ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜನವರಿ 23, 2013

ಶಿವಮೊಗ್ಗದ ಶಿವಪ್ಪನಾಯಕನ ಅರಮನೆ

ಸಸಿಯಂ ಶಿವಮೌಳಿಯನೈ
ದಿಸಿ ಕಡಲಂ ಪುಗಿಸಿ ಬಾಂಬೊಳೆಯನಹಿಪತಿಯಂ
ರಸೆಯಡಿಗಳ್ದಿ ಶಿವೇಂದ್ರನ
ಜಸಮೆಸಕದಿನುರ್ವಿ ಪರ್ವಿದುದು ಮೂಜಗಮಂ|| [ಕೆ.ನೃ.ವಿ. ೭.೧೧]
     ಚಂದ್ರನನ್ನು ಶಿವನ ತಲೆಗೇರಿಸಿ, ನದಿಯನ್ನು ಕಡಲಿಗೆ ಹೊಗಿಸಿ, ಆದಿಶೇಷನನ್ನು ಪಾತಾಳಕ್ಕೆ ಮುಳುಗಿಸಿದಂತೆ ಶಿವೇಂದ್ರನ ಕೀರ್ತಿ ಮೂರು ಲೋಕವನ್ನೂ ಹಬ್ಬಿತು ಎಂದು ೧೭ನೆಯ ಶತಮಾನದ ಕೆಳದಿ ಕವಿಲಿಂಗಣ್ಣನ ವರ್ಣನೆ. ಈ ಶಿವೇಂದ್ರ ಬೇರೆ ಯಾರೂ ಅಲ್ಲ, ಕೆಳದಿಯ ಪ್ರಸಿದ್ಧ ದೊರೆ ಶಿವಪ್ಪನಾಯಕ. ಶಿಸ್ತಿನ ಶಿವಪ್ಪನಾಯಕ ಎಂದೇ ಹೆಸರಾಗಿದ್ದ, ಕ್ರಿ.ಶ. ೧೬೪೬ ರಿಂದ ೧೬೬೦ರವರೆಗೆ ರಾಜ್ಯವನ್ನು ಆಳಿದ್ದ ಈತನ ಬೇಸಿಗೆ ಕಾಲದ ಅರಮನೆ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪಕ್ಕದಲ್ಲಿ ಇದೆ. ಮೊದಲು ಸುಮಾರು ೨೦೦ ಎಕರೆ ವಿಸ್ತೀರ್ಣದಲ್ಲಿ ಈ ಅರಮನೆಯಿತ್ತೆಂದು ಹೇಳಲಾಗಿದ್ದು, ಈಗ ಸುಮಾರು ೧೦ ಎಕರೆಯಷ್ಟು ಭಾಗ ಮಾತ್ರ ಉಳಿದಿದೆ. ಕೆಳದಿ ಅರಸರ ನಂತರದಲ್ಲಿ ಬ್ರಿಟಿಷರು ಇದನ್ನು ಬಳಸಿದ್ದರು. ರಾಣಿ ಚನ್ನಮ್ಮ ಶಿವಾಜಿಯ ಮಗ ರಾಜಾರಾಮನನ್ನು ಅವನು ಔರಂಗಜೇಬನಿಂದ ಸೋತು ಓಡಿಬಂದು ರಕ್ಷಣೆ ಕೋರಿದಾಗ ಈ ಅರಮನೆಯಲ್ಲೇ ಇರಲು ಅವಕಾಶ ನೀಡಿ ರಕ್ಷಿಸಿದ್ದಳೆನ್ನುತ್ತಾರೆ. ಸ್ವಾತಂತ್ರ್ಯಾನಂತರದಲ್ಲಿ ಸರ್ಕಾರವು ಇದನ್ನು ಅರಣ್ಯ ಇಲಾಖೆಯ ಉಗ್ರಾಣವಾಗಿ ಬಳಸಿಕೊಂಡಿತ್ತು. ಈಗ ಇದು ರಕ್ಷಿತ ಸ್ಮಾರಕವಾಗಿದೆ. ತೇಗ ಮತ್ತು ಬೀಟೆ ಮರಗಳನ್ನು ಉಪಯೋಗಿಸಿ ಕಟ್ಟಿರುವ ಈ ಅರಮನೆ ಪ್ರೇಕ್ಷಣೀಯವಾಗಿದೆ. ಅರಮನೆಯ ಎದುರು ಇರುವ ತೆರೆದ ಪ್ರಾಂಗಣದಲ್ಲಿ ಸಾಂಸ್ಕೃತಿಕ ಉತ್ಸವಗಳು, ಕಾರ್ಯಕ್ರಮಗಳು ನಡೆಯುತ್ತಿದ್ದು, ಅದನ್ನು ಮೇಲಿನ ಭಾಗದಿಂದ ರಾಜ ಮತ್ತು ಪರಿವಾರದವರು ವೀಕ್ಷಿಸಲು ಅನುಕೂಲವಾಗುವಂತೆ ಮೊದಲ ಅಂತಸ್ತಿನ ರಚನೆಯಾಗಿದೆ. ಅರಸರು ಇಲ್ಲಿ ದರ್ಬಾರು ನಡೆಸುತ್ತಿದ್ದರರೆನ್ನಲಾಗಿದೆ. 
     ಅರಮನೆಯ ಆವರಣದಲ್ಲಿ ಒಂದು ವಸ್ತು ಸಂಗ್ರಹಾಲಯವಿದ್ದು, ಪ್ರಾಚೀನ ವಿಗ್ರಹಗಳು, ಅನೇಕ ಅಮೂಲ್ಯ ವಸ್ತುಗಳು, ಆಯುಧಗಳು, ವೀರಗಲ್ಲುಗಳು, ತಾಡಪತ್ರಗಳು, ಉಡುಪುಗಳು, ಇತ್ಯಾದಿಗಳನ್ನು ಇತಿಹಾಸಾಸಕ್ತರು ನೋಡಿ ಕಣ್ತುಂಬಿಕೊಳ್ಳಬಹುದು. ಅರಮನೆಯ ಮತ್ತು ವಸ್ತು ಸಂಗ್ರಹಾಲಯದ ಕೆಲವು ಚಿತ್ರಗಳನ್ನು ನಿಮ್ಮ ಗಮನಕ್ಕೆ ಪ್ರಕಟಿಸಿದ್ದು, ಇದು ನಿಮ್ಮನ್ನು ಆ ಸ್ಥಳ ನೋಡಲು ಪ್ರೇರೇಪಿಸಲಿ ಎಂದು ಬಯಸುವೆ. 
     ಆಸಕ್ತರ ಮಾಹಿತಿಗೆ: ಪ್ರತಿ ಸೋಮವಾರ, ಎರಡನೆಯ ಶನಿವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಈ ಅರಮನೆಗೆ ಪ್ರವೇಶವಿರುವುದಿಲ್ಲ. ಉಳಿದ ದಿನಗಳಲ್ಲಿ ವೀಕ್ಷಣೆಗೆ ಅವಕಾಶವಿದೆ. ಇತರ ಸ್ಮಾರಕಗಳಿಗೆ ವ್ಯತಿರಿಕ್ತವಾಗಿ ಇದನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿರುವುದು ಸಂತೋಷದ ವಿಷಯ.
-ಕ.ವೆಂ.ನಾಗರಾಜ್.





















4 ಕಾಮೆಂಟ್‌ಗಳು:

  1. ಕೆಳದಿಯನ್ನು ಸಂದರ್ಶಿಸುವ ನನ್ನ ಚಿರ ಕಾಲದ ಬಯಕೆಗೆ ಮತ್ತೆ ನೀರೆರೆದ ಬರಹಕ್ಕಾಗಿ ಧನ್ಯವಾದಗಳು.

    ಅತ್ಯುತ್ತಮ ಚಿತ್ರ - ಬರಹ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಖಂಡಿತಾ ಒಮ್ಮೆ ಹೋಗಿ ಬನ್ನಿ. ಕೆಳದಿಯ ಮ್ಯೂಸಿಯಮ್, ಇಕ್ಕೇರಿಯ ಅಘೋರೇಶ್ವರ ದೇವಾಲಯ, ಹೊಸನಗರ ತಾ. ನಗರದ ಕೋಟೆ ಇವುಗಳನ್ನೂ ನೋಡಿ. ಧನ್ಯವಾದ, ಬದರೀನಾಥರೇ.

      ಅಳಿಸಿ