ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜೂನ್ 20, 2011

ಮೂಢ ಉವಾಚ - 55: ದೇವ-2

ಹಣದಿಂದ ಸಿಗನು ಅಧಿಕಾರಕೆ ಬರನು
ವಿದ್ಯೆಗೆ ಬಾಗನು ಸುಂದರತೆಗೊಲಿಯನು |
ಚತುರತೆಗೆ ದಕ್ಕನು ಏನಿತ್ತರೊಲ್ಲನು
ನಿಜ ಪ್ರೀತಿಗೊಲಿಯುವನು ಮೂಢ ||


ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||


ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ ||


ಅರಿವಿಗಸದಳನು ಅಗೋಚರವಾಗಿಹನು
ಅಳತೆಗೆ ಸಿಲುಕನು ಬುದ್ಧಿಗೆ ನಿಲುಕನು |
ಅನಾದಿಯಾಗಿಹನು ಅನಂತನೆನಿಸಿಹನು
ಪರಿಶುದ್ದ ಪರಿಪೂರ್ಣ ಅವನೆ ಮೂಢ ||
**************
-ಕ.ವೆಂ.ನಾಗರಾಜ್.
ಬದರೀನಾಥ ಪಲವಳ್ಳಿಯವರು ಹಂಚಿಕೊಂಡಿರುವುದು:

4 ಕಾಮೆಂಟ್‌ಗಳು:

  1. [ಕಾಣದಿಹ ದೇವನಿಹನೆಂದು ಹೇಳಿಸುವ
    ಶಕ್ತಿ ಯಾವುದದಚ್ಚರಿಯು ಮೂಢ ]

    ಇರುವೆಯಲಿ ಅಂಗಾಂಗ ಮೂಡಿಸಿದವನಾರು?
    ಹುಲ್ಲಿನಲಿ ಹಾಲನ್ನು ಹಿಂಡಿದವನಾರು?
    ನೀರು ಗಾಳಿಯನಿತ್ತು ಸಲಹಿದವನಾರು?
    ಉಂಡ ಅನ್ನವ ರಕ್ತ ಮಾಡಿದವನಾರು?
    ಎಲ್ಲ ಮಾಡುವೆನೆಂದು ಬೀಗುವ
    ಜನರ ಬಳಿ ಇದೆಯೇ....ಉತ್ತರ?
    .................
    ಅದಕೆ ಉತ್ತರ ... ಪರಮೇಶ್ವರ

    ಪ್ರತ್ಯುತ್ತರಅಳಿಸಿ
  2. ಮೂಢ ಉವಾಚ - 55: ದೇವ-2 ರಲ್ಲಿ ಕವಿಯವರು ದೇವರ ನಿಜವಾದ ಅರ್ಥ ಮತ್ತು ಅವನ ಕಲ್ಪನೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

    ಪ್ರತ್ಯುತ್ತರಅಳಿಸಿ
  3. Nalina T R Swamy
    Wow! Superb, ಅರಿತವರು ಯಾರಿಹರು ಗಗನದ ನಿಜಬಣ್ಣ

    ಪ್ರತ್ಯುತ್ತರಅಳಿಸಿ