ್ಜ, ಅಜ್ಜಿಯರ ಹೆಸರು, ವಿವರ ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ ಮುತ್ತಜ್ಜ, ಮುತ್ತಜ್ಜಿಯರು, ಅವರ ಅಪ್ಪ.ಅಮ್ಮಂದಿರ ವಿವರಗಳು? ಬಹುಷಃ ತಿಳಿದಿರಲಾರದು. ತಿಳಿಯುವ ಆಸಕ್ತಿಯೂ ಇರಲಾರದು. ನಮ್ಮ ವಂಶವೃಕ್ಷದ ಬೇರಿನ ವಿವರಗಳನ್ನು ಹುಡುಕುವ ನಮ್ಮ ಪ್ರಯತ್ನದ ವಿವರಗಳನ್ನು ಹಂಚಿಕೊಳ್ಳಬೇಕೆಂಬ ತುಡಿತದ ಫಲವೇ ಈ ಲೇಖನ. 
     ಹತ್ತು ವರ್ಷಗಳ ಹಿಂದೆ ನಾವು ಕೆಳದಿ ಕವಿಮನೆತನದವರೆಂಬ ಕಲ್ಪನೆಯೂ ನಮಗೆ ಇರಲಿಲ್ಲ. ತಿಳಿದ ನಂತರ ಆದ ಸಂತೋಷವೂ ಅಷ್ಟಿಷ್ಟಲ್ಲ. ನನ್ನ ಅಜ್ಜ ದಿ. ಸುಬ್ರಹ್ಮಣ್ಯಯ್ಯನವರು (೧೯೦೪-೧೯೬೬) ಬಾಲ್ಯಾವಸ್ಥೆಯಲ್ಲೇ ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು, ಕೊಪ್ಪದಲ್ಲಿದ್ದ ತಮ್ಮ ಅಜ್ಜ (ತಾಯಿಯ ತಂದೆ) ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆದಿದ್ದರಿಂದ ಸಹಜವಾಗಿ ತಂದೆಯ ಕಡೆಯ ಸಂಬಂಧಗಳು ಬಿಟ್ಟುಹೋಗಿದ್ದಲ್ಲದೆ ಅವರ ಪರಿಚಯ ಮಕ್ಕಳು, ಮೊಮ್ಮಕ್ಕಳಿಗೆ ಆಗಲಿಲ್ಲ. ನಾವುಗಳೂ ನಮ್ಮ ಹೆಸರಿನ ಇನಿಷಿಯಲ್ ನಲ್ಲಿದ್ದ ಕೆ ಅಂದರೆ ಕೊಪ್ಪ ಎಂದೇ ಭಾವಿಸಿದ್ದೆವು. ಅಜ್ಜ ಸುಬ್ರಹ್ಮಣ್ಯಯ್ಯ ತರ್ಪಣಾದಿ ಕಾರ್ಯಗಳಲ್ಲಿ ಸ್ಮರಿಸಬೇಕಾದ ಹೆಸರುಗಳ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು ನಮ್ಮ ತಂದೆ ದಿ. ವೆಂಕಟಸುಬ್ಬರಾಯರಿಗೆ (೧೯೨೫-೨೦೦೯) ಕೊಟ್ಟಿದ್ದರು. ಈ ಚೀಟಿಯನ್ನು ಗಮನಿಸಿದ ನಾನು ಅದರಲ್ಲಿನ ವಿವರಗಳನ್ನು ಆಧರಿಸಿ ವಂಶವೃಕ್ಷ ಸಿದ್ಧಪಡಿಸಿ ೨೦೦೦ನೆಯ ಸಾಲಿನಲ್ಲಿ ಪ್ರತಿಗಳನ್ನು ಬಂಧುಗಳಿಗೆ ನೀಡಿದ್ದೆನು. ಅದರಲ್ಲಿ ಕೊಪ್ಪದ ವೆಂಕಣ್ಣನ ಅಮರ ವಂಶಾವಳಿ ಎಂದೇ ನಮೂದಿಸಿದ್ದೆನು. ವರ್ಷಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಈ ವಂಶವೃಕ್ಷದಲ್ಲಿ ಪರಿಷ್ಕರಣೆ ಮಾಡುತ್ತಿದ್ದೆನು. ಈರೀತಿ ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಹೆಸರುಗಳವರ ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಾಗಿತು. ಯಾವ ಯಾವುದೋ ಸಮಾರಂಭಗಳಲ್ಲಿ. ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸುತ್ತಿದ್ದೆ.  ವಿಚಾರಿಸಿದಾಗ ಅವರು ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು. ಹೇಳಬೇಕೆಂದರೆ ನನ್ನ ಹೆಚ್ಚಿನ ಗಮನ ಕೊಪ್ಪ ಮತ್ತು ಶಿವಮೊಗ್ಗಗಳಿಗೆ ಸೀಮಿತವಾಗಿತ್ತು. ಕಂದಾಯ ಇಲಾಖಾಧಿಕಾರಿಯಾಗಿ ನನಗಿದ್ದ ಕಾರ್ಯಬಾಹುಳ್ಯ ಸಹ ಈ ಕುರಿತು ಹುಡುಕಾಟಕ್ಕೆ ಅಡ್ಡಿಯಾಗಿತ್ತು.
     ರಾಜ್ಯ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದ ನನ್ನ ತಮ್ಮ ಸುರೇಶ ಆರು ವರ್ಷಗಳ ಹಿಂದೆ ಸ್ವಇಚ್ಛಾ ನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ನೆಲೆ ನಿಂತಾಗ ಆತನಿಂದ ಈ ಅನ್ವೇಷಣೆ ಮುಂದುವರೆಯಿತು. ನಾವಿಕ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರವೇಶದ್ವಾರಕ್ಕೆ ಕವಿ ಸುಬ್ರಹ್ಮಣ್ಯಯ್ಯನವರ ಹೆಸರಿಡಬೇಕೆಂದು ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿಯವರು ಬರೆದ ಪತ್ರ ಗಮನಿಸಿ ಕವಿ ಸುಬ್ರಹ್ಮಣ್ಯಯ್ಯರೆಂದರೆ ನಮ್ಮ ಅಜ್ಜನೇ ಇರಬೇಕೆಂದು ಭಾವಿಸಿ ಅವರನ್ನು ನನ್ನ ತಮ್ಮ ವಿಚಾರಿಸಿದ. ಆದರೆ ಅವರು ಉಲ್ಲೇಖಿಸಿದ ಕವಿ ಸುಬ್ರಹ್ಮಣ್ಯಯ್ಯ ನಮ್ಮ ಅಜ್ಜ ಆಗಿರಲಿಲ್ಲ. ಆದರೆ ಕೆಳದಿಯ ಗುಂಡಾಜೋಯಿಸರನ್ನು ಸಂಪರ್ಕಿಸಲು ನೀಡಿದ ಅವರ ಸಲಹೆ ಮಾತ್ರ ಅತ್ಯಂತ ಅಮೂಲ್ಯವಾದುದಾಗಿತ್ತು. ಅವರ ಸಲಹೆಯಂತೆ ಕೆಳದಿ ಗುಂಡಾಜೋಯಿಸರನ್ನು ನನ್ನ ತಮ್ಮ ಸಂಪರ್ಕಿಸಿ ವಿಚಾರಿಸಿದಾಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಶ್ರೀ ಗುಂಡಾಜೋಯಿಸರ ಬಳಿ ಇದ್ದ ಕವಿಮನೆತನದ ವಂಶವೃಕ್ಷದ ವಿವರಗಳು ನಮ್ಮ ವಂಶವೃಕ್ಷದ ವಿವರಗಳಿಗೆ ತಾಳೆಯಾಯಿತು. ನವ್ಮ್ಮ ವಂಶವೃಕ್ಷದಲ್ಲಿನ ಮೇಲಿನ ಮೂರು ತಲೆಮಾರುಗಳ ವಿವರ ಅಲ್ಲಿನ ವಂಶವೃಕ್ಷದ ಕೆಳಗಿನ ಮೂರು ತಲೆಮಾರುಗಳ ವಿವರಗಳಿಗೆ ಹೊಂದಿಕೆಯಾಗುತ್ತಿದ್ದವು. ಎರಡು ವಂಶವೃಕ್ಷದಲ್ಲಿನ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಶ್ರೀ ಗುಂಡಾಜೋಯಿಸರ ಹತ್ತಿರವಿದ್ದ ವಂಶವೃಕ್ಷದಲ್ಲಿ ಹೆಸರಿಸಿದ್ದ ಬಂಧುಗಳನ್ನು ವಿಚಾರಿಸಲಾಗಿ ಅವರು ನಮ್ಮ ಗೋತ್ರದವರೇ ಆಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಜ್ಜ ಸುಬ್ರಹ್ಮಣ್ಯಯ್ಯನವರನ್ನು ಕಂಡಿದ್ದವರು, ಕೇಳಿದ್ದವರೇ ಆಗಿದ್ದಲ್ಲದೆ ನಮ್ಮ ಅಜ್ಜ ಅವರುಗಳ ಮನೆಗೆ ಹೋಗಿಬರುತ್ತಿದ್ದುನ್ನು ಧೃಢಪಡಿಸಿದ್ದು ಸಂಬಂಧ ಸರಪಳಿ ಒಂದಾಗಿದ್ದುದನ್ನು ಖಚಿತಪಡಿಸಿತು. ಕವಿಮನೆತನದ ಶ್ರೀ ಕೆಳದಿ ರಾಮಮೂರ್ತಿಯವರ ಬಳಿ ಇದ್ದ ವಂಶವೃಕ್ಷ ಸಹ ನಮ್ಮ ವಂಶವೃಕ್ಷದ ಪೂರ್ವಜರ ವಿವರಗಳೊಂದಿಗೆ ಹೊಂದಿಕೊಳ್ಳುತ್ತಿತ್ತು. ಹಲವಾರು ರೀತಿಯಲ್ಲಿ ಪರಿಶೀಲಿಸಿದಾಗ ವಿಷಯ ಮತ್ತಷ್ಟು ದೃಢಪಟ್ಟಿತು. ನಾವು ಕವಿಮನೆತನದವರೆಂದು ತಿಳಿದು ನಮಗೆ ಅತೀವ ಸಂತೋಷವಾಯಿತು. ೧೨ ತಲೆಮಾರುಗಳ ವಿವರವಿರುವ ಕ್ರೋಢೀಕರಿಸಿದ ವಂಶವೃಕ್ಷದಲ್ಲಿ ಹೆಸರಿಸಿದವರ ಮತ್ತು ಈಗ ಇರುವವರನ್ನು ಸಂಪರ್ಕಿಸುವ ಮಹತ್ವದ ಕೆಲಸ ಸೇರಿದಂತೆ ಸಫಲ ಅನ್ವೇಶಣೆ ಮಾಡಿದ ಸುರೇಶ ಮತ್ತು ಅವನ ಸಹಕಾರಿಗಳಿಗೆ ಅಭಿನಂದನೆ ಸಲ್ಲಬೇಕು. ಹುಡುಕುವ ಕಾರ್ಯದಲ್ಲಿ ಸ್ವಜನರೂ ಸೇರಿದಂತೆ ಇತರರಿಂದಲೂ ಕೆಲವರ ಅಪಹಾಸ್ಯ, ನಿಂದೆ, ಸಂಶಯ, ತಿರಸ್ಕಾರ, ಅಲಕ್ಷ್ಯ, ಅಸಹಕಾರಗಳ ಜೊತೆಗೆ ಮೆಚ್ಚುಗೆ ಸಹಕಾರಗಳೂ ಬೆರೆತು ಒಳ್ಳೆಯ ಅನುಭವ ದೊರಕಿತು.     ನಾವು ಕೆಳದಿ ಕವಿಮನೆತನದವರೆಂದು ತಿಳಿದ ನಂತರದಲ್ಲಿ ಹಲವಾರು ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಾ ಹೋದವು. ಈ ಕುರಿತು ಮುಂದಿನ ಲೇಖನದಲ್ಲಿ ತಿಳಿಸುವೆ.


ದಿ. ಕವಿ ಸುಬ್ರಹ್ಮಣ್ಯಯ್ಯ

ದಿ. ಕವಿವೆಂಕಟಸುಬ್ಬರಾವ್


ತಂದೆ ಕೊಟ್ಟಿದ್ದ ವಿವರ ಬರೆದಿಟ್ಟುಕೊಂಡಿದ್ದ ದಿ. ವೆಂಕಟಸುಬ್ಬರಾಯರು

ವೆಂಕಟಸುಬ್ಬರಾವ್ - ಸೀತಮ್ಮರವರ ವಿವಾಹ ಆಹ್ವಾನ ಪತ್ರಿಕೆ
(ಕವಿ ವೆಂಕಣ್ಣಯ್ನನವರ ಮಗ ಕವಿ ಸುಬ್ರಹ್ಮಣ್ಯಯ್ಯನ ವಿಜ್ಞಾಪನೆಯ ಉಲ್ಲೇಖವಿದೆ)

ಮೊದಲು ಸಿದ್ಧಪಡಿಸಿದ್ದ ವಂಶವೃಕ್ಷ

ಶ್ರೀ ಗುಂಡಾಜೋಯಿಸರು ಒದಗಿಸಿದ ದಾಖಲೆ

ಶ್ರೀ ಕವಿರಾಮಮೂರ್ತಿಯವರು ಕೊಟ್ಟ ದಾಖಲೆ

ಕ್ರೋಢೀಕರಿಸಿದ ನಂತರದ ವಂಶವೃಕ್ಷ

ಕವಿನಾಗರಾಜ್
ಕವಿಸುರೇಶ್

2 ಕಾಮೆಂಟ್‌ಗಳು:

  1. ಕೆಳದಿ ವಂಶವೃಕ್ಷ ವನ್ನು ಹುಡುಕುವಲ್ಲಿನ ನಿಮ್ಮ ಮತ್ತು ನಿಮ್ಮ ತಮ್ಮ ಕವಿ ಸುರೇಶ್ ರವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಯಶ ದೊರಕಿದ್ದಕ್ಕಾಗಿ ಅಭಿನಂದನೆಗಳು. 'ನಾನು ಯಾರೂ ಅಲ್ಲ' ಎನ್ನುವ ಬಗ್ಗೆ ಈಗತಾನೆ ಬಸ್ ನಲ್ಲಿ ಓದುತ್ತಾ ಬ೦ದಿದ್ದೆ. 'ನನ್ನ ಮೂಲ ಯಾವುದು?' ಎನ್ನುವ ಹುಡುಕಾಟವನ್ನು ಇಲ್ಲಿ ಓದಿದೆ. ಎ೦ಥಾ ವಿಪರ್ಯಾಸ ಅಲ್ಲವೇ? ಆದರೂ ನಿಮ್ಮ ಸ೦ತಸದಲ್ಲಿ ನಾನು ಸಹಭಾಗಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಅಭಿನಂದನೆಗೆ ಕೃತಜ್ಞರಾಗಿದ್ದೇವೆ, ಪ್ರಭಾಮಣಿಯವರೇ.

    ಪ್ರತ್ಯುತ್ತರಅಳಿಸಿ