ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜೂನ್ 15, 2011

ಮೂಢ ಉವಾಚ - 54: ದೇವ

ದೇವರನು ಅರಸದಿರಿ ಗುಡಿ ಗೋಪುರಗಳಲಿ
ಇರದಿಹನೆ ದೇವ ಹೃದಯ ಮಂದಿರದಲ್ಲಿ |
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮ ಒಲಿಯುವನು ಮೂಢ ||


ಸರ್ವಭೂತಾತ್ಮ ದೇವ ಸರ್ವರಿಗೆ ಸಮನು
ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ |
ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ
ಭಿನ್ನ ಫಲ ಪಡೆದಿಹರೋ ಮೂಢ ||


ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ
ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ |
ರವಿ ಸೋಮರಲಿ ಜಲ ವಾಯು ನೆಲ ಜಲದಲಿ
ದೇವನ ಕಾಣುವರು ನರರು ಮೂಢ ||


ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ ಜಗವನಿತ್ತಿಹನು ಸಕಲ ಜೀವಿಗೆ
ಬೇಧವೆಣಿಸದಾತನಿಗೆ ಶರಣಾಗು ಮೂಢ ||
************
-ಕ.ವೆಂ.ನಾಗರಾಜ್.

1 ಕಾಮೆಂಟ್‌: