ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಸೆಪ್ಟೆಂಬರ್ 12, 2011

ಮೂಢ ಉವಾಚ - 69

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು 
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ || 


ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ || 


ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ || 


ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ
ಶಮ ದಮ ತಪ ಶೌಚಗಳೊಡೆಯ |
ಶುದ್ಧಬುದ್ಧಿಯಲಿ ಜ್ಞಾನವನು ಪಡೆವ
ಭೇದವೆಣಿಸದವ ಬ್ರಾಹ್ಮಣನು ಮೂಢ || 
***************
-ಕ.ವೆಂ.ನಾಗರಾಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ