ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 10, 2010

ಸೇವಾ ಪುರಾಣ -೧೩: ಸರಳುಗಳ ಹಿಂದಿನ ಲೋಕ -೬: ಹೀಗೊಂದು ಸತ್ಯಾಗ್ರಹ

ಸ್ವಾರಸ್ಯಕರ ಘಟನೆಗಳು
     ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ದೇಶಾದ್ಯಂತ ಕಾವೇರತೊಡಗಿ ಹಾಸನ ಜಿಲ್ಲೆಯಲ್ಲಿಯೂ ಪ್ರ್ರತಿಭಟನೆ ನಡೆಸಿ ಜೈಲು ಸೇರಿದವರಿಗೆ ಕಡಿಮೆಯಿರಲಿಲ್ಲ.ಹೆಚ್ಚಿನ ಸತ್ಯಾಗ್ರಹಿಗಳು ಆರೆಸ್ಸೆಸ್ ನವರಾಗಿದ್ದರು. ನಂತರದವರು ಜನಸಂಘದವರು. ಇತರ ವಿರೋಧ ಪಕ್ಷಗಳವರು ಪ್ರತಿಭಟನೆಯಲ್ಲಿ ಪಾಲ್ಗೊಂಡರೂ ಸಂಖ್ಯಾತ್ಮಕವಾಗಿ ಸಾಂಕೇತಿಕವಾಗಿತ್ತು ಎಂದೇ ಹೇಳಬಹುದು. ಆದರೆ ಪ್ರಚಾರ ಪಡೆದುಕೊಂಡವರಲ್ಲಿ ಅವರೇ ಮೊದಲಿಗರು. ಹಾಸನದಲ್ಲಂತೂ ಬೇರೆ ವಿರೋಧಪಕ್ಷಗಳವರು ಯಾರೂ ಇರಲಿಲ್ಲ. ಶ್ರೀ ದೇವೇಗೌಡರನ್ನು ಬೆಂಗಳೂರಿನಲ್ಲಿ ಸರ್ಕಾರವೇ ಬಂಧಿಸಿಟ್ಟಿತ್ತು. ಅವರು ಚಳುವಳಿ ಮಾಡಿ ಬಂಧಿತರಾಗಿದ್ದ ಬಗ್ಗೆ ನೆನಪು ನನಗಿಲ್ಲ. ಸತ್ಯಾಗ್ರಹ ಮಾಡುವವರು ಮೊದಲೇ ಇಂತಹ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆಂದು ಜನರಿಗೆ ಕರಪತ್ರಗಳ ಮೂಲಕ ತಿಳಿಸಿ ಪ್ರತಿಭಟಿಸಿ ಬಂಧನಕ್ಕೊಳಗಾಗುತ್ತಿದ್ದರು. ಸತ್ಯಾಗ್ರಹ ತಪ್ಪಿಸಲು ಪೋಲಿಸರು ಮೊದಲೇ ಕೆಲವರನ್ನು ಬಂಧಿಸಿದರೂ ಬೇರೆಯವರು ಅಲ್ಲಿ ಸತ್ಯಾಗ್ರಹ ನಡೆಸುತ್ತಿದ್ದರು. ಕೆಲವೊಮ್ಮೆ ಪೋಲಿಸರನ್ನು ದಾರಿ ತಪ್ಪಿಸುವ ಸಲುವಾಗಿ ಬೇರೆ ಜನನಿಬಿಡ ಸ್ಥಳಗಳಲ್ಲಿ -ಅಂದರೆ, ಬಸ್ ನಿಲ್ದಾಣ, ಸಂತೆ,ಇತ್ಯಾದಿ- ಸತ್ಯಾಗ್ರಹ ನಡೆಸುತ್ತಿದ್ದರು. ಆಗ ಪೋಲಿಸರ ಪರದಾಟ ನೋಡಬೇಕಿತ್ತು. ಏನೇ ಆಗಲಿ ಚಳುವಳಿಗಳನ್ನು ಕಠಿಣವಾಗಿ ಹತ್ತಿಕ್ಕಲೇ ಬೇಕೆಂದು ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಕಟ್ಟಪ್ಪಣೆ ಮಾಡಿದ್ದವು. ಅನೇಕ ಸ್ವಾರಸ್ಯಕರ ಘಟನೆಗಳು ಚಳುವಳಿ ಕಾಲದಲ್ಲಿ ನಡೆಯುತ್ತಿದ್ದು ಹೋರಾಟಕ್ಕೆ ಜನಬೆಂಬಲ ಸಿಗತೊಡಗಿತ್ತು.
ಹೀಗೊಂದು ಸತ್ಯಾಗ್ರಹ
     ಸಕಲೇಶಪುರದ ದೇವಾಲದಕೆರೆ ಲೋಕೇಶಗೌಡರು ತಮ್ಮ ಹತ್ತು ಜನರ ತಂಡದೊಂದಿಗೆ ಹಾಸನದ ನರಸಿಂಹರಾಜ ವೃತ್ತದಲ್ಲಿ ತುರ್ತು ಪರಿಸ್ಥಿತಿ ಪ್ರತಿಭಟಿಸಿ ಸತ್ಯಾಗ್ರಹ ಮಾಡಲಿರುವ ಬಗ್ಗೆ ಮೂರು ದಿನಗಳ ಮೊದಲೇ ಪ್ರಚುರಪಡಿಸಿದ್ದರು. ಪೋಲಿಸರು ಪೂರ್ವಭಾವಿಯಾಗಿ ಬಂಧಿಸಲು ನೋಡಿದರೆ ಎಲ್ಲರೂ ತಲೆ ಮರೆಸಿಕೊಂಡಿದ್ದರು. ಪೋಲಿಸರು ಶತಾಯ ಗತಾಯ ಪ್ರತಿಭಟನೆ ನಡೆಯದಿರುವಂತೆ ನೋಡಿಕೊಳ್ಳಲು ಸಂಕಲ್ಪ ಮಾಡಿದ್ದಂತೆ ಅಂದು ರಸ್ತೆಯಲ್ಲಿ ಸಂಚಾರವನ್ನೇ ನಿರ್ಬಂಧಿಸಿಬಿಟ್ಟಿದ್ದರು. ಯಾರಾದರೂ ಆ ರಸ್ತೆಯಲ್ಲಿ ಕಾರಣವಿಲ್ಲದೆ ನಿಲ್ಲುವಂತೆಯೇ ಇರಲಿಲ್ಲ. ಬರುವ ವಾಹನಗಳನ್ನೆಲ್ಲಾ ಹಿಂದಿನ ಮತ್ತು ಮುಂದಿನ ರಸ್ತೆಗಳಲ್ಲಿ ತಡೆದು ಪರಿಶೀಲಿಸಿ ಬೇರೆ ರಸ್ತೆಗಳಲ್ಲಿ ಹೋಗುವಂತೆ ನಿರ್ದೇಶಿಸುತ್ತಿದ್ದರು. ಅನುಮಾನ ಬಂದವರನ್ನು ಹಿಡಿದಿರಿಸಿಕೊಳ್ಳುತ್ತಿದ್ದರು. ಆ ಸಮಯಕ್ಕೆ ಒಂದು ಮೆಟಡಾರ್ ಅಲ್ಲಿಗೆ ಬಂತು. ಅಪಾಯಸ್ಥಿತಿಯಲ್ಲಿ ಗಾಯಗೊಂಡು ಮೈಯೆಲ್ಲಾ ಬ್ಯಾಂಡೇಜು ಹಾಕಿದ್ದರೂ ರಕ್ತ ಒಸರುತ್ತಿದ್ದ ಗಾಯಾಳುವನ್ನು ಬಂಧುಗಳು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದುದನ್ನು ನೋಡಿದ ಪೋಲಿಸರು ಮಾನವೀಯತೆ ತೋರಿಸಿ ಆ ರಸ್ತೆಯಲ್ಲೇ ಹೋಗಲು ಬಿಟ್ಟರು. ದುರದೃಷ್ಟಕ್ಕೆ ಆ ವ್ಯಾನು ಸರ್ಕಲ್ಲಿನಲ್ಲೇ ಕೆಟ್ಟು ನಿಂತುಬಿಟ್ಟಿತು. ಅದನ್ನು ಪಕ್ಕಕ್ಕೆ ನಿಲ್ಲಿಸಲು ಬಂಧುಗಳು ಇಳಿದಾಗ ಪೋಲಿಸರೂ ತಳ್ಳಿ ಸಹಕರಿಸಿದರು. ಬೇರೆ ವಾಹನ ತರುವುದಾಗಿ ಹೇಳಿ ನಾಲ್ವರು ನಾಲ್ಕು ರಸ್ತೆಗಳಲ್ಲಿ ಹೊರಟು ಅಲ್ಲಿ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ಪೋಲಿಸರು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ ಗಾಯಾಳು ಒಂದು ಕೈಯಲ್ಲಿ ಕೇಸರಿ ದ್ವಜ ಮತ್ತು ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ವ್ಯಾನಿನಿಂದ ಕೆಳಗೆ ಧುಮುಕಿ 'ಭಾರತಮಾತಾ ಕಿ ಜಯ್', 'ವಂದೇ ಮಾತರಂ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ', ಇತ್ಯಾದಿ ಘೋಷಣೆಗಳನ್ನು ಹಾಕತೊಡಗಿದ. ಉಳಿದವರೂ ಧ್ವನಿಗೂಡಿಸಿದರು. ಕರಪತ್ರಗಳನ್ನು ತೂರಾಡಿದರು. ಅದು ಮೈಗೆಲ್ಲಾ ಬ್ಯಾಂಡೇಜು ಹಾಕಿಕೊಂಡು ಕೆಂಪು ಇಂಕು ಸುರಿದುಕೊಂಡು ಪೋಲಿಸರನ್ನು ಏಮಾರಿಸಿದ ಲೋಕೇಶಗೌಡ ಮತ್ತು ಅವರ ತಂಡದವರು ನಡೆಸಿದ ಸತ್ಯಾಗ್ರಹದ ಪರಿಯಾಗಿತ್ತು.
     ಇಂತಹುದೇ ಚಳುವಳಿಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿತ್ತು. ನಿಜವಾದ ಶವದಂತೇ ಸಿಂಗರಿಸಿದ್ದ ಗೊಂಬೆಯ ಒಳಗೆ ಪಟಾಕಿಗಳನ್ನು ತುಂಬಿ ಶವಮೆರವಣಿಗೆಯಂತೆ ಯಾರಿಗೂ ಅನುಮಾನ ಬರದಂತೆ ಹೊತ್ತೊಯ್ದು ರಸ್ತೆಯ ಮಧ್ಯಭಾಗದಲ್ಲಿಟ್ಟು ಪಟಾಕಿಗೆ ಬೆಂಕಿ ಹಚ್ಚಿಬಿಡುತ್ತಿದ್ದರು. ಘೋಷಣೆಗಳನ್ನು ಹಾಕಿ ಕರಪತ್ರಗಳನ್ನು ಹಂಚುತ್ತಿದ್ದರು. ವಿಪರ್ಯಾಸವೆಂದರೆ ಜನ ಕರಪತ್ರಗಳನ್ನು ಬಹಿರಂಗವಾಗಿ ಓದಲು ಹೆದರುತ್ತಿದ್ದರು. ಕದ್ದುಮುಚ್ಚಿ ಓದುತ್ತಿದ್ದರು. ಸತ್ಯಾಗ್ರಹಗಳು ಹೆಚ್ಚಾದಂತೆ ಜೈಲುಗಳು ತುಂಬಿ ತುಳುಕಲಾರಂಭಿಸಿದವು. ಹೆಚ್ಚಾದವರನ್ನು ಬಳ್ಳಾರಿ, ಮೈಸೂರು, ಬೆಳಗಾಂ ಜೈಲುಗಳಿಗೆ ಕಳಿಸುತ್ತಿದ್ದರು. ಅಲ್ಲೂ ಸ್ಥಳವಿಲ್ಲದೆ ಕಳಿಸಬಾರದೆಂದು ಅಲ್ಲಿಂದ ಸೂಚನೆಗಳು ಬರಹತ್ತಿದವು. ಹೀಗಾಗಿ ಚಳುವಳಿ ಮಾಡಿದವರನ್ನು ಒಂದು ದಿನ ಠಾಣೆಯಲ್ಲಿರಿಸಿಕೊಂಡು ಹೊಡೆದು, ಬಡಿದು, ಎಚ್ಚರಿಕೆ ಕೊಟ್ಟು ಬಿಟ್ಟುಕಳಿಸುತ್ತಿದ್ದರು. ಹೇಗೂ ಬಿಟ್ಟುಬಿಡುತ್ತಾರೆಂದು ಸತ್ಯಾಗ್ರಹದಲ್ಲಿ ಭಾಗವಹಿಸಿದವರನ್ನು ಬಂಧಿಸಿ ಜೈಲಿಗೆ ತಂದು ಬಿಟ್ಟ ಸಂದರ್ಭಗಳಲ್ಲಿ ಅವರ ಗೋಳು ಕಂಡು ನಮಗೆ ನಗು ಬರುತ್ತಿತ್ತು.
ಜೈಲಿನಲ್ಲಿ ತಿಥಿ ಊಟ!
     ಜೈಲಿನಲ್ಲಿ ರಾಜಕೀಯ ಬಂದಿಗಳ ಸಂಖ್ಯೆ ಜಾಸ್ತಿಯಾದಂತೆ ಜೈಲು ಸಿಬ್ಬಂದಿಗೆ ಕೆಲಸ ಕಷ್ಟವಾಯಿತು. ಜೈಲಿನ ಒಳಗಡೆ ಸ್ಥಳಾವಕಾಶ ಬೇರೆ ಕಡಿಮೆಯಿತ್ತು. ಹೀಗಾಗಿ ರಾತ್ರಿ ಹೊತ್ತು ಮಾತ್ರ ನಮ್ಮ ಬ್ಯಾರಕ್ ಗೆ ಬೀಗ ಹಾಕುತ್ತಿದ್ದರು. ಜೈಲಿನ ಒಳ ಆವರಣದಲ್ಲಿ ಹಗಲಿನಲ್ಲಿ ನಾವು ಆರಾಮವಾಗಿ ಓಡಾಡಿಕೊಂಡಿದ್ದೆವು. ಎಲ್ಲರಲ್ಲೂ ಒಳಗೆ ಹುದುಗಿದ್ದ ಪ್ರತಿಭೆ -ಅಂದರೆ ಹಾಡು ಹೇಳುವುದು, ಕಥೆ ಹೇಳುವುದು, ಮಿಮಿಕ್ರಿ ಮಾಡುವುದು, ಚರ್ಚೆ ಮಾಡುವುದು, ಇತ್ಯಾದಿ- ಹೊರಬರಲು ಜೈಲು ಅವಕಾಶ ಮಾಡಿಕೊಟ್ಟಿತು. ಇಲ್ಲದಿದ್ದರೆ ಸಮಯ ಕಳೆಯಬೇಕಲ್ಲಾ! ಯಾವುದೂ ಬೇಕಿಲ್ಲದೆ ಒಂದೆಡೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲೂ ಸಮಯವಿತ್ತು. ಒಮ್ಮೆ ಇಂದಿರಮ್ಮನ ತಿಥಿ ಊಟ ಮಾಡಬೇಕನ್ನಿಸಿ ಜೈಲರರನ್ನು ಕೋರಿಕೊಂಡು ನಿತ್ಯ ಕೊಡುವ ಆಹಾರ ಸಾಮಗ್ರಿಗಳ ಬದಲಿಗೆ ಬೇರೆ ಸಾಮಗ್ರಿ ತರಿಸಿಕೊಂಡು ವಡೆ, ಪಾಯಸ ಮಾಡಿದ್ದೆವು. ಜೈಲರರೂ ಮತ್ತು ಜೈಲು ಸಿಬ್ಬಂದಿ ಸಹ ನಮ್ಮೊಡನೆ ಊಟ ಮಾಡಿದರು. ಆಗ ಆವರಣದಲ್ಲಿದ್ದ ಒಣ ತೆಂಗಿನಗರಿಗಳು, ಒಣಗಿದ ಎಲೆ, ಪುಳ್ಳೆಗಳನ್ನು ಸೇರಿಸಿ ಬೆಂಕಿ ಹಾಕಿ ಸುತ್ತಲೂ ಕುಣಿದಿದ್ದೆವು. ಆಗ ಬಂದಿಗಳೆಲ್ಲಾ ಬಾಯಿ ಬಾಯಿ ಬಡಿದುಕೊಂಡು 'ಸತ್ತಳಪ್ಪ ಸತ್ತಳೋ, ಇಂದಿರವ್ವ ಸತ್ತಳೋ', 'ಅಯ್ಯಯ್ಯೋ ಸತ್ತಳೋ' ಎಂದು ಗಟ್ಟಿಯಾಗಿ ಅಳುತ್ತಿದ್ದಂತೆ ಮಾಡುತ್ತಿದ್ದ ದೃಷ್ಯ ಮರೆಯಲಾಗಿಲ್ಲ.ಇನ್ನೊಂದು ಬ್ಯಾರಕ್ಕಿನಲ್ಲಿದ್ದ ಇತರೆ ಕೈದಿಗಳೂ ಸಹ ಒಳಗಿನಿಂದಲೇ ನಮ್ಮೊಡನೆ ಬಾಯಿ ಬಡಿದುಕೊಂಡು ಬೆಂಬಲ ಕೊಟ್ಟಿದ್ದರು. ಇಂದಿರಾಗಾಂಧಿಯವರ ಅಭಿಮಾನಿಗಳಿಗೆ ಈ ಘಟನೆ ಇಷ್ಟವಾಗದಿರಬಹುದು. ಆಕೆ ಒಬ್ಬ ದಕ್ಷ ಆಡಳಿತಗಾರ್ತಿಯಾಗಿದ್ದಿರಬಹುದು. ಆದರೆ ಅಧಿಕಾರದಲ್ಲಿ ಏನನ್ನೂ ಮಾಡಲು ಹೇಸದಿದ್ದ ಆಕೆಯ ವರ್ತನೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಅರ್ಥವಿತ್ತು ಎಂಬುದು ನನ್ನ ಭಾವನೆ. ಅಲ್ಲದೆ ನಾನು ನಡೆದಿದ್ದ ಘಟನೆಯ ನಿರೂಪಣೆ ಮಾಡುತ್ತಿದ್ದೇನಷ್ಟೆ. 1975ರ ಆಸುಪಾಸಿನಲ್ಲಿ ಜನಿಸಿದವರಿಗೆ ತುರ್ತು ಪರಿಸ್ಥಿತಿಯ ಕರಾಳತೆಯ ಅರಿವಿಲ್ಲದಿರಬಹುದು. ಇಂದಿರಾಗಾಂಧಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ರುಜುವಾತಾಗಿ ಆಕೆ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅಲಹಾಬಾದ್ ಉಚ್ಛನ್ಯಾಯಾಲಯದ ಆದೇಶದ ನಂತರದಲ್ಲಿ ಆಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು.ಹಲವಾರು ಸಂಘ ಸಂಸ್ಥೆಗಳನ್ನು ನಿಷೇಧಿಸಿದರು. ಅಧಿಕಾರದಲ್ಲಿ ಮುಂದುವರೆಯಲು ಲೋಕಸಭೆಯ ಅವಧಿಯನ್ನೇ 5 ವರ್ಷಗಳಿಂದ 7ವರ್ಷಗಳಿಗೆ ವಿಸ್ತರಿಸಲಾಯಿತು. ಪತ್ರಿಕಾ ಸೆನ್ಸಾರ್ ಜಾರಿಗೆ ಬಂತು. ದೇಶದ ಹೆಚ್ಚಿನ ಪತ್ರಿಕೆಗಳು ಸಂಪಾದಕೀಯದ ಭಾಗವನ್ನು ಖಾಲಿ ಬಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದವು. ಕಾಂಗ್ರೆಸ್ ವಿರೋಧಿ ಸುದ್ದಿಗಳು ಬರಲು ಅವಕಾಶವೇ ಇರಲಿಲ್ಲ. ಸರ್ಕಾರಿ ಮಾಧ್ಯಮಗಳು, ಆಕಾಶವಾಣಿ ಕಾಂಗ್ರಸ್ ತುತ್ತೂರಿಗಳಾಗಿದ್ದವು. ರಾತ್ರೋರಾತ್ರಿ ನೂರಾರು ವಿರೋಧ ಪಕ್ಷಗಳ ನಾಯಕರುಗಳನ್ನು, ಸಂಘ, ಸಂಸ್ಥೆಗಳ- ವಿಶೇಷವಾಗಿ ಆರೆಸ್ಸೆಸ್ಸಿನ- ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧನ ಕಾರ್ಯ ನಿರಂತರವಾಗಿತ್ತು. ಕಾಂಗ್ರೆಸ್ ವಿರುದ್ಧ ಯಾರೂ ಸೊಲ್ಲೆತ್ತಬಾರದೆಂಬುದು ಉದ್ದೇಶವಾಗಿತ್ತು. ಸಾಮಾನ್ಯ ಜನರೂ ಸಹ ಮುಕ್ತವಾಗಿ ಮಾತನಾಡಲು ಅಂಜುವಂತಹ ವಾತಾವರಣ ನಿರ್ಮಿತವಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಿಡಲು ಅವಕಾಶ ಕೊಡುವ ಕರಾಳ 'ಮೀಸಾ' ಕಾಯದೆ ಜಾರಿಗೊಳಿಸಲಾಯಿತು. ಈಗ ಓದುಗರಿಗೆ ಬಂಧಿಗಳ ಆಕ್ರೋಶ ಅರ್ಥವಾಗಿರಬಹುದು.

(ಕಾಲಘಟ್ಟ: 1976) .. ಮುಂದುವರೆಯುವುದು.

2 ಕಾಮೆಂಟ್‌ಗಳು:

  1. Raghu S P
    11AUG2010 4:13
    ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುವಂತಿದೆ ನಿಮ್ಮ ಬರಹ

    Kavinagaraj
    11AUG2010 8:43
    ಧನ್ಯವಾದಗಳು, ರಘು.

    Ksraghavendranavada
    11AUG2010 7:20
    ಎ೦ದಿನ೦ತೆ ಕುತೂಹಲಕಾರಿಯಾಗಿ ಓದಿಸಿಕೊ೦ಡು ಹೋಗುವ ಶೈಲಿ. ಮು೦ದುವರೆಯಲಿ. ನಮಸ್ಕಾರಗಳೊ೦ದಿಗೆ,

    ASHOKKUMAR
    11AUG2010 7:31
    ಸಾಮಾನ್ಯ ಸಂದರ್ಭಗಳಲ್ಲೂ ಜೈಲುಗಳು ತುಂಬಿ ತುಳುಕುವ ಪರಿಸ್ಥಿತಿ ಈಗ ಇದೆ. ಮೊದಲು ಹಾಗಿರಲಿಲ್ಲವೇ?

    Kavinagaraj
    11AUG2010 9:21
    ಆಗಲೂ ಸಹ ಜೈಲಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೈದಿಗಳಿರುತ್ತಿದ್ದರು. ಹಾಸನದ ಜೈಲಿನಲ್ಲಿ 1975ರಲ್ಲಿ 38 ಕೈದಿಗಳನ್ನು ಇಡಲು ಮಾತ್ರ ಅವಕಾಶವಿತ್ತು. ಆದರೆ ಅಲ್ಲಿ 250ಕ್ಕೂ ಹೆಚ್ಚಿನವರನ್ನು ಬಂಧಿಸಿಡಲಾಗಿತ್ತು. ರಾಜಕೀಯ ಬಂದಿಗಳಿಗಿಂತ ಇತರೆ ಕಾರಣಗಳಿಗಾಗಿ ಬಂಧಿತರಾಗಿದ್ದವರು ಹೆಚ್ಚಿನ ಹಿಂಸೆ ಅನುಭವಿಸಿದ್ದು ಸತ್ಯ.ಏಕೆಂದರೆ ಅವರನ್ನು ಹಗಲು ಹೊತ್ತಿನಲ್ಲೂ ಕೂಡಿಡಲಾಗುತ್ತಿತ್ತು. ಬಳ್ಳಾರಿ, ಬೆಳಗಾಂ, ಮೈಸೂರು ಜೈಲುಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿದೆ.

    Kavinagaraj
    11AUG2010 8:44
    ನಾವಡರೇ, ನಿಮ್ಮ ಪ್ರೋತ್ಸಾಹವೇ ಮುಂದುವರೆಯಲು ಪ್ರೇರಿಸುತ್ತಿದೆ.

    ಬೆಳ್ಳಾಲ ಗೋಪೀನಾಥ ರಾವ್
    11AUG2010 7:41
    ಎಂತಹ ಭೀಕರ !!
    ತಮ್ಮ ತಪ್ಪು ಅವರಿಗೆಲ್ಲಾ ಕೊನೆಗೂ ಅರ್ಥವಾಗಲೇ ಇಲ್ಲವಾ?

    Kavinagaraj
    11AUG2010 8:46
    ಗೋಪಿನಾಥರೇ, ಅವರುಗಳು ತಾವು ಮಾಡಿದ್ದು ತಪ್ಪು ಎಂದು ಅಂದುಕೊಂಡಿರಲೇ ಇಲ್ಲ. ಇನ್ನು ಪೋಲಿಸರು ಬಿಡಿ, ಆಗಲೂ ಒಂದೇ, ಈಗಲೂ ಒಂದೇ. ಅಂತರಾತ್ಮದ ಮಾತಿಗೆ ಕಿವಿಗೊಟ್ಟವರು ಕಡಿಮೆ.

    ಪ್ರತ್ಯುತ್ತರಅಳಿಸಿ
  2. ಹೊಳೆ ನರಸೀಪುರ ಮಂಜುನಾಥ
    11AUG2010 7:48
    ಕವಿ ನಾಗರಾಜರೆ, ನಿಮ್ಮ ಅನುಭವದ ಕಥೆಯನ್ನೋದಿ ಇದೇ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಚಿಕ್ಕಬಳ್ಳಾಪುರದ ಬಳಿಯ ಪೆರೇಸ೦ದ್ರ ಕ್ರಾಸಿನಲ್ಲಿ ಹತ್ತಾರು ಜನರು ಸೇರಿ ಚಕ್ಕುಲಿ, ಕೋಡುಬಳೆ ಹ೦ಚಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆ೦ಕಿ ಹಾಕಿ "ಇ೦ದಿರಮ್ಮನ ತಿಥಿ" ಆಚರಿಸಿದ್ದು ನೆನಪಿಗೆ ಬ೦ತು. ಆ ನಾಯಕರ ಹೆಸರೆಲ್ಲ ನನಗೆ ನೆನಪಿಲ್ಲ, ನಮ್ಮ ಜೊತೆ ಆಸ್ಪತ್ರೆಯ "ಕಡ್ಡಾಯ ಸ೦ತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರ"ಕ್ಕೆ ಕಾವಲಾಗಿ ಬ೦ದಿದ್ದ ಬೆ೦ಗಾವಲು ಪೊಲೀಸರು ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಚಿಕ್ಕಬಳ್ಳಾಪುರದ ಜೈಲಿಗೆ ದೂಡಿದ್ದರು. ಅ೦ದು ಆಯಮ್ಮ ಮಾಡಿದ ಕರ್ಮಕಾ೦ಡಕ್ಕೆ ಆಕೆಗೆ ಇಲ್ಲೇ ಶಿಕ್ಷೆ ಸಿಕ್ಕಿತಲ್ಲ ಎನ್ನುವುದೇ ಸ೦ತೋಷದ ವಿಷಯ. ಎಲ್ಲ ಕಲಿಯುಗದ ಮಹಿಮೆ, ಇಲ್ಲಿ ಮಾಡಿದ್ದನ್ನು ಇಲ್ಲೇ ತೀರಿಸಬೇಕ೦ತೆ! ಆದರೂ ಈ ದರಿದ್ರ ಕಾ೦ಗ್ರೆಸ್ಸಿಗರಿಗೆ ಬುದ್ಧಿ ಬ೦ದಿಲ್ಲವಲ್ಲ ಅನ್ನುವುದೇ ವಿಷಾದನೀಯ. http://sampada.net/a...

    Kavinagaraj
    11AUG2010 8:51
    ಮಂಜು, ನೀವು ಕಳೆದ ವರ್ಷ ಬರೆದಿದ್ದ ಲೇಖನ ಓದಿದೆ. ನಿಮ್ಮಪ್ಪ ಏಕೆ ಹಾಗೆ ಮಾಡಿದರೋ ಗೊತ್ತಿಲ್ಲ. ಬಹುಷಃ ನಿಮ್ಮಮ್ಮನಿಗೆ ಮತ್ತು ಡಾಕ್ಟರರಿಗೆ ಅನುಕೂಲವಾಗಲಿ ಎಂದು ಮಾಡಿರಬಹುದು. ಆದರೆ ಅದು ಸರಿಯಿರಲಿಲ್ಲ. ಹೋಗಲಿ ಬಿಡಿ.
    ಮೊನ್ನೆ ನಿಮ್ಮ ತಮ್ಮ ಶಿವಕುಮಾರ್ ಸಿಕ್ಕಿದ್ದ. ಆತ ನಿಮ್ಮ ತಮ್ಮ ಎಂದು ನನಗೆ ಗೊತ್ತಿರಲಿಲ್ಲ. ಆತನಿಂದಲೇ ಗೊತ್ತಾಯಿತು. ಖುಷಿಯಾಯಿತು.

    ಹೊಳೆ ನರಸೀಪುರ ಮಂಜುನಾಥ
    12AUG2010 11:03
    ಅವನು ಅಲ್ಲೇ ಹಾಸನದಲ್ಲೇ ಇದ್ದಾನೆ ಕವಿಗಳೆ, ಸಂತೃಪ್ತ ಜೀವನ ಅವನದು! ನನ್ನ ಪ್ರೀತಿಪಾತ್ರ ತಮ್ಮ ಅವನು.

    ಮನು
    12AUG2010 5:25
    ಮಂಜು,
    ಕಾಂಗ್ರೆಸ್ ನವರನ್ನು ಬಿಡಿ ಜನಗಳೇ ಇನ್ನೂ ಬುದ್ದಿಕಲಿತಿಲ್ಲವಲ್ಲ.ಅದಕ್ಕೆ ಏನು ಹೇಳೋಣ :)ಇನ್ನೂ ಸಿಕ್ಕ ಸಿಕ್ಕ ಸಂಸ್ಥೆಗಳಿಗೆಲ್ಲ ಆಕೆಯ ಹೆಸರಿಟ್ಟು ವೋಟು ಗಿಟ್ಟುವಂತೆ ಮಾಡಲು ಜನರ ಮೌಢ್ಯ ಕಾರಣವಲ್ಲವೇ?
    ನಾಗರಾಜರೆ,
    ನನ್ನ ತಂದೆ ಹೆಚ್ಚು ಮಾತಾಡೊದಿಲ್ಲ.ಆದರೆ ತುರ್ತು ಪರಿಸ್ಥಿತಿ ವಿಷಯ ಬಂದಾಗ "ನಿಮಗೆ ಏನ್ರೋ ಗೊತ್ತು ಆಗ ನಾವೆಷ್ಟು ಅನುಭವಿಸಿದ್ವಿ" ಅಂತ ಮಾತ್ರ ಹೇಳ್ತಾರೆ.
    ಮನು

    ಕೇಶವ ಮೈಸೂರು
    12AUG2010 12:17
    ಕವಿ ನಾಗರಾಜರವರಿಗೆ,
    ತುರ್ತು ಪರಿಸ್ಥಿತಿಯಿಂದಾಗಿ ನೀವು ಯಾವ ತಪ್ಪು ಮಾಡದಿದ್ದರೂ ಜೈಲುವಾಸ ಅನುಭವಿಸಿದ ನಂತರವೂ, ನಡೆದ ಘಟನೆಗಳನ್ನು "ನಿಷ್ಪಕ್ಷಪಾತ"ವಾಗಿ ನಿರೂಪಿಸುತ್ತಿರುವುದು ನಿಮ್ಮ ಸಹನೆ, ಸಂಯಮಶೀಲತೆ ಮತ್ತು ನಡತೆಗಳಿಗೆ ಹಿಡಿದ ಕನ್ನಡಿಯಂತಿದೆ. ಯಾವ ಭಾವಾತಿರೇಕಕ್ಕೂ ಒಳಗಾಗದ ನಿಮ್ಮ ನಿರೂಪಣಾ ಶೈಲಿ ಮತ್ತು ನಿಮ್ಮ ನಡವಳಿಕೆ ನಮಗೆಲ್ಲಾ ಮೇಲ್ಪಂಕ್ತಿಯಾಗಬೇಕು! ನಿಮ್ಮನ್ನು ಎಂದಾದರೊಮ್ಮೆ ಭೇಟಿಯಾಗಬೇಕೆನ್ನಿಸುತ್ತಿದೆ. ಕಾರಣ - "ಸಜ್ಜನರ ಸಹವಾಸ ...."
    ಗೌರವಪೂರ್ವಕ ನಮನಗಳೊಂದಿಗೆ
    ಕೇಶವ ಮೈಸೂರು

    Kavinagaraj
    12AUG2010 2:25
    ಮೈಸೂರು ಕೇಶವರಿಗೆ ನಮಸ್ಕಾರಗಳು. ನಿಮ್ಮ ಪ್ರತಿಕ್ರಿಯೆ ಸಂತಸ ತಂದಿದೆ. ನಿಮಗೆ ಸುಸ್ವಾಗತವಿದೆ. ಬರುವಾಗಲೊಮ್ಮೆ ದೂರವಾಣಿ/ಮಿಂಚೆ ಮೂಲಕ ಮಾಹಿತಿ ಕೊಡಿ. ವಂದನೆಗಳು.
    -ಕವಿನಾಗರಾಜ್.

    ಚೇತನ್ ಕೋಡುವಳ್ಳಿ
    12AUG2010 5:29
    ಲೋಕೇಶ್ಗೌಡರದ್ದು ಮಸ್ತ್ ಐಡಿಯಾ.
    ನಿಮ್ಮ ಸರಣಿ ಹೀಗೆ ಮುಂದುವರೆಯಲಿ

    Kavinagaraj
    12AUG2010 5:51
    ಚಿಕ್ಕೂ, ಮನ್ನು, ಇಬ್ಬರಿಗೂ ಪ್ರತಿಕ್ರಿಯೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು.

    ರಾಕೇಶ್ ಶೆಟ್ಟಿ
    13AUG2010 3:48
    ನಾಗರಾಜ್ ಸರ್,
    ಇಷ್ಟು ದಿನ ನಿಮ್ಮ ಲೇಖನ ಸರಣಿಯನ್ನ ಓದಿರಲಿಲ್ಲ, ಅದ್ಹೇಗೋ ಮಿಸ್ ಆಗಿತ್ತು.ನಿನ್ನೆ ನೋಡಿದೆ,ಒಂದರ ಹಿಂದೊಂದರಂತೆ ಎಲ್ಲ ಸರಣಿಗಳನ್ನ ಓದಿ ಮುಗಿಸಿದೆ.ನಿಮ್ಮ ಬರವಣಿಗೆಯ ಶೈಲಿಯು ಓದಿಸಿಕೊಂಡು ಹೋಗುತ್ತದೆ.
    ಓದಿ ಮುಗಿಸಿದ ನಂತರ ಈ ವ್ಯವಸ್ತೆಯ ಬಗ್ಗೆ ರೇಜಿಗೆ,ಆಕ್ರೋಶ.. ಮತ್ತು ಅಂತಾ ಕಷ್ಟದ ಸ್ಥಿತಿಯನ್ನ ಎದುರಿಸಿ ಪ್ರಾಮಾಣಿಕತೆಯನ್ನ ಕಾಪಾಡಿಕೊಂಡು ಬಂದ ನಿಮ್ಮ ಮೇಲೆ ಅಭಿಮಾನ ಹೆಚ್ಚಾಗಿದೆ.ಈ ಬಾರಿ ಹಾಸನಕ್ಕೆ ಬಂದಾಗ ಭೇಟಿಯಾಗಲೇಬೇಕು ನಿಮ್ಮನ್ನ.
    ಹಾರನಹಳ್ಳಿ ರಾಮಸ್ವಾಮಿಯವರ ಬಗ್ಗೆ ಓದಿ ಆಶ್ಚರ್ಯವಾಯಿತು.ಅವರು ಕಾಂಗ್ರೆಸಿಗರಾಗಿದ್ದರಲ್ಲವೇ? ಅದ್ಹೇಗೆ ತುರ್ತು ಪರಿಸ್ಥಿತಿಗೆ ಸೆಡ್ಡು ಹೊಡೆದರು ಅಂತ.ನಾನು ಇಂಜಿನೀಯರಿಂಗ್ ಮಾಡಿದ್ದು ಅವರ ಶಿಕ್ಷಣ ಸಂಸ್ತೆಯಲ್ಲಿ, ವರ್ಷಕ್ಕೊಮ್ಮೆ ಕಾಲೇಜು ದಿನದಂದು ಬಂದು ಭಾಷಣ ಮಾಡುತಿದ್ದರು.ನಾವ್ಯಾರು ಅವರ ಭಾಷಣ ಕೇಳದೆ ಅಡ್ಡಿಪಡಿಸುತಿದ್ದೆವು.ತೀರ ಇತ್ತೀಚೆಗಷ್ಟೇ ಕ್ವಿಟ್ ಇಂಡಿಯ ಚಳುವಳಿಯಲ್ಲಿ,ಏಕೀಕರಣದ ಹೋರಾಟದಲ್ಲಿ ಅವರ ಪಾತ್ರದ ಬಗ್ಗೆ ತಿಳಿದು ಎಂತ ಮಹನಿಯರ ಭಾಷಣಕ್ಕೆ ಅಡ್ಡಿ ಪಡಿಸುತಿದ್ದೆವಲ್ಲ ಅನ್ನಿಸಿತ್ತು.ನಿಮ್ಮ ಲೇಖನ ಓದಿ ಅವ್ರ ಮೇಲಿನ ಅಭಿಮಾನ ಹೆಚ್ಚಿದೆ.
    ದೇಶ ಕಂಡ ಬಲಿಷ್ಠ ಪ್ರಧಾನಿಯಾಗಿದ್ದ ಇಂದಿರಾ, ಸಂಜಯನ ಜೊತೆ ಸೇರಿ ಜನರ ಮೇಲೇರಿದ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯದ ವಿರುದ್ಧ ಹೋರಾಡಿದ ಎಲ್ಲರಿಗೂ ಹಾಟ್ಸ್ ಆಫ್..!!
    ನಿಮ್ಮ ಹೋರಾಟದ ಬದುಕಿನ ಅನುಭವ ನಮ್ಮಂತ ಕಿರಿಯರಿಗೆ ಸ್ಪೂರ್ತಿ ನೀಡುವನ್ತದ್ದು.ಮುಂದುವರೆಸಿ...
    ರಾಕೇಶ್ ಶೆಟ್ಟಿ :)

    Kavinagaraj
    13AUG2010 7:17
    ರಾಕೇಶ್, ನಿಮ್ಮ ಸ್ಪಂದನ ಸಂತಸ ತಂದಿದೆ. ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ವಕೀಲರಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ರಾಜಕೀಯ ಬೇರೆ, ವೃತ್ತಿಗೌರವ ಬೇರೆ ಎಂದು ತೋರಿಸಿದರು. ಹಾಸನಕ್ಕೆ ಬಂದಾಗ ಭೇಟಿಯಾಗೋಣ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ