ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಆಗಸ್ಟ್ 2, 2017

ತಿರುವು ಮತ್ತು ಅರಿವು


     ಜೀವನದಲ್ಲಿ ಬರುವ ತಿರುವುಗಳು ಬಾಳಿನ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಭಾರತದ ಅತ್ಯುತ್ತಮ ಗ್ರಂಥಪಾಲಕರು, ಜಗತ್ತಿನ ಅತ್ಯುತ್ತಮ ಹತ್ತು ಗ್ರಂಥಪಾಲಕರಲ್ಲಿ ಒಬ್ಬರು, ಪ್ರಪಂಚದ ಅತ್ಯಂತ ಗುಣಾನ್ವಿತರಲ್ಲಿ ಒಬ್ಬರು,  ಅಮೆರಿಕಾದ ಅಂತರರಾಷ್ಟ್ರೀಯ ಸಂಸ್ಥೆಯಿಂದ ಸಹಸ್ರಮಾನದ ವ್ಯಕ್ತಿಯೆಂಬ ಬಿರುದು ಪಡೆದವರು, ಬಿರುದಿನೊಂದಿಗೆ ಬಂದ 30 ಕೋಟಿ ರೂ. ಹಣವನ್ನೂ ಪೂರ್ಣವಾಗಿ ಬಡವರಿಗಾಗಿ ವಿನಿಯೋಗಿಸಿದವರು, ಹುದ್ದೆಯಿಂದ ಬಂದ ಸಂಬಳ, ಪೆನ್ಶನ್, ಇತ್ಯಾದಿಗಳನ್ನು ಸಹ ಪೂರ್ಣವಾಗಿ ದೀನ ದಲಿತರಿಗಾಗಿ ಖರ್ಚು ಮಾಡಿದ ಏಕೈಕ ವ್ಯಕ್ತಿ ಪಾಲಮ್ ಕಲ್ಯಾಣಸುಂದರಮ್‌ರವರ ಉದಾಹರಣೆಯನ್ನೇ ನೋಡೋಣ. ಅವರಲ್ಲಿ ಈ ಬದಲಾವಣೆ ಬಂದದ್ದಾದರೂ ಹೇಗೆ? ಹಿಂದೆ ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಆತ ಆಗಿನ ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದುಕೊಟ್ಟಿದ್ದ. ನಂತರ ಆನಂದವಿಕಟನ್ ಪತ್ರಿಕೆಯ ಸಂಪಾದಕರಲ್ಲಿ ಹೋಗಿ ಆ ವಿಷಯವನ್ನು ಪ್ರಕಟಿಸಲು ಕೋರಿದ್ದ. ಪತ್ರಿಕೆಯ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್, "ನೀನು ಸ್ವತಃ ದುಡಿದು ದಾನ ಕೊಟ್ಟಾಗ ಬಂದು ಹೇಳು, ಪ್ರಕಟಿಸುತ್ತೇನೆ" ಎಂದು ವಾಪಸು ಕಳಿಸಿದ್ದರು. ಆ ಮಾತು ಅವನ ಬಾಳಿನ ದಿಕ್ಕನ್ನೇ ತಿರುಗಿಸಿಬಿಟ್ಟಿತು. ಮುಂದೆ ಆತ ತಮಿಳುನಾಡಿನ ಶ್ರೀವೈಕುಂಠಮ್ ಕಲಾ ಕಾಲೇಜಿನ ಗ್ರಂಥಪಾಲಕನಾಗಿ ಸುಮಾರು 35 ವರ್ಷಗಳ ಕಾಲ ಕೆಲಸ ಮಾಡಿದಾಗ ಮಾಡಿದ್ದೇನೆಂದರೆ, ದುಡಿದ ಹಣವನ್ನು ಸ್ವಂತಕ್ಕೆ ಬಳಸದೆ ಪೂರ್ಣವಾಗಿ ಬಡಬಗ್ಗರಿಗಾಗಿ ಬಳಸಿದ್ದು. ಅದರ ಪರಿಣಾಮವೇ ಆತನನ್ನು ಮೇಲೆ ಹೇಳಿದ ಪ್ರಶಸ್ತಿಗಳು ಅರಿಸಿಕೊಂಡು ಬಂದವು. ದೌರ್ಭಾಗ್ಯವೆಂದರೆ ನಮಗೆ ಸಿನೆಮಾ, ಕಿರುತೆರೆಗಳ ನಾಯಕ-ನಾಯಕಿಯರ ಬಗ್ಗೆ ಇರುವ ಆಸಕ್ತಿಯ ಸ್ವಲ್ಪ ಅಂಶವಾದರೂ ಕಲ್ಯಾಣ ಸುಂದರಮ್‌ರಂತಹ ನಿಜವಾದ ಹೀರೋಗಳ ಬಗ್ಗೆ ಇಲ್ಲದಿರುವುದು!
     ಬಾಳದಾರಿಯಲ್ಲಿ ಸಾಗುವಾಗ ಹಲವು ಕವಲೊಡೆದ ದಾರಿಗಳು ಎದುರಾಗುತ್ತದೆ. ಯಾವ ದಾರಿ ಆರಿಸಿಕೊಳ್ಳುತ್ತೇವೆ ಎಂಬುದು ಮುಂದಿನ ಜೀವನವನ್ನು ನಿರ್ದೇಶಿಸುತ್ತದೆ. ಪಡೆಯುವ ಶಿಕ್ಷಣ, ಮಾಡುವ ಕೆಲಸ, ಆರಿಸಿಕೊಳ್ಳುವ ಸಂಗಾತಿ, ಪ್ರವೃತ್ತಿ, ಹವ್ಯಾಸಗಳು, ಪರಿಸರ, ಸಹವಾಸ, ಸಂಭವಿಸುವ ಘಟನೆಗಳು, ಅನಿರೀಕ್ಷಿತ ಸಂಗತಿಗಳು, ಸೋಲುಗಳು, ಅವಮಾನಗಳು ಜೀವನದ ದಿಕ್ಕನ್ನು ಬದಲಾಯಿಸಬಲ್ಲವು. ಆರಿಸಿಕೊಳ್ಳುವ ದಾರಿ ಕುರಿತು ಜಾಗೃತರಾಗಿರಬೇಕು. ಏಕೆಂದರೆ ನಮ್ಮ ಮಕ್ಕಳೂ ಸಹ ಆ ದಾರಿಯಲ್ಲಿ ಸಾಗುತ್ತಾರೆ! ದಾರಿ ಒಳ್ಳೆಯದಿದ್ದರೆ ಮಕ್ಕಳಿಗೂ, ಸಮಾಜಕ್ಕೂ ಒಳಿತು. ಇಲ್ಲದಿದ್ದರೆ ಸಮಾಜವಿರಲಿ, ಮಕ್ಕಳೂ ನಮ್ಮನ್ನು ಶಪಿಸುತ್ತಾರೆ.
     ಮಹಾಮಹಿಮರುಗಳು ಬದುಕಿನಲ್ಲಿ ಎದುರಿಸಿದ ಸಂದರ್ಭಗಳು ಅವರನ್ನು ಆ ಸ್ಥಾನಕ್ಕೆ ಏರಿಸಿದವು ಎಂಬುದನ್ನು ಗಮನಿಸಬೇಕು. ರಾಮ, ಕೃಷ್ಣ, ಏಸುಕ್ರಿಸ್ತರ ದೇವತ್ವಕ್ಕೆ ಸಹ ಇವೇ ಕಾರಣಗಳು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ವರ್ಣಬೇಧ ನೀತಿಯಿಂದ ಎದುರಿಸಿದ ಹಿಂಸೆ, ಅನ್ಯಾಯಗಳು ಅವರನ್ನು ಗಟ್ಟಿಗೊಳಿಸಿದವು. ಆಚರಣೆಯಲ್ಲಿದ್ದ ತಾರತಮ್ಯಗಳಿಂದ ನೊಂದ ಬಸವಣ್ಣ ತಾರತಮ್ಯರಹಿತ ಸಮಾಜನಿರ್ಮಾಣಕ್ಕೆ ಮುಂದುವರೆದರು. ಹಿಂದುಳಿದವರ, ದಲಿತರ ಹರಿಕಾರರಾಗಿ ಅಂಬೇಡ್ಕರ್ ಹೊರಹೊಮ್ಮಿದ್ದೂ ಹೀಗೆಯೇ!
     ಕುಪ್ರಸಿದ್ಧ ವ್ಯಕ್ತಿಗಳು ತಯಾರಾಗುವುದಕ್ಕೂ ಕಾರಣಗಳಿರುತ್ತವೆ. ಭ್ರಷ್ಠ ಆಡಳಿತ ವ್ಯವಸ್ಥೆ, ಭ್ರಷ್ಠ ನಾಯಕರುಗಳು ಖಳನಾಯಕರುಗಳ ನಿರ್ಮಾಣಕ್ಕೆ ಸಹಕಾರಿಗಳು. ಕೆಲವು ಸಂದರ್ಭಗಳಲ್ಲಿ ಪೋಲಿಸ್ ಠಾಣೆಗಳು ಮತ್ತು ಬಂದೀಖಾನೆಗಳೂ ಪಾತಕಿಗಳ ಉಗಮಕ್ಕೆ ಕಾರಣವಾಗುತ್ತವೆ. ನನ್ನದೇ ಉದಾಹರಣೆ ಕೊಡಬಯಸುವೆ. 1975-77ರ ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನೆಂಬ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರದಿಂದ ಅನುಭವಿಸಿದ ಅಕಾರಣ ತೊಂದರೆಗಳು, ಹಿಂಸೆಗಳು, ಜೈಲುವಾಸ, ಸುಳ್ಳು ಕ್ರಿಮಿನಲ್ ಮೊಕದ್ದಮೆಗಳು, ನನ್ನ ಮನೆಯವರು ಹಾಕಿದ್ದ ಕಣ್ಣೀರುಗಳು ನನ್ನನ್ನು ಒಬ್ಬ ಹಿಂಸಾವಾದಿಯನ್ನಾಗಿಸಲು ಸಾಕಿತ್ತು. ನಿಮಗೆ ಆಶ್ಚರ್ಯವಾಗಬಹುದು, ನಾನು ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಪೋಲಿಸ್ ಅಧಿಕಾರಿಯೂ ಸೇರಿದಂತೆ ಬಹಳ ತೊಂದರೆ ನೀಡಿದ ಹಲವಾರು ಜನರನ್ನು ಕೊಲೆ ಮಾಡಲು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಅಷ್ಟು ರೋಸಿಹೋಗಿದ್ದೆ. ನನ್ನ ನೌಕರಿ ಹೋಗಿತ್ತು, ಮತ್ತೆ ಸಿಗುತ್ತದೆಂಬ ಆಸೆಯಿರಲಿಲ್ಲ. ಜೈಲಿನ ಗೋಡೆಗೊರಗಿ ಕುಳಿತಾಗ ಯಾರನ್ನು ಹೇಗೆ ಮುಗಿಸಬೇಕೆಂಬ ಯೋಜನೆ ಮನದಲ್ಲೇ ರೂಪುಗೊಳ್ಳುತ್ತಿತ್ತು. ಯಾವ ಆರೆಸ್ಸೆಸ್ಸನ್ನು ಹಿಂಸೆಗೆ ಪ್ರಚೋದಿಸುವವರೆಂದು ಪೂರ್ವಾಗ್ರಹಪೀಡಿತರು ದೂಷಿಸುತ್ತಾರೋ, ಅಂತಹ ಆರೆಸ್ಸೆಸ್ಸಿನ ಹಿರಿಯರ ನಡವಳಿಕೆಗಳು ಮತ್ತು ಮಾರ್ಗದರ್ಶನಗಳು ನನ್ನನ್ನು ಹಿಂಸಾಮಾರ್ಗದಿಂದ ವಿಮುಖ ಮಾಡಿದವೆಂಬುದು ಸತ್ಯಸಂಗತಿ. ಒಂದೊಮ್ಮೆ ಎಡವಿದ್ದಿದ್ದರೆ ಅದೇ ದಾರಿಯಲ್ಲಿ ಮುಂದುವರೆಯಬೇಕಾದ ಅನಿವಾರ್ಯತೆ ನನಗೆ ಬರುತ್ತಿತ್ತು. ನಕ್ಸಲೀಯರು, ಉಗ್ರಗಾಮಿಗಳು ತಯಾರಾಗುವುದು ಹೀಗೆಯೇ!
     ಭಾರತದ ಕಾಶ್ಮೀರ ಕಣಿವೆಯ ದುರಂತ ಸ್ಥಿತಿಗೆ ಕಾರಣ, ಸಮಸ್ಯೆಯನ್ನು ಸರಿಯಾಗಿ ಗ್ರಹಿಸದೆ ಅಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದೇ ಎಂಬುದು ನಿರ್ವಿವಾದ. ಇಂತಹ ತಿರುವುಗಳೇ ಭಾರತವನ್ನು ಹಿಂದೆ ಮೊಘಲರ ಮತ್ತು ನಂತರ ಬ್ರಿಟಿಷರ ದಾಸ್ಯಕ್ಕೆ ದೂಡಿದ್ದುದು. ಪ್ಲಾಸಿ ಕದನದಲ್ಲಿ ರಾಬರ‍್ಟ್ ಕ್ಲೈವನಿಗೆ ಸಹಾಯ ಮಾಡಿದ ಮೀರ್ ಜಾಫರನಿಂದಾಗಿ ಭಾರತ ಎರಡು ಶತಮಾನಗಳ ಕಾಲ ದಾಸ್ಯಕ್ಕೊಳಗಾಗಬೇಕಾಯಿತು. ಬ್ರಿಟಿಷರು ಮತ್ತು ಸಿಖ್ಖರ ನಡುವಣ ಯುದ್ಧದಲ್ಲಿ ಬ್ರಿಟಿಷರಿಗೆ ನೆರವಾದ ಲಾಭಸಿಂಗ್, ಪೃಥ್ವಿರಾಜನನ್ನು ದ್ವೇಷಿಸುತ್ತಿದ್ದ ರಾಜ ಜಯಸಿಂಗನ ದ್ರೋಹದಿಂದಾಗಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟ ಭಾರತ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಜೊತೆಗಾರ ಕ್ರಾಂತಿಕಾರರನ್ನೇ ಹಿಡಿದುಕೊಟ್ಟ ಸಹಚರರು, ಭಾರತದ ವಿಮುಕ್ತಿಗಾಗಿ ಸೈನ್ಯವನ್ನೇ ಕಟ್ಟಿ ಹೋರಾಡುತ್ತಿದ್ದ ನೇತಾಜಿ ಸುಭಾಷಚಂದ್ರಬೋಸರ ವಿರುದ್ಧ ಮಸಲತ್ತು ಮಾಡಿದ ಕಾಂಗ್ರೆಸ್ ನಾಯಕರ ಕುತಂತ್ರಗಳು ದೇಶದ ಕಾಲೆಳೆದವು.
     ಭಯೋತ್ಪಾದಕರ ಉಪಟಳ ಇಂದು ಮೇರೆ ಮೀರಿದೆ. ನಮ್ಮ ದೇಶದಲ್ಲೇ ಇದ್ದು, ದೇಶದ ಉಪ್ಪು ತಿಂದು ಬೆಳೆಯುತ್ತಿರುವ ಅನೇಕರು ಬಹಿರಂಗವಾಗಿ ದೇಶವನ್ನು ಹೀನಾಯವಾಗಿ ಟೀಕಿಸುವುದು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ಒಟ್ಟು ಸಾಮಾಜಿಕ ಹಿತವನ್ನು ಗೌಣವಾಗಿಸಿ ಜಾತಿ, ಮತ, ಪಂಥ, ಲಿಂಗ, ಎಡವಿಚಾರ, ಬಲವಿಚಾರ ಎಂಬ ಸುಳಿಗಳಲ್ಲಿ ಜನರನ್ನು ಸಿಲುಕಿಸಿ ದೇಶವನ್ನು ಪಾತಾಳಕ್ಕೆ ಜಾರಿಸುವವರ ಕೈ ಮೇಲಾಗಿದೆ. ಇಂತಹ ಸ್ಥಿತಿಯಲ್ಲಿ ಉತ್ತಮ ಶಿಕ್ಷಣ ಪದ್ಧತಿ ಮತ್ತು ಅಭಿವೃದ್ಧಿಯ ಕಡೆಗೆ ಗಮನ ಮಾತ್ರ ದೇಶವನ್ನು ಉತ್ತಮ ತಿರುವಿಗೆ ತಂದು ನಿಲ್ಲಿಸಬಲ್ಲವು. ಬದಲಾವಣೆಯನ್ನು ವಿರೋಧಿಸುವ ಅರಾಜಕತಾವಾದಿಗಳ ಹಿಡಿತವನ್ನು ಸಡಿಲಿಸಬೇಕಿದೆ. ಕೇಸರೀಕರಣ, ಹಸಿರೀಕರಣ, ಎಡವಾದ, ಬಲವಾದ, ಇತ್ಯಾದಿ ಬದಿಗಿಟ್ಟು ಪೂರ್ವಾಗ್ರಹಪೀಡಿತರಾಗದೆ ದೇಶಕ್ಕೆ ಅಗತ್ಯವಿರುವುದಾದರೂ ಏನು ಎಂಬ ಬಗ್ಗೆ ಚಿಂತಿಸಬೇಕಿದೆ.    
     ಉತ್ತಮ ಆಧರ್ಶಗಳನ್ನು ಇಟ್ಟುಕೊಳ್ಳುವ, ನೈತಿಕತೆಗೆ ಬೆಲೆ ಕೊಡುವ ಸಮಾಜ ಮಾತ್ರ ಏಳಿಗೆ ಸಾಧಿಸಬಲ್ಲದು. ಪರಸ್ಪರರ ಏಳಿಗೆಯನ್ನು ಬಯಸುವ ಜನರೇ ನಿಜವಾದ ನಾಗರಿಕರೆನಿಸಬಲ್ಲರು. ಜಾತಿ, ಮತ, ಧರ್ಮ, ಪಂಥ, ಇತ್ಯಾದಿಗಳು ವೈಯಕ್ತಿಕ ಆಚರಣೆಗಳಿಗಷ್ಟೇ ಸೀಮಿತಗೊಳ್ಳಬೇಕು. ಒಟ್ಟು ದೇಶದ, ಸಮಾಜದ ಹಿತ ಪರಿಗಣನೆಗೆ ಬಂದಾಗ ಇವಾವುದೂ ಅಡ್ಡಿಯಾಗಬಾರದು. ಹಿಂದುಳಿದವರು, ಅಶಕ್ತರು, ದುರ್ಬಲರು, ಹೀನ-ದೀನ ಸ್ಥಿತಿಯಲ್ಲಿರುವವರು ಯಾರೇ ಆಗಲಿ ಅವರನ್ನು ಜಾತಿ/ಧರ್ಮಗಳ ಕನ್ನಡಕಗಳಿಂದ ನೋಡದೇ ಮುಂದೆ ತರುವ ಪ್ರಾಮಾಣಿಕ ಪ್ರಯತ್ನ ನಡೆದರೆ ಮಾತ್ರ ದೇಶದ ಉದ್ಧಾರ ಸಾಧ್ಯ, ಇಲ್ಲದಿದ್ದರೆ ಖಂಡಿತಾ ಸಾಧ್ಯವಿಲ್ಲ. ಸತ್ಯಂ ಬೃಹದೃತಮುಗ್ರಂ ದೀಕ್ಷಾ ತಪೋ ಯಜ್ಞಃ ಪೃಥಿವೀಂ ಧಾರಯಂತಿ| ಸಾ ನೋ ಭೂತಸ್ಯ ಭವ್ಯಸ್ಯ ಪತ್ನ್ಯುರುಂ ಲೋಕಂ ಪೃಥಿವೀ ನಃ ಕೃಣೋತು|| (ಅಥರ್ವ.೧೨.೧.೧.) 'ಸತ್ಯ, ಮನೋವೈಶಾಲ್ಯ, ನ್ಯಾಯ, ಪರಾಕ್ರಮ, ವ್ರತನಿಷ್ಠೆ, ಕಷ್ಟಸಹಿಷ್ಣುತೆ, ವೇದಜ್ಞಾನ ಮತ್ತು ತ್ಯಾಗಭಾವಸಂಪನ್ನ ಸತ್ಕರ್ಮ ಇವು ಭೂಮಿಯನ್ನು ಉದ್ಧರಿಸುತ್ತವೆ. ನಮ್ಮ ಅತೀತದ ಮತ್ತು ಭವಿಷ್ಯದ ಪಾಲಿಕೆಯಾದ ಭೂಮಿಯು ನಮಗಾಗಿ ವಿಶಾಲವಾದ ರಾಷ್ಟ್ರವನ್ನು ಉಂಟುಮಾಡಲಿ' ಎಂಬುದು ಇದರ ಸಂದೇಶವಾಗಿದೆ. ಈ ಗುಣಗಳನ್ನು ಮೈಗೂಡಿಸುವ ನೈಜ ಶಿಕ್ಷಣವನ್ನು ನಮ್ಮ ಮಕ್ಕಳಾದರೂ ಪಡೆಯುವ ಸಲುವಾಗಿ ಯೋಜಿಸುವ ಹೊಣೆ ನಮ್ಮದೇ ಆಗಿದೆ.
-ಕ.ವೆಂ.ನಾಗರಾಜ್.

1 ಕಾಮೆಂಟ್‌: