ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಸೆಪ್ಟೆಂಬರ್ 9, 2011

ದೊಂಡಿಯವಾಘನ ನೆನೆಯೋಣ

ದೊಂಡಿಯವಾಘನ ನೆನೆಯೋಣ
     ಇಂದಿಗೆ ದೊಂಡಿಯವಾಘ ಅಮರನಾಗಿ ೨೧೧ ವರ್ಷಗಳು ಕಳೆದಿವೆ. ಸ್ನೇಹಿತರೇ, ಮರೆಯದಿರಿ, ಆಂಗ್ಲರಿಗೆ ಸಿಂಹಸ್ವಪ್ನವಾಗಿ ಕಾಡಿ ಸ್ವರಾಜ್ಯಕ್ಕಾಗಿ, ಸ್ವಧರ್ಮಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಡುತ್ತಲೇ ಮಡಿದಾಗ ಅವನ ವಯಸ್ಸು ಸುಮಾರು ೩೦ ವರ್ಷಗಳ ಆಸುಪಾಸಿನಲ್ಲಿತ್ತು ಅಷ್ಟೆ. ಅದರಲ್ಲೂ ಸುಮಾರು ೬ ವರ್ಷಗಳನ್ನು ಟಿಪ್ಪುಸುಲ್ತಾನನ ಸೆರೆಮನೆಯಲ್ಲಿ ಕಳೆದಿದ್ದವನು. ಟಿಪ್ಪುವಿನ ಸೈನ್ಯದಲ್ಲಿ ಸೈನಿಕನಾಗಿ ೧೮೭೪ರಲ್ಲಿ ಸೇರಿದ್ದ ಅವನನ್ನು ಟಿಪ್ಪು ಬಲವಂತವಾಗಿ ಮುಸ್ಲಿಮನನ್ನಾಗಿ ಮತಾಂತರಗೊಳಿಸಿದರೂ ಸ್ವಧರ್ಮ ಬಿಡಲೊಲ್ಲದ ಅವನನ್ನು ಶ್ರೀರಂಗಪಟ್ಟಣದ ಸೆರೆಮನೆಗೆ ತಳ್ಳಿದ್ದ. ಟಿಪ್ಪು ಹತನಾದ ನಂತರ ೧೮೭೯ರಲ್ಲಿ ಹೊರಬಂದ ಅವನು ತನ್ನದೇ ಸೈನ್ಯ ಕಟ್ಟಿ ಪ್ರಬಲ ಬಂಡಾಯದ ಬಾವುಟ ಶಿವಮೊಗ್ಗ ಜಿಲ್ಲೆಯಿಂದ ಉತ್ತರಕರ್ನಾಟಕದಾದ್ಯಂತ ಹಾರುವಂತೆ ಮಾಡಿದ್ದವನು. ೧೦-೦೯-೧೮೦೦ರಲ್ಲಿ ನಿಜಾಮನ ಸೀಮೆಯ ಕೋಣಗಲ್ಲಿನಲ್ಲಿ ಲಾರ್ಡ್ ವೆಲ್ಲೆಸ್ಲಿಯ ತುಕಡಿಯೊಂದಿಗೆ ಹೋರಾಡುತ್ತಲೇ ವೀರಸ್ವರ್ಗ ಸೇರಿದವನು. ಅವನಂತಹವರ ಹೋರಾಟವನ್ನು ಸ್ಮರಿಸದೆ ಕೇವಲ ಗಾಂಧಿ, ನೆಹರುರಂತಹವರನ್ನು ಮಾತ್ರ ಜಪಿಸಿದರೆ ಇತಿಹಾಸಕ್ಕೆ ಮಾಡುವ ಅನ್ಯಾಯವಲ್ಲವೆ? ಉಗ್ರಗಾಮಿಗಳೆನಿಸಿಕೊಂಡರೂ ಪರವಾಗಿಲ್ಲ, ದೇಶಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ದೊಂಡಿಯವಾಘ ಮತ್ತು ಅವನಂತಹ ಅಸಂಖ್ಯ ಭಾರತರತ್ನರನ್ನು ನೆನೆಯೋಣ.
(ದೊಂಡಿಯವಾಘನ ಕುರಿತು ವಿಸ್ತೃತ ಲೇಖನಕ್ಕಾಗಿ ಇಲ್ಲಿ ನೋಡಿ:  http://kavimana.blogspot.com/2011/08/blog-post_20.html )
     ಇಂದು ನಮ್ಮ ದೇಶವನ್ನಾಳುತ್ತಿರುವ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ಬಹುತೇಕರು ಭಂಡರು. ಅವರು ಬಗ್ಗುವುದು ದಂಡಕ್ಕೆ ಮಾತ್ರ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಯಾರೇ ಹೋರಾಡಲಿ, ಅವರೊಡನೆ ಕೈಜೋಡಿಸದಿದ್ದರೂ ಪರವಾಗಿಲ್ಲ, ಅವರನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ಮಾಡಲು ಮನಸ್ಸು ಮಾಡಬಹುದಲ್ಲವೇ? ಸಜ್ಜನ ಶಕ್ತಿ ರೂಪುಗೊಳ್ಳುವುದು ಇಂತಹ ಮನೋಭೂಮಿಕೆಯಿಂದಲೇ. ಇಂತಹ ಕೆಲಸಗಳೇ ನಾವು ದೊಂಡಿಯವಾಘನಂತಹವರ ಬಲಿದಾನಕ್ಕೆ ತೋರಬಹುದಾದ ಗೌರವ.
********************
(ಚಿತ್ರ: ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿರುವ ದೊಂಡಿಯವಾಘನ ಖಡ್ಗ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ