ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 11, 2013

ಹೀಗೂ ಒಂದು ಪ್ರತಿಭಟನೆ ಮಾಡಿದೆ!


                             

      ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ. ನಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇನ್ನೂ ಎರಡು ವರ್ಷಗಳ ಸೇವಾವಧಿ ಉಳಿದಿದ್ದಂತೆ ಸ್ವ ಇಚ್ಛಾ ನಿವೃತ್ತಿ ಪಡೆದು ಸುಮಾರು ನಾಲ್ಕು ವರ್ಷಗಳಾಗುತ್ತಾ ಬಂದಿವೆ. ಆದರೂ ಸೇವೆಗೆ ಸಂಬಂಧಿಸಿದಂತೆ ನಮ್ಮ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಛೇರಿಯಲ್ಲಿ ನನ್ನ ಎರಡು ನ್ಯಾಯಯುತ ಕೋರಿಕೆಗಳಿಗೆ ಮುಕ್ತಿ ಸಿಕ್ಕಿಲ್ಲ. 
        ಒಂದು: ನನಗಿಂತ ಸೇವಾಜೇಷ್ಠತೆಯಲ್ಲಿ ಕೆಳಗಿದ್ದ 6 ನೌಕರರಿಗೆ 25-09-1992ರಿಂದ ಜಾರಿಗೆ ಬರುವಂತೆ ತಹಸೀಲ್ದಾರ್ ಹುದ್ದೆಗೆ ಪೂರ್ವಾನ್ವಯವಾಗುವಂತೆ ಬಡ್ತಿ ಸಿಕ್ಕಿ ಬಾಕಿವೇತನವನ್ನೂ ಪಾವತಿಸಿದ್ದರೆ ನನಗೆ 19-08-2002ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಿದ್ದಾರೆ. ಇದನ್ನು ಸರಿಪಡಿಸಲು ಹಾಗೂ ನನ್ನ ವೇತನವನ್ನು ಅವರ ವೇತನಕ್ಕೆ ಸಮಾಂತರದಲ್ಲಿ ನಿಗದಿಸಲು ಕೋರಿದ ಬೇಡಿಕೆ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಇತ್ಯರ್ಥ ಪಡಿಸಿಲ್ಲ. ಉಚ್ಛ ನ್ಯಾಯಾಲಯ, ಅಪೆಲೇಟ್ ಟ್ರಿಬ್ಯೂನಲ್ ಗಳಲ್ಲಿ ನನ್ನ ಪರವಾಗಿ ಆದೇಶಗಳಾದರೂ ಗಣನೆಗೆ ತೆಗೆದುಕೊಳ್ಳದೆ ಇರುವುದಕ್ಕೆ ಇರುವ ಕಾರಣ ನನಗಂತೂ ಇಂದಿಗೂ ಗೊತ್ತಾಗಿಲ್ಲ. ಬಹುಷಃ ಲಂಚ ಕೊಡದೆ ಇರುವುದೇ ಇರಬಹುದು. ಮಾಹಿತಿ ಹಕ್ಕು ಕಾಯದೆ ಅನ್ವಯ ಕೇಳಿದ ಮಾಹಿತಿಗಳಿಗೂ ನನಗೆ ಸಿಕ್ಕಿದ್ದು ಅಪೂರ್ಣ ಮತ್ತು ಅಸ್ಪಷ್ಟ ಉತ್ತರ.
    ಎರಡು: ಕಂದಾಯ ಇಲಾಖಾ ಪ್ರಧಾನ ಕಛೇರಿಯಿಂದಲೇ ಪ್ರಕಟವಾದ ತಹಸೀಲ್ದಾರ್-ಗ್ರೇಡ್1ರಲ್ಲಿ ನನಗೆ ನೀಡಿದ ಅರ್ಹತಾ ದಿನಾಂಕಕ್ಕೆಅನುಗುಣವಾಗಿ ನನ್ನ ವೇತನ ನಿಗದಿಸಲು ಕೋರಿದ ಬೇಡಿಕೆ ಮೂರು ವರ್ಷಗಳಿಂದಲೂ ಈಡೇರಿಲ್ಲ. ಮಹಾಲೇಖಾಪಾಲಕರು ಈ ಬಗ್ಗೆ ವಿವರ ಕೇಳಿ ಬರೆದ ಪತ್ರಕ್ಕೆ ಉತ್ತರಿಸಲು ಎರಡು ವರ್ಷಗಳಾದರೂ ಅವರಿಗೆ ಪುರುಸೊತ್ತು ಸಿಕ್ಕಿಲ್ಲ.
     ಸ್ವತಃ ಹಲವಾರು ಸಲ ಹೋಗಿ ವಿಚಾರಿಸಿಯಾಯಿತು. ಲೋಕಾಯುಕ್ತರಿಗೆ, ಮುಖ್ಯ ಕಾರ್ಯದರ್ಶಿಯವರಿಗೆ ದೂರುಗಳನ್ನು ಸಲ್ಲಿಸಿದ್ದಾಯಿತು. ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ತಿಳಿಸಿದ್ದಾಯಿತು. ಮಾಧ್ಯಮಗಳ ಗಮನಕ್ಕೆ ತರುವೆನೆಂದು ಹೇಳಿದ್ದಾಯಿತು. ಯಾವುದಕ್ಕೂ ಕುಗ್ಗದೆ, ಜಗ್ಗದೆ ಬಂಡೆಯಂತೆ ಬಕಧ್ಯಾನ ಮಾಡುತ್ತಾ ಕುಳಿತ ಅಲ್ಲಿನ ಸಿಬ್ಬಂದಿಯ ಗಟ್ಟಿತನಕ್ಕೆ ತಲೆದೂಗಲೇಬೇಕಾಯಿತು. ಬಾಹ್ಯ ಪ್ರಭಾವ ಬೀರದೆ ಸಹಜವಾಗಿ ಕೆಲಸ ಮಾಡಿಸಲು ನಡೆಸಿದ ನನ್ನ ಪ್ರಯತ್ನ ಫಲ ಕೊಡಲಿಲ್ಲ. 
     ಹೊಸ ರೀತಿಯಲ್ಲಿ ಪ್ರತಿಭಟಿಸಬೇಕೆಂಬ ನನ್ನ ಇಚ್ಛೆಗೆ ಹರಿಹರಪುರ ಶ್ರೀಧರ ಸ್ಪಂದಿಸಿದರು. ಇಬ್ಬರೂ ಕೂಡಿ "ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯದಕ್ಷತಾ ಸುಧಾರಣಾ ಯಜ್ಞ"ದ ರೂಪು ರೇಷೆ ಸಿದ್ದಪಡಿಸಿದೆವು. ಅಗ್ನಿಗೆ ಸಮಿತ್ತುಗಳನ್ನು ಅರ್ಪಿಸುವಾಗ 'ಇದಂ ನ ಮಮ' (ಇದು ನನಗಾಗಿ ಅಲ್ಲ) ಎಂದು ಉಚ್ಛರಿಸುತ್ತೇವೆ. ಆದ್ದರಿಂದ.  ಪ್ರಾರಂಭಕ್ಕೆ ಮುನ್ನ ಪ್ರಾಸ್ತಾವಿಕವಾಗಿ ಉದಾಹರಣೆಯಾಗಿ ನನ್ನ ಮೇಲಿನ ಅನುಭವಗಳನ್ನು ಉಲ್ಲೇಖಿಸಿದರೂ, ಈ ಯಜ್ಞದ ಸಂಕಲ್ಪದಲ್ಲಿ ನನ್ನ ವೈಯಕ್ತಿಕ ಬೇಡಿಕೆಗಳನ್ನು ಸೇರಿಸದೆ, "ಕಛೇರಿಯ ಕಾರ್ಯದಕ್ಷತೆ ಹೆಚ್ಚಲಿ, ಸೇವಾಕಾಯದೆ, ಕಾನೂನುಗಳನ್ನು ಗೌರವಿಸಲಿ, ಮಾಹಿತಿ ಹಕ್ಕು ಕಾಯದೆಯ ನೈಜ ಅನುಷ್ಠಾನ ಮಾಡುವಂತಾಗಲಿ, ವಿಳಂಬರಹಿತ, ಜನಪರ, ನಿಷ್ಪಕ್ಷಪಾತ ಕೆಲಸಗಳಾಗಲಿ" ಎಂಬ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಸಂಕಲ್ಪಗಳನ್ನು ಮಾತ್ರ ಮಾಡಿ ಒಂದು ಯಜ್ಞವನ್ನು ಸುಮಾರು 50 ಹಿತೈಷಿಗಳ ಸಮ್ಮುಖದಲ್ಲಿ ಮಾಡಿಯೇಬಿಟ್ಟೆವು. ಯಜ್ಞಕ್ಕೆ ಸುತ್ತಲಿನ ಪರಿಸರ ಶುದ್ಧತೆಗೆ ಸಹಕಾರಿಯಾಗುವ ತಾನಾಗಿ ಒಣಗಿ ಬಿದ್ದ ಔಷಧಿಯುಕ್ತ ಸಮಿತ್ತುಗಳು ಮತ್ತು ಶುದ್ಧ ತುಪ್ಪವನ್ನು ಮಾತ್ರ ಬಳಸಿದ್ದು ಇದಕ್ಕಾಗಿ ತಗುಲಿದ ವೆಚ್ಚ 50 ರೂ.ಗಳಿಗೂ ಹೆಚ್ಚಲ್ಲ. ಯಜ್ಞದ ಫಲವೋ ಎಂಬಂತೆ ದೃಷ್ಟ ಹಾಗೂ ಪತ್ರಿಕಾ ಮಾಧ್ಯಮದವರಿಗೆ ವಿಷಯ ತಿಳಿದು ಅವರುಗಳು ನಮ್ಮ ಸಂದರ್ಶನವನ್ನೂ ಮಾಡಿದರು. ನಿನ್ನೆ ಮತ್ತು ಇಂದು ದೂರದರ್ಶನದ ಹಲವಾರು ಚಾನೆಲ್ಲುಗಳಲ್ಲಿ ಯಜ್ಞದ ದೃಷ್ಯಗಳು,  ಸುದ್ದಿಗಳು ಬಿತ್ತರಗೊಂಡವು. ಟಿವಿ 9ರಲ್ಲಿ ನನ್ನ ವಿಸ್ತೃತ ಸಂದರ್ಶನವನ್ನೂ ಮಾಡಿ ಸುದ್ದಿ ಪ್ರಚುರಪಡಿಸಿದರು. ಪತ್ರಿಕೆಗಳಲ್ಳೂ ವಿಷಯ ಜಾಹೀರಾಯಿತು. ಸರ್ಕಾರಕ್ಕೂ ಈ ಯಜ್ಞದ ವಿಡಿಯೋ ಕಳುಹಿಸಿರುವೆ. ಇನ್ನಾದರೂ ಸಂಬಂಧಿಸಿದವರು ಎಚ್ಚರಗೊಳ್ಳುವರೋ, ಇಲ್ಲವೋ ಎಂಬುದನ್ನು ನೋಡಬೇಕು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ