ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 22, 2011

ಕಡಬ ತಾಲ್ಲೂಕು ಆದೀತೇ?

     10-12 ವರ್ಷಗಳ ಹಿಂದಿನ ಮಾತು.  ಕಡಬ ಪುತ್ತೂರು ತಾಲ್ಲೂಕಿನ ಒಂದು ಹೋಬಳಿ. ಕಡಬವನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು ಜನರ ಹೋರಾಟ ತೀವ್ರಗೊಂಡಾಗ ಹೋರಾಟದ ಕಾವನ್ನು ಕಡಿಮೆಗೊಳಿಸಲು ರಾಜಕಾರಣಿಗಳು ಮಾಡಿದ ಕುತಂತ್ರವೆಂದರೆ ತಹಸೀಲ್ದಾರರ ಎಲ್ಲಾ ಅಧಿಕಾರಗಳನ್ನು ನೀಡಿ ಕಡಬಕ್ಕೆ ವಿಶೇಷ ತಹಸೀಲ್ದಾರರ ನೇಮಕ ಮಾಡಿದ್ದು. ನಾನೇ ಅಲ್ಲಿಗೆ ಪ್ರಥಮ ವಿಶೇಷ ತಹಸೀಲ್ದಾರನಾಗಿ ಹೋದವನು. ಇದನ್ನು ರಾಜಕಾರಣಿಗಳ ಕುತಂತ್ರವೆಂದು ಏಕೆ ಹೇಳಿದೆನೆಂದರೆ ಕಡಬವನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸಲು ಕಷ್ಟವೇನಿರಲಿಲ್ಲ. ಮಾಜಿ ಮುಖ್ಯಮಂತ್ರಿಯವರಾದ ಶ್ರೀ ವೀರಪ್ಪ ಮೊಯಿಲಿಯವರಿದ್ದರು. ಅವರೇ ಮಂಗಳೂರು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ವಿಚಾರಿಸಿ ನನ್ನನ್ನು ಕಡಬಕ್ಕೆ ನೇಮಿಸಲು ಶಿಫಾರಸು ಮಾಡಿದ್ದವರು. ಶ್ರೀ ಸದಾನಂದ ಗೌಡರು ಆಗ ಪುತ್ತೂರಿನ ಶಾಸಕರಾಗಿದ್ದರು. ಈಗ ಅವರೇ ಮುಖ್ಯಮಂತ್ರಿಗಳು. ಶ್ರೀಮತಿ ಶೋಭಾ ಕರಂದ್ಲಾಜೆಯವರೂ ಪುತ್ತೂರು ತಾಲ್ಲೂಕಿನವರು. ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯದಲ್ಲಿ ಪ್ರಭಾವ ಬೀರಲು ಸಾಧ್ಯವಿತ್ತು. ಘಟಾನುಘಟಿ ನಾಯಕರುಗಳಿದ್ದರೂ ಕಡಬ ತಾಲ್ಲೂಕಾಗಲಿಲ್ಲ, ಅಥವಾ ಮಾಡಲು ಬಿಡಲಿಲ್ಲ. ಮಾಡಲು ಇಷ್ಟವಿಲ್ಲದಿದ್ದರೆ ಸ್ಪಷ್ಟ ನಿರ್ಧಾರ ತಳೆದು ಜನರನ್ನು ಒಪ್ಪಿಸಲು ಪ್ರಯತ್ನಿಸಬಹುದಿತ್ತು. ಆ ಕೆಲಸವನ್ನೂ ಮಾಡಲಿಲ್ಲ. ಜನರೂ ತಣ್ಣಗಾಗಿರುವಂತೆ ತೋರುತ್ತದೆ. ದಶಕಗಳ ಹೋರಾಟದ ಬಿಸಿಯನ್ನು ರಾಜಕಾರಣಿಗಳು ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಣ್ಣಾ ಹಜಾರೆಯವರ ಹೋರಾಟದ ದಿಕ್ಕನ್ನೂ ಸಹ ತಪ್ಪಿಸುವಲ್ಲಿ ಕೊಳಕು ರಾಜಕಾರಣಿಗಳು ಯಶಸ್ವಿಯಾದಾರೇನೋ! ಸೌಮ್ಯ, ಶಾಂತಿಯುತ ಹೋರಾಟಕ್ಕೆ ಬೆಲೆ ಸಿಗುವ ಸಾಧ್ಯತೆ ಕಡಿಮೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ