ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜೂನ್ 7, 2013

ಕರುಣಿಸು ತಾಯೆ

     ಪೌರಾಣಿಕ ಕಥೆಯಂತೆ ದಕ್ಷಯಜ್ಞದಲ್ಲಿ ತನ್ನನ್ನೇ ದಹಿಸಿಕೊಂಡು ಶಿವಕಲೆಯನ್ನು ಸೇರಿದ್ದ ದಾಕ್ಷಾಯಿಣಿ ಮುಂದೆ ಪರ್ವತರಾಜನ ಪುತ್ರಿ ಪಾರ್ವತಿಯಾಗಿ ಜನಿಸಿ ಶಿವನನ್ನು ವರಿಸುತ್ತಾಳೆ. ಪರ್ವತರಾಜನ ಪತ್ನಿ ಮೇನಾದೇವಿಗೆ ಮೈನಾಕ, ವೃಷಭ, ಕ್ರೌಚರೆಂಬ ಪುತ್ರರಿದ್ದರು. ಆದರೆ ಸುಂದರ ಸದ್ಗುಣಯುತ ಮಗಳಿಲ್ಲದ ಕೊರತೆ ಅವಳನ್ನು ಕಾಡಿತ್ತು. ಪತಿಯ ಅನುಮತಿ ಪಡೆದು ಪರಶಿವೆಯನ್ನು ಕುರಿತು ತಪಸ್ಸು ಮಾಡಿದಾಗ ಒಲಿದ ಶಿವೆ ಮೇನಾದೇವಿಯ ಕೋರಿಕೆಯಂತೆ ಅವಳ ಮಗಳಾಗಿ ಜನಿಸಿಬರುವ ಆಶ್ವಾಸನೆ ಕೊಡುತ್ತಾಳೆ. ಶಿವೆ ಪ್ರತ್ಯಕ್ಷಳಾಗಿ ಮೇನಾದೇವಿಯ ಅಪೇಕ್ಷೆಯ ಕುರಿತು ಕೇಳಿದಾಗ ಆಕೆ ಸಲ್ಲಿಸಿದ ಕೋರಿಕೆ ಹೇಗಿತ್ತು ಎಂಬುದನ್ನು ೧೮ನೆಯ ಶತಮಾನದ ಲಿಂಗಣ್ಣಕವಿ ತನ್ನ 'ದಕ್ಷಾಧ್ವರ ವಿಜಯ' ಕೃತಿಯಲ್ಲಿ ವರ್ಣಿಸಿರುವುದು ಹೀಗೆ:

ರಾಗ || ತುಜಾವಂತಿ ||            ತಾಳ ||

ತಾಯೆ ಯೆನ್ನನು ಕರುಣದಿಂದ ಕಲ್ಯಾಣಿ
ತಾಯೆ ನೀನೆ ತನುಜೆಯಪ್ಪಂತು ವರವಿತ್ತು || ಪ ||

ಶರದಿಂದು ನಿಭವದನೆ | ಸರಸ ಸದ್ಗುಣಸದನೆ |
ಪರಶಿವೆ ಸುಕುಂದ ಕೋರಕ ಚಾರುರದನೆ |
ತರಣಿಶತಕೋಟಿ ಸಂಕಾಶೆ | ಸರ್ವಾವಾಸೆ |
ದುರಿತಾರ್ತಿ ದೂರೆ ಸಮ್ಮೋಹನಾಕಾರೆ || ೧ ||

ಭುವನ ಪಟ್ಟದ ರಾಣಿ | ಭುಜಗ ಸನ್ನಿಭ ವೇಣಿ |
ಭುವನೈಕ ವಿಖ್ಯಾತೆ | ಮೂಲೋಕ ಮಾತೆ |
ಅವಿರಳಾನಂತ ಶುಭಲೀಲೆ | ಗಾನ ವಿಲೋಲೆ |
ಸುವಿಮಲ ಚರಿತ್ರೆ | ಸರಸಿರುಹ ದಳ ನೇತ್ರೆ || ೨ || 

ಕರುಣವಾರಿಧಿ ನೀನು ಕಡು ದೈನ್ಯಯುತಳಾನು |
ನೆರೆ ಬೇಡಿಕೊಂಬೆನನುಮಾನವಿನ್ನೇನು |   
ಮರೆಯ ಮಾತೇಕೆ ಶಂಕರಿ ಮುನ್ನ ನೀನೆನ್ನ
ಪೊರೆವುದುದ್ಧರಿಸಿ | ಬಿನ್ನಪವನವಧರಿಸಿ || ೩ ||   
***********
ಚಿತ್ರ ಕೃಪೆ:  www.tattoopins.com (ರಾಯಲ್ಟಿ ಮುಕ್ತ ಚಿತ್ರ)  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ