ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಡಿಸೆಂಬರ್ 18, 2010

ಮೂಢ ಉವಾಚ -38

ಸತ್ಯಧರ್ಮಕೆ ಹೆಸರು ಕೋದಂಡರಾಮ 
ಹಿಡಿದನಾಯುಧವ ನೀತಿಪಾಲನೆಗಾಗಿ|
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ||


ಅನುರೂಪ ದಾಂಪತ್ಯವಿರೆ ಮನೆಯು ಸ್ವರ್ಗ
ಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ|
ರಸಭಾವದನುರೂಪ ಶಬ್ದಗಳ ಜೋಡಿಸಲು
ಒಡಮೂಡುವುದುತ್ತಮ ಕಾವ್ಯ ಮೂಢ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು|
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನವನು ಮೂಢ||


ಸರ್ವಭೂತಾತ್ಮ ದೇವ ಸರ್ವರಿಗೆ ಸಮನು
ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ|
ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ
ಭಿನ್ನ ಫಲ ಪಡೆದಿಹರೋ ಮೂಢ||
********************
-ಕವಿನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ