ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಡಿಸೆಂಬರ್ 6, 2010

ಮೂಢ ಉವಾಚ -33 : ಬಲ್ಲಿದ

ಹುಟ್ಟು ಸಾವುಗಳ ಚಕ್ರ ತಿರುಗಿದೆ ನಿರಂತರ
ಸಕಲಜೀವಗಳಲುತ್ತಮವು ಮಾನವಜನ್ಮ|
ನಿಜಗುರಿಯನರಿಯದಲೆ ಭ್ರಮೆಗೆ ಪಕ್ಕಾಗಿ
ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ||


ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||


ಪದ್ಮಪತ್ರದ ಮೇಲಣ ಜಲಬಿಂದುವಿನೊಲು
ಸ್ಥಿರವಲ್ಲವೀ ಬದುಕಿನಾಸೆಗಳು ಬಯಕೆಗಳು|
ಮಿಂಚಿನೊಲು ಮೂಡಿ ಮರೆಯಾಗದೆ ಸುಖ
ಅರಿತವರು ಮನವನಚಲಗೊಳಿಸುವರು ಮೂಢ||


ಅವ ಕೀಳು ಇವ ಮೇಲು ಎಂದೆಣಿಸದೆ
ಬಡವ ಸಿರಿವಂತರೆನೆ ತರತಮವ ಮಾಡದೆ|
ಸಮಚಿತ್ತದಲಿ ನೋವು ನಲಿವುಗಳ ಕಂಡು
ಬಲ್ಲಿದರು ಬಾಳುವರು ಕಾಣು ಮೂಢ||
***************
-ಕವಿನಾಗರಾಜ್.

2 ಕಾಮೆಂಟ್‌ಗಳು: