ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 24, 2010

ಮೂಢ ಉವಾಚ -40

ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂವಿಕಲನಾಗದಿರೆಲೋ ಮೂಢ ||


ವಿಷಯ ಬಿಟ್ಟವನು ಸಂನ್ಯಾಸಿಯೆನಿಸುವನು
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||


ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||


ಮನಶುದ್ಧಿಯಿರದೆ ತಪವ ಮಾಡಿದೊಡೇನು
ದೇಹ ದಂಡಿಸಿದರೇನು ಅಂತರಂಗವ ಮರೆತು |
ಉಪವಾಸದಿಂ ಫಲವೇನು ವಿವೇಕವಿರದಲ್ಲಿ
ಆಚಾರದೊಳು ವಿಚಾರವಿರಲಿ ಮೂಢ ||
*************
-ಕವಿನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ