ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಡಿಸೆಂಬರ್ 1, 2012

"ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ

     1975-77ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಹೇಗಿತ್ತು, ಜನರ, ಅಧಿಕಾರಸ್ಥರ ಮನೋಸ್ಥಿತಿ ಹೇಗಿತ್ತು, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದ್ದ ಆ ಕಾಲದಲ್ಲಿ ಅದನ್ನು ವಿರೋಧಿಸಿದವರನ್ನು ಹೇಗೆ ದಮನಿಸಲಾಗುತ್ತಿತ್ತು ಎಂಬುದರ ಕಿರುದರ್ಶನ ಮಾಡುವ ಕ.ವೆಂ.ನಾಗರಾಜರ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 29-11-2012ರಂದು ವಿಭಿನ್ನವಾಗಿ ಆಯೋಜಿಸಲಾಗಿತ್ತು. ಕೃತಿ ಬಿಡುಗಡೆಯ ಪೂರ್ವಭಾವಿಯಾಗಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಸತ್ಯಾಗ್ರಹ ಮಾಡಿದ್ದ, ಮೀಸಾ, ಭಾರತ ರಕ್ಷಣಾ ಕಾಯದೆಯನ್ವಯ ಬಂಧಿತರಾಗಿದ್ದವರ ಸಮಾವೇಶ ಏರ್ಪಡಿಸಿದ್ದು ವಿಶೇಷವೇ ಸರಿ. ಸುಮಾರು 80 ಸತ್ಯಾಗ್ರಹಿಗಳು ಸೇರಿದ್ದು, ಅಂದಿನ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ನೆರೆದಿದ್ದವರಿಗೆ ಒಂದು ವಿಶೇಷ ಅನುಭವ ಉಂಟು ಮಾಡಿತು.
     ಈ ಸಮಾವೇಶದ ನಂತರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂದು 'ಮೀಸಾ' ಕಾಯದೆಯನ್ವಯ ಬಂಧಿತರಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು ಕೃತಿ ಬಿಡುಗಡೆ ಮಾಡಿ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕೃತಿಗಳು ಯುವಕರಿಗೆ ಮಾರ್ಗದರ್ಶನ ನೀಡಲು ಸಹಕಾರಿ ಮತ್ತು ಅಗತ್ಯವೆಂದರು. ಲೇಖಕ ನಾಗರಾಜ್ ಮಾತನಾಡುತ್ತಾ ತಮ್ಮ ಸೇವಾಕಾಲದ ಅನುಭವಗಳನ್ನು ಅಂತರ್ಜಾಲ ತಾಣಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದಾಗ ತುರ್ತು ಪರಿಸ್ಥಿತಿ ಕಾಲದ ತಮ್ಮ ಅನುಭವಗಳಿಗೆ ಬಂದ ಅನೇಕ ಪ್ರತಿಕ್ರಿಯೆಗಳು ಪುಸ್ತಕ ಪ್ರಕಟಣೆಗೆ ಪ್ರೇರಿಸಿತೆಂದು ಹೇಳಿದರು. ಜಿಲ್ಲೆಯ ಎಲ್ಲಾ ಹೋರಾಟಗಾರರು ನಡೆಸಿದ ಹೋರಾಟದ ಸಮಗ್ರ ಚಿತ್ರಣವಿರುವ ಕೃತಿ ರಚಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು ಈ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ದವೆಂದು ತಿಳಿಸಿದರು.
     ತುರ್ತು ಪರಿಸ್ಥಿತಿ ವಿರೋಧಿಸಿ ಕರ್ನಾಟಕದಲ್ಲಿ ನಡೆದ ಐತಿಹಾಸಿಕ ಆಂದೋಲನದ ಕುರಿತು ಮಾತನಾಡಿದ ಪ್ರಧಾನ ಭಾಷಣಕಾರರಾದ ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಈ ಕೃತಿ ಯುವಜನರಿಗೆ ಪ್ರೇರಣೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ತಿಳಿಸಿದರಲ್ಲದೆ, ಇಂದಿನ ಕಲುಷಿತ ವಾತಾವರಣದಲ್ಲಿ ಭ್ರಷ್ಠ ವ್ಯವಸ್ಥೆ ವಿರುದ್ಧ ಜಾಗೃತರಾಗಿರಬೇಕೆಂದು ಕರೆ ನೀಡಿದರು. 'ಮೀಸಾ' ಕಾಯದೆಯನ್ವಯ ಬಂಧಿತರಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ.ಆರ್. ಶ್ರೀನಿವಾಸ ಮೂರ್ತಿ, ಹಾಸನದ ಶ್ರೀ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಪ್ರೇರಕರಾಗಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. ಲೇಖಕ ಶ್ರೀ ಕ.ವೆಂ.ನಾಗರಾಜರನ್ನು ಅಭಿನಂದಿಸಲಾಯಿತು. ಶ್ರೀ ಹರಿಹರಪುರ ಶ್ರೀಧರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು.









2 ಕಾಮೆಂಟ್‌ಗಳು:

  1. ಬದುಕನ್ನು ತಿದ್ದುವ ಕೃತಿಗಳು ಚಿರಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ತಮ್ಮ ಈ ಕೃತಿಯನ್ನು ನಾನೂ ಕೊಂಡು ಓದುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಧನ್ಯವಾದ, ನಿಮ್ಮ ವಿಶ್ವಾಸಪೂರ್ವಕ ನುಡಿಗಳಿಗೆ, ಬದರೀನಾಥರೇ.

    ಪ್ರತ್ಯುತ್ತರಅಳಿಸಿ