ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಜುಲೈ 16, 2011

ಮೂಢ ಉವಾಚ - 59

ಜೀವನ್ಮುಕ್ತ

ಅಹಮಿಕೆಯ ಅಂತ್ಯವದು ಅರಿವಿನ ಶಿಖರ
ವಿಷಯವಾಸನೆಯ ಕೊನೆ ವಿರಾಗ ಪ್ರಖರ |
ಭೂತವದು ಕಾಡದು ಭವಿಷ್ಯದ ಭಯವಿಲ್ಲ
ಜೀವನ್ಮುಕ್ತನವ ನಿರ್ವಿಕಾರಿ ಮೂಢ ||

ಸುಖ-ದುಃಖ
ಸುಖವನಾಳೆ ಭೋಗಿ ಮನವನಾಳೆ ಯೋಗಿ
ಸುಖವನುಂಡೂ ದುಃಖಪಡುವವನೆ ಭೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖ ಬಯಸದಿರೆ ದುಃಖವೆಲ್ಲಿ ಮೂಢ ||

ಸಮಸ್ಯೆ
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢ ||


ಗುರು
ಗುರುಹಿರಿಯರನನುಸರಿಸಿ ಜನರು ಸಾಗುವರು
ಗುರುವು ಸರಿಯೆನಲು ಜನರಿಗದು ಸರಿಯು |
ಗುರುವಿಗಿಹುದು ಗುರುತರದ ಹೊಣೆಯು
ಎಡವದಲೆ ನಡೆಯಬೇಕವನು ಮೂಢ ||
**************
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು: