ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 28, 2011

ಮೂಢ ಉವಾಚ - 57

ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ
ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ |
ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು
ಗುರುಮಾರ್ಗವನುಸರಿಸೆ ಧನ್ಯ ಮೂಢ ||


ಶ್ರದ್ಧೆಯಿರಲಿ ಧರ್ಮದಾಚರಣೆಯಲಿ
ತುಡಿತವಿರಲಿ ಅರಿವ ಹಸಿವಿನಲಿ
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿ ಸಿಗದಿರದೆ ಮೂಢ ||


ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||


ಜಗದೊಡೆಯ ಪರಮಾತ್ಮನಲಿರಿಸಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
***************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ