ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 10, 2010

ಮೂಢ ಉವಾಚ -35 : ಸಾಧಕ

ಶ್ರದ್ಧೆಯಿರಬೇಕು ಧರ್ಮದಾಚರಣೆಯಲಿ
ಹಂಬಲವಿರಬೇಕು ಅರಿವ ಹಸಿವಿನಲಿ|
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿಯದು ಸಿಗದಿರದೆ ಮೂಢ||


ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು|
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ||


ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ|
ಗುರುವಿನಲಿ ಶ್ರದ್ಧೆ ಉತ್ತಮರ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ||


ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ|
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ||
*****************
-ಕವಿನಾಗರಾಜ್.

2 ಕಾಮೆಂಟ್‌ಗಳು: