ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಅಕ್ಟೋಬರ್ 13, 2011

ಕೆಳದಿ ಕವಿ ಮನೆತನ: ಕುಟುಂಬಗಳು ಮತ್ತು ಬಂಧು-ಬಳಗದವರ ವಾರ್ಷಿಕ ಸಮಾವೇಶಗಳು - 1

     ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು ಈಗ ಇದ್ದು ಹನ್ನೊಂದನೆಯ ಪೀಳಿಗೆ ಆಗಮನ ಸನ್ನಿಹಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಈ ಮನೆತನದ ಕುಟುಂಬಗಳ ಸದಸ್ಯರುಗಳು ಹಲವೆಡೆ ಚದುರಿ ಹೋಗಿದ್ದು, ಅವರುಗಳನ್ನು ಗುರುತಿಸಿ ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯ ೨೦೦೭ ರಲ್ಲಿ ಚಾಲನೆ ಪಡೆಯಿತು. ಕವಿಮನೆತನದ ವಂಶವೃಕ್ಷ ಸಿದ್ಧಪಡಿಸುವಲ್ಲಿ ನಡೆದ ಯಶಸ್ವಿ ಪ್ರಯತ್ನದ ಬಗ್ಗೆ ಈಹಿಂದೆ ಬರೆದಿದ್ದ ಒಂದು ಲೇಖನ ದ ಮುಂದುವರಿಕೆ ಈ ಬರಹ. ಪರಸ್ಪರ ಪರಿಚಯವೇ ಇಲ್ಲದ, ಸಂಪರ್ಕ ಸಹ ಇಲ್ಲದಿದ್ದ ಬಂಧುಗಳನ್ನು  ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ನನ್ನ ಸಹೋದರ ಶಿವಮೊಗ್ಗದ ಕವಿ ಸುರೇಶರ ಮನೆಯಲ್ಲಿ ನಡೆದ ಪ್ರಥಮ ಸಮ್ಮೇಳನ ಅವಿಸ್ಮರಣೀಯ, ಅನುಪಮವಾಗಿದ್ದು, ಇದಕ್ಕಾಗಿ ಅವನು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ಇಂತಹ ಪ್ರಯತ್ನವನ್ನು ಇತರ ಸಹೃದಯಿಗಳು ಮಾಡಲು ಪ್ರೇರಣೆ ಸಿಗಬಹುದೆಂಬ ಕಾರಣದಿಂದ ಈ ಕೆಲವು ಸಾಲುಗಳು ಮತ್ತು ನಾವು - ನಮ್ಮವರು ಶೀರ್ಷಿಕೆಯಲ್ಲಿ ನಡೆದ ಸಮಾರಂಭದ ಚಿತ್ರಗಳನ್ನು ಪ್ರಕಟಿಸಿರುವೆ. ಸುಮಾರು ೧೫೦ ಸದಸ್ಯರುಗಳು ಪೂರ್ಣಕಾಲ ಸಕ್ರಿಯವಾಗಿ ಪಾಲ್ಗೊಂಡ ಈ ಸಮಾವೇಶ ಕೆಳಕಂಡ ಭಾವನಾತ್ಮಕ ಕ್ಷಣಗಳಿಗೆ. ಕಾರ್ಯಗಳಿಗೆ ಸಾಕ್ಷಿಯಾಯಿತು. ಜರುಗಿದ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ:

೧. ಅರುಣ ಪಾರಾಯಣ: ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಬಂಧುಗಳ ಮಿಲನವಾಗುತ್ತಿರುವ ನಿಮಿತ್ತ ಶ್ರೀ ಸಾ.ಕ. ಕೃಷ್ಣಮೂರ್ತಿ, ಡಾ. ಕೃಷ್ಣಜೋಯಿಸ್ ಮತ್ತು ಶ್ರೀ ರಾಮಾಜೋಯಿಸ್ ರವರು ಅರುಣಪಾರಾಯಣ;
೨. ಪ್ರಾಸ್ತಾವಿಕ: ಸಮಾವೇಶದ ಪ್ರಸ್ತುತತೆ, ಕಾರ್ಯಕ್ರಮಗಳ ವಿವರ ಕುರಿತು ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಪರಿಚಯ;
೩. ಗಣ್ಯರು, ಕುಟುಂಬದ ಹಿರಿಯರಿಂದ ಜ್ಯೋತಿ ಬೆಳಗುವುದು - ವೇದಘೋಷದೊಂದಿಗೆ;
೪. ಬಂಧುಗಳ ಪರಸ್ಪರ ಪರಿಚಯ  
೫. ಪುಸ್ತಕ ಬಿಡುಗಡೆ: ಕವಿಸುರೇಶ ಸಂಪಾದಿಸಿದ ಹಳೆ ಬೇರು - ಹೊಸ ಚಿಗುರು ಪುಸ್ತಕ ಬಿಡುಗಡೆ ಮಾಡಿದ ಶ್ರೀ ಕೂಡಲಿಜಗನ್ನಾಥ ಶಾಸ್ತ್ರಿಗಳಿಂದ ಸ್ತುತ್ಯಾರ್ಹ ಕಾರ್ಯದ ಪ್ರಶಂಸೆ;
೬. ವಸ್ತು ಪ್ರದರ್ಶನ: ಎಲ್ಲರ ಗಮನ ಸೆಳೆದ ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆ ಪರಿಚಯಿಸುವ ಪುಟ್ಟ ವಸ್ತು ಪ್ರದರ್ಶನ; 
೭. ಸನ್ಮಾನ: ಹಳೇ ಬೇರು ಹೊಸಚಿಗುರು ಪುಸ್ತಕ ರಚನೆಗೆ ಸಹಕರಿಸಿದ ಮಹನೀಯರಿಗೆ ಹಾಗೂ ಕುಟುಂಬಗಳ ಹಿರಿಯರಾದ ಶ್ರೀಯುತ ಸಾ.ಕ.ಕೃಷ್ಣಮೂರ್ತಿ, ರಾಮರಾವ್, ನಾಗರಾಜಭಟ್ಟ, ರಾಮಾಜೋಯಿಸ್, ವಿನೋದಮ್ಮ, ಸೀತಾಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಪದ್ಮಾವತಮ್ಮ, ಗಿರಿಜಮ್ಮ, ರಾಮಮೂರ್ತಿ, ಹರಿಹರದ ರಾಮರಾವ್‌ರವರುಗಳಿಗೆ  ಸನ್ಮಾನ;
೮. ಕವಿ ಮನೆತನದ ಸದಸ್ಯರ ಪೈಕಿ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳನ್ನು ಅವರ ಮಕ್ಕಳು ಸನ್ಮಾನಿಸಿ ಗೌರವ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಸಲ್ಲಿಸಿದ್ದು ತುಂಬಾ ಭಾವನಾತ್ಮಕ ವಾಗಿತ್ತು. ಸನ್ಮಾನಿತರುಗಳು ಹಾಗೂ ಗಣ್ಯರು ಹೃದಯ ಮುಟ್ಟುವ ಮಾತುಗಳನ್ನಾಡಿದರು.
೯. ವಿಚಾರ ವಿನಿಮಯ: ಮುಂದಿನ ಸಮಾವೇಶ, ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.     ಕಾರ್ಯಕ್ರಮದಲ್ಲಿ ಶ್ರೀಮತಿ ಕಾಶಿಬಾಯಿ, ಅಂಬಿಕಾ, ದೀಪಕ್, ಮುಂತಾದವರು ತಮ್ಮ ಸುಮಧುರ ಗಾಯನದಿಂದ ರಂಜನೆ ನೀಡಿದರು. ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ ರಂದು ಇದೇ ರೀತಿ ಒಟ್ಟಿಗೆ ಸೇರಬೇಕೆಂದು ನಿರ್ಧರಿಸಲಾಯಿತು. ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. 
















2 ಕಾಮೆಂಟ್‌ಗಳು: