ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜೂನ್ 3, 2013

ಬೆಳಕಿಗೆ ಬಂದ ಕವಿ ವೆಂಕಣ್ಣನ ಕೀರ್ತನೆಗಳು

     ೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕೆಳದಿ ಕವಿ ವೆಂಕಣ್ಣ, ಐತಿಹಾಸಿಕ ಕಾವ್ಯ 'ಕೆಳದಿ ನೃಪ ವಿಜಯ'ದ ಕರ್ತೃ ಕವಿಲಿಂಗಣ್ಣನ ಮಗ. ವೆಂಕಣ್ಣನ ಹೆಸರು ಇನ್ನೂ ಉಳಿದಿರುವುದು ಆತ ರಚಿಸಿದ ಕೃತಿಗಳಿಂದ ಎಂಬುದು ಗಮನಾರ್ಹ. ಈತ ರಚಿಸಿದ ೧೦೨೪ ನಾಮಾವಳಿಗಳಿರುವ 'ಗಣ ಸಹಸ್ರನಾಮ', ನೀತಿ ಬೋಧಕ 'ಪಾರ್ವತಿ ವಲ್ಲಭ ಶತಕ', ನೃಸಿಂಹಾವತಾರದ ವೈಭವ ತೋರುವ 'ನರಹರಿ ವಿಜಯ' ಮತ್ತು ಕೆಳದಿ ರಾಮೇಶ್ವರನ ಕುರಿತು ರಚಿಸಿದ ಭಕ್ತಿ ಗೀತೆಗಳು, ಮುಂತಾದ ಕೃತಿಗಳು ಅವುಗಳಲ್ಲಿ ಅಡಗಿರುವ ಭಾವ, ಭಕ್ತಿ, ಕಾವ್ಯಾತ್ಮಕ ಮೌಲ್ಯಗಳಿಂದಾಗಿ ಉಳಿದಿವೆ. ಗಣ ಸಹಸ್ರನಾಮದಲ್ಲಿ ವೆಂಕಣ್ಣ ತನ್ನ ಪರಿಚಯವನ್ನು 'ಧರಣಿದೇವ ಲಲಾಮನೆನಿಸಿದ ವರ ಕೆಳದಿ ಲಿಂಗಾರ್ಯ ತನುಭವ ಗರುವ ವೆಂಕಪ'ನೆಂದು ಮಾಡಿಕೊಂಡಿದ್ದಾನೆ.
     ಕೆಳದಿ ರಾಮೇಶ್ವರ ಮತ್ತು ಕೊಲ್ಲೂರು ಮೂಕಾಂಬಿಕೆಯನ್ನು ಪ್ರಮುಖವಾಗಿ ಭಕ್ತಿಭಾವದಿಂದ ಸ್ತುತಿಸುವ ಕೀರ್ತನೆಗಳು ಲಭ್ಯವಿದೆ. ತಾಳೆಗರಿಗಳಲ್ಲಿ ರಚಿಸಿರುವ ಈ ರಚನೆಗಳನ್ನು ಸಂಪಾದಿಸಿ ಡಾ. ಕೆಳದಿ ಗುಂಡಾಜೋಯಿಸರು 'ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳು' ಎಂಬ ಹೆಸರಿನಲ್ಲಿ ವೆಂಕಣ್ಣನ ೫೦ ಕೀರ್ತನೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ೧೯೭೭ರಲ್ಲಿ ಪ್ರಕಟಣೆಯಾಗಿದೆ. ವೆಂಕಣ್ಣನ ರಚನೆಗಳನ್ನು ಸಂಗೀತಗಾರರು ಬಳಸಿ ಹಾಡಲು ತಕ್ಕವಾಗಿವೆ. 
     ಇತ್ತೀಚೆಗೆ ವೆಂಕಣ್ಣನ ಕೀರ್ತನೆಗಳನ್ನು ಪ್ರಸಿದ್ಧ ಗಾಯಕರಾದ ಶ್ರೀ ಗರ್ತಿಕೆರೆ ರಾಘಣ್ಣ, ಶ್ರೀಮತಿ ವಸುಧಾಶರ್ಮ, ಶ್ರೀ ರಾಘವೇಂದ್ರ ಬಿಜಾಡಿ, ಕು. ಪಲ್ಲವಿಕೃಷ್ಣ ಮತ್ತು ಶ್ರೀ ರಾಜೇಂದ್ರ ಬಾಳೆಹಳ್ಳಿ ಇವರುಗಳಿಂದ ಹಾಡಿಸಿ ಧ್ವನಿ ದಾಖಲಿಸಿ 'ಶಿವ ಮಂತ್ರವ ಜಪಿಸೋ' ಎಂಬ ಹೆಸರಿನಲ್ಲಿ ಸಿ.ಡಿ. ರೂಪದಲ್ಲಿ ಹೊರತರಲಾಯಿತು. ಶ್ರೀ ಶ್ರೀಕಾಂತ ಕಾಳಮಂಜಿಯವರು ಸಂಗೀತ ನಿರ್ದೇಶನ ಮಾಡಿದ್ದು, ಶ್ರೀ ಪ್ರಕಾಶ ಹೆಗಡೆ (ಕೊಳಲು), ಭಾರ್ಗವ ಹೆಗಡೆ ಸೀಗೆಹಳ್ಳಿ (ಸಿತಾರ), ಕವಿ ಬಿ.ಎಸ್.ಆರ್. ದೀಪಕ್ (ವಯಲಿನ್) ವಾದ್ಯ ಸಹಕಾರ ನೀಡಿದ್ದಾರೆ. ಎರಡು ಶತಮಾನಗಳ ನಂತರದಲ್ಲಿ ಕೆಳದಿ ಕವಿ ವೆಂಕಣ್ಣನ ರಚನೆಗಳು ಪ್ರಚಾರಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಸಿ.ಡಿ. ಬಿಡುಗಡೆಗೆ ಶ್ರಮಿಸಿದ ಡಾ. ಕೆಳದಿ ಗುಂಡಾಜೋಯಿಸ್ ಮತ್ತು ಡಾ. ವೆಂಕಟೇಶ ಜೋಯಿಸ್ ಅಭಿನಂದನಾರ್ಹರು. ಕೆಳದಿಯ ಶ್ರೀ ಸರಸ್ವತಿ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಚಿಪ್ಪಳ್ಳಿ ಗೋಪಾಲ ಕೃಷ್ಣರ ಅಧ್ಯಕ್ಷತೆಯಲ್ಲಿ ಕೆಳದಿಯಲ್ಲಿ ನಡೆದ ಸಮಾರಂಭದಲ್ಲಿ ಸಾಗರದ ಮಾಜಿ ಶಾಸಕ  ಶ್ರೀ ಎಲ್.ಟಿ. ತಿಮ್ಮಪ್ಪ ಹೆಗಡೆಯವರು ಸಿ.ಡಿ. ಬಿಡುಗಡೆ ಮಾಡಿದರು. ಸಮಾರಂಭದ ಕೆಲವು ದೃಷ್ಯಗಳಿವು.




-ಕ.ವೆಂ.ನಾಗರಾಜ್.
*************
      ಕೆಳದಿ ವೆಂಕಣ್ಣ ಕವಿಯ ಒಂದು ಭಕ್ತಿ ಸ್ತುತಿ:
ರಾಗ|| ಮಧ್ಯಮಾವತಿ      ತಾಳ || ಆದಿ ||
ಶಿವಮಂತ್ರವ ಜಪಿಸೋ | ಮೂಢ |
ಶಿವಮಂತ್ರವ ಜಪಿಸೋ
ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||

ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ
ಮೌನ ಬೇಡ ಮಣಿಮಾಲಿಕೆ ಬೇಡ
ಧ್ಯಾನ ಬೇಡ ಪಶುವಧೆಗಳು ಬೇಡ || ೧ ||

ದೇಶಕಾಲ ಪಾತ್ರವ ನೋಡಬೇಡ
ಕಾಷಾಯಾಂಬರ ಧಾರಣೆ ಬೇಡ
ಭಾಸುರ ಜಡೆಯನು ಬೆಳೆಸಲು ಬೇಡ
ಈ ಶರೀರವನೆ ದಂಡಿಸಬೇಡ || ೨ ||

ಕಾಲನ ದೂತರು ಎಳೆಯುವ ಮುನ್ನ
ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯಾದ ವಿ
ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು|| ೩ ||
*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ