ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಅಕ್ಟೋಬರ್ 28, 2016

ಕೆಳದಿ ಚೆನ್ನಮ್ಮಾಜಿ ಮತ್ತು ಧೊಂಡಿಯವಾಘರನ್ನು ನೆನಪಿಸುವ ಚನ್ನಗಿರಿ

     ಚನ್ನಗಿರಿ - ಮೊದಲು ಶಿವಮೊಗ್ಗ ಜಿಲ್ಲೆಗೆ, ನಂತರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸೇರಿದ ತಾಲ್ಲೂಕಾಗಿದ್ದು ತದನಂತರದಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿದ ಸಮೃದ್ಧ ತಾಲ್ಲೂಕು, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹೆಸರುವಾಸಿಯಾದ ತಾಲ್ಲೂಕು. 17ನೆಯ ಶತಮಾನದಲ್ಲಿ ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಚನ್ನಗಿರಿ ಅದಕ್ಕೂ ಮೊದಲು ಗಂಗರು, ಕಲ್ಯಾಣಿ ಚಾಲುಕ್ಯರು ಮತ್ತು ಪಾಂಡ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಗಿರಿಯ ಕೋಟೆಯ ಆವರಣದಲ್ಲಿ ಪ್ರಾಚ್ಯವಸ್ತು ಇಲಾಖೆಯವರು ಹಾಕಿರುವ ಫಲಕದಲ್ಲಿ ಈ ಪ್ರದೇಶದಲ್ಲಿ ಚೆನ್ನಮ್ಮಾಜಿಯು ಕೋಟೆಯನ್ನು ಕಟ್ಟಿಸಿದ ನಂತರ ಈ ಸ್ಥಳಕ್ಕೆ ಚನ್ನಗಿರಿ ಎಂಬ ಹೆಸರು ಬಂದಿತು ಎಂದು ಇದೆ. ಕೆಳದಿಯ ಕೆಚ್ಚೆದೆಯ ರಾಣಿ ಚೆನ್ನಮ್ಮಾಜಿ ಕ್ರಿ.ಶ. 1671ರಿಂದ 1698ರವರೆಗೆ ಆಳ್ವಿಕೆ ನಡೆಸಿದ್ದು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದವಳು. ಶಿವಾಜಿಯ ಮಗ ರಾಜಾರಾಮ ಔರಂಗಜೇಬನಿಂದ ಸೋಲಿಸಲ್ಪಟ್ಟು ರಕ್ಷಣೆ ಕೋರಿ ಬಂದಾಗ ರಕ್ಷಣೆ ನೀಡಿದವಳು. ಪಾರಂಪರಿಕವಾಗಿ ಮರಾಠರಿಗೂ ಕೆಳದಿಯರಸರಿಗೂ ಸಂಘರ್ಷಗಳು ನಡೆಯತ್ತಿದ್ದರೂ ಶರಣಾಗಿ ಬಂದವರಿಗೆ ರಕ್ಷಣೆ ನೀಡುವ ಹಿಂದೂ ಪರಂಪರೆಯನ್ನು ಎತ್ತಿಹಿಡಿದು ಅಪಾಯ ಎದುರಿಸಿದವಳು. ಕ್ರುದ್ಧ ಔರಂಗಜೇಬ ಕೆಳದಿಯನ್ನು ಆಕ್ರಮಿಸಲು ಮುಂದಾದಾಗ ನಡೆದ ಘೋರ ಕದನದಲ್ಲಿ ಅವನನ್ನು ಸೋಲಿಸಿ ಹಿಮ್ಮೆಟ್ಟಿಸಿದವಳು!
     ಕೆಳದಿ ಅರಸರ ಚರಿತ್ರೆ ತಿಳಿಸುವ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ 'ಕೆಳದಿನೃಪ ವಿಜಯ'ದ ಒಂಬತ್ತನೆಯ ಆಶ್ವಾಸದ 62ನೆಯ ಪದ್ಯ ಮತ್ತು ನಂತರದ ವಚನದಲ್ಲಿ ಕವಿ ಚನ್ನಗಿರಿಯ ಕುರಿತು ಹೀಗೆ ಹೇಳಿದ್ದಾನೆ:
"ವ|| ಇಂತು ಸಂಗ್ರಾಮದೊಳ್ ಮೈಸೂರ ಮಹೀಶ್ವರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಣಪ್ಪನಂ ಕೈಸೆರೆವಿಡಿದು ಮರಳ್ದು ಕಳುಹಿಸಿ ಪರಮಪ್ರಖ್ಯಾತಿಯಂ ಪಡೆದು ತುಂಗಭದ್ರಾ ನದೀತೀರದೊಳ್
 ಕಂ || ತರುಣಿಯರ ಕುಲಶಿರೋಮಣಿ
ವರಚನ್ನಮ್ಮಾಜಿಯಾತ್ಮನಾಥನ ಪೆಸರೊಳ್
ಸ್ಥಿರಮಾದ ಸೋಮಶೇಖರ
ಪುರಮೆಂದೆನಿಪಗ್ರಹಾರಮಂ ವಿರಚಿಸಿದಳ್  || 62 ||
ವ|| ಇಂತು ಪ್ರಾಣಕಾಂತನಾದ ಸೋಮಶೇಖರನಾಯಕರ ಪೆಸರೊಳ್ ಸೋಮಶೇಖರಪುರಮೆಂದೆನಿಪಗ್ರಹಾರಮಂ ನಿರ್ಮಾಣಂಗೈಸಿ ಸ್ವಾಸ್ಥೆಕ್ಷೇತ್ರವೃತ್ತಿಗಳಂ ಕಲ್ಪಿಸಿ ಶ್ರೋತ್ರಿಯ ಬ್ರಾಹ್ಮಣರ್ಗೆ ಶಿವಾರ್ಪಿತಮಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟಣದ ಸೀಮಾಸನ್ನಿವೇಶದೊಳ್ ಹೂಲಿಕೆರೆಯೆಂಬ ಸ್ಥಳದೊಳ್ ವಿರಾಜಿಪ ಕೋಂಟೆಯಂ ಸ್ವಾಧೀನಂಗೈದದಕ್ಕೆ ಸ್ವನಾಮಾಂಕಿತಮಾದ ಚನ್ನಗಿರಿಯ ಕೋಂಟೆಯೆಂದು ಪೆಸರಿಟ್ಟು ತತ್ಪರಿಸ್ತರಣಮಂ ಬಲ್ಪುಗೈಸಿದಳಂತುಮಲ್ಲದೆಯುಂ"
     ಗದ್ಯಾರ್ಥ: ಯುದ್ಧದಲ್ಲಿ ಮೈಸೂರು ಅರಸರ ದಳವಾಯಿ ತಿಮ್ಮಪ್ಪನನ್ನು ಸೋಲಿಸಿ, ಅವನ ಮಗ ಕೃಷ್ಣಪ್ಪನನ್ನು ಸೆರೆಹಿಡಿದರೂ ಕ್ಷಮಿಸಿ ಮರಳಿ ಕಳುಹಿಸಿದ ಪ್ರಖ್ಯಾತಿ ಪಡೆದ ತರುಣಿಯರ ಕುಲಶಿರೋಮಣಿ ವರ ಚನ್ನಮ್ಮಾಜಿ ತನ್ನ ಗಂಡನ ಹೆಸರಿನಲ್ಲಿ ಸೋಮಶೇಖರಪುರವೆಂಬ ಅಗ್ರಹಾರ ನಿರ್ಮಾಣ ಮಾಡಿಸಿ ಶ್ರೋತ್ರೀಯ ಬ್ರಾಹ್ಮಣರಿಗೆ ಸ್ವಾಸ್ಥೆ, ಕ್ಷೇತ್ರ, ಉದ್ಯೋಗಗಳನ್ನು ಕಲ್ಪಿಸಿ ಶಿವಾರ್ಪಣವೆಂದು ಧಾರೆಯೆರೆದು ಶಾಶ್ವತ ಶಾಸನ ಬರೆಸಿಕೊಟ್ಟಳು. ಅದೂ ಅಲ್ಲದೆ ಬಸವಾಪಟ್ಟಣದ ಸೀಮೆಯ ಹತ್ತಿರ ಹೂಲಿಕೆರೆ(ಹುಲಿಕೆರೆ) ಎಂಬ ಸ್ಥಳದಲ್ಲಿ ಶೋಭಿಸುತ್ತಿದ್ದ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ತನ್ನ ಹೆಸರಿನ ಅಂಕಿತದೊಂದಿಗೆ 'ಚನ್ನಗಿರಿ ಕೋಟೆ' ಎಂದು ಹೆಸರಿಟ್ಟು ಆ ಕೋಟೆಯನ್ನು ಬಲಪಡಿಸಿದಳು.
     ಚೆನ್ನಮ್ಮಾಜಿ ಹೊಸದಾಗಿ ಕೋಟೆಯನ್ನು ಕಟ್ಟಿಸದೆ ಇದ್ದ ಕೋಟೆಯನ್ನೇ ಅಭಿವೃದ್ಧಿ ಪಡಿಸಿ ಬಲಗೊಳಿಸಿದ್ದಳೆಂದು ಇದರಿಂದ ತಿಳಿದುಬರುತ್ತದೆ. ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯವಾಘನ ಜನ್ಮಸ್ಥಳವಾದ ಚನ್ನಗಿರಿಗೆ ದಿನಾಂಕ 19.10.2016ರಂದು ಹೋಗಿ ಚನ್ನಗಿರಿ ಕೋಟೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು ಇಂದಿನ ಸ್ಥಿತಿಯನ್ನು ಬಿಂಬಿಸುತ್ತಿವೆ. ಕೋಟೆಯು ಇತರ ಪ್ರದೇಶಗಳಲ್ಲಿ ಕಂಡುಬರುವ ಕೋಟೆಗಳಷ್ಟು ವಿಶಾಲವಾದುದಾಗಿಲ್ಲ. ಎರಡು ಸುತ್ತು ಗೋಡೆಗಳನ್ನು ಹೊಂದಿರುವ ಕೋಟೆಯನ್ನು ಮಣ್ಣು, ಗಾರೆ ಮತ್ತು ಕಲ್ಲುಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ಅಂಡಾಕಾರವಾಗಿರುವ ಕೋಟೆಯಲ್ಲಿ ಏಳು ಬುರುಜುಗಳಿದ್ದು, ಎರಡು ಕಾವಲು ಗೋಪುರಗಳಿವೆ. ಒಂದು ಭಾಗದಲ್ಲಿ ಬಂಡೆಯನ್ನು ಕೊರೆದು ಮಾಡಿದ ಕೊಳವಿದ್ದು ಅದಕ್ಕೆ ಮೆಟ್ಟಲುಗಳಿವೆ. ಸಭಾಗೃಹವಿರಬಹುದೆಂದು ಹೇಳಬಹುದಾದ ಸ್ಥಳದ ಅಡಿಪಾಯ ಕಂಡುಬರುತ್ತದೆ. 18ನೆಯ ಶತಮಾನಕ್ಕೆ ಸೇರಿದೆಯೆನ್ನಲಾದ ಕೋಟೆ ರಂಗನಾಥ ಸ್ವಾಮಿಯ ದೇವಾಲಯವನ್ನೂ ಕೋಟೆಯ ಭಾಗದಲ್ಲಿ ಕಾಣಬಹುದು. ಹಳೆಯ ರಥ ಶಿಥಿಲಾವಸ್ಥೆಯಲ್ಲಿದೆ. ಹೊಸ ರಥದ ಮನೆಯಿದೆ. ಚಿತ್ರಗಳು ಕಥೆಯನ್ನು ಮುಂದವರೆಸುತ್ತವೆ. 
-ಕ.ವೆಂ.ನಾಗರಾಜ್.

















































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ