ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಏಪ್ರಿಲ್ 29, 2012

ಮೂಢ ಉವಾಚ - 83


ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..೨೮೫


ಕಾಣದ್ದು ಕಾಣುವುದು ಕೇಳದ್ದು ಕೇಳುವುದು
ಕಂಡಿರದ ಕೇಳಿರದ ಸತ್ಯದರಿವಾಗುವುದು |
ಮುಚ್ಚಿದ್ದ ದಾರಿಗಳು ನಿಚ್ಚಳದಿ ತೆರೆಯುವುವು
ಏಕಾಂತದಲಿಹುದು ನಿನ್ನತನ ಮೂಢ || ..೨೮೬


ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲು
ಕಣ್ಣಿದ್ದು ಕುರುಡನೆನಿಸುವೆಯೋ ನೀನು |
ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲು
ನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..೨೮೭


ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿ
ಜ್ಞಾನಿಗಳ ಹಿತನುಡಿಯು ನಾಯಕಗೆ ನೆರವಾಗೆ |
ಅಂತಿಪ್ಪ ನಾಡು ಪುಣ್ಯವಂತರ ಬೀಡು
ಸಜ್ಜನರ ಒಡನಾಟ ಹಿತಕಾರಿ ಮೂಢ || ..೨೮೮
************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ