ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಅಕ್ಟೋಬರ್ 19, 2011

ಮೂಢ ಉವಾಚ - 77


ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ |
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ ||


ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ
ಬರಡು ಮನದಲಿ ತೋರಿಕೆಯ ಸಂತೋಷ |
ಹೀನ ದೈನ್ಯತೆಯ ಆಶ್ರಯದ ಪಾಶ
ಮೂದಲಿಕೆ ತಪ್ಪದು ಮುದಿತನದಿ ಮೂಢ ||


ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||


ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು |
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ ||
^^^^^^^^^^^^^^^
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ