ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಸೆಪ್ಟೆಂಬರ್ 18, 2011

ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ

     ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ ದಿನಾಂಕ ೯,೧೦ ಮತ್ತು ೧೧-೦೯-೨೦೧೧ರಂದು ಬೆಂಗಳೂರಿನ ಮಿಥಿಕ್ ಸೊಸೈಟಿ ಆವರಣದಲ್ಲಿ ನಡೆಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ಇತಿಹಾಸ ದರ್ಶನದ ೨೬ನೆಯ ಸಂಚಿಕೆ, ಡಾ. ಜಿ.ಎಸ್. ದೀಕ್ಷಿತ್ ರವರ ಇಂಗ್ಲಿಷ್ ಲೇಖನಗಳ ಸಂಕಲನ South India: An Expedition into the Past’  ಇತಿಹಾಸ ದರ್ಶನ ಲೇಖನ;ಲೇಖಕರ ಸೂಚಿ, ಡಾ. ಎಫ್.ಟಿ ಹಳ್ಳಿಕೇರಿಯವರ ಕೃತಿ 'ಹಾಲುಮತ ಸಂಸ್ಕೃತಿ' ಮತ್ತು ಬೆಂಗಳೂರು ಜಿಲ್ಲೆ ಕುರಿತು ವಿಚಾರಸಂಕಿರಣದಲ್ಲಿ ಮಂಡಿತ ಪ್ರಬಂಧಗಳ ಸಿಡಿಗಳ ಬಿಡುಗಡೆಯಾಯಿತು. ಪ್ರೊ.ಜಿ. ವೆಂಕಟಸುಬ್ಬಯ್ಯ, ಡಾ. ಸೂರ್ಯನಾಥ ಕಾಮತ್, ಎಂ.ಕೆ.ಎಲ್.ಎನ್.ಶಾಸ್ತ್ರಿ, ಡಾ. ದೇವರಕೊಂಡಾರೆಡ್ಡಿ ಮೊದಲಾದವರು ಉಪಯುಕ್ತ ಮಾತುಗಳನ್ನಾಡಿದರು. ಸಾಹಿತಿ ಮತ್ತು ಸಂಶೋಧನಾ ತಜ್ಞ ಡಾ. ಹೆಚ್.ಎಸ್. ಗೋಪಾಲರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಸನತಜ್ಞ ಶ್ರೀ ಕೆ.ಮಹಮದ್ ಷರೀಫ್ ರವರಿಗೆ ಡಾ.ಬಾ.ರಾ. ಗೋಪಾಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಡಿನೆಲ್ಲೆಡೆಯಿಂದ ನೂರಾರು ಇತಿಹಾಸಾಸಕ್ತರು ಭಾಗವಹಿಸಿದ್ದರು.
     ಕರ್ನಾಟಕ ಅಕಾದೆಮಿಯ ಧ್ಯೇಯೋದ್ದೇಶ ಕರ್ನಾಟಕದ ಇತಿಹಾಸವನ್ನು ಜನಪ್ರಿಯಗೊಳಿಸುವುದು, ಸಂಶೋಧನೆಗೆ ಪ್ರೋತ್ಸಾಹಿಸುವುದು ಮತ್ತು ಜನಜಾಗೃತಿಗೊಳಿಸುವುದೇ ಆಗಿದೆ. ಸುಮಾರು ೧೬೦೦ ಆಜೀವ ಸದಸ್ಯರಾಗಿರುವ ಅಕಾದೆಮಿಗೆ ನಾನೂ ಸಹ ಆಜೀವ ಸದಸ್ಯನಾಗಿದ್ದೇನೆ. ೩ ದಿನಗಳಲ್ಲಿ ೧೦೦ಕ್ಕೂ ಹೆಚ್ಚು ಸಂಶೋಧನಾ ಸಂಪ್ರಬಂಧಗಳು ಮಂಡಿತವಾಗಿ, ಆ ಕುರಿತು ಆಸಕ್ತರು ಚರ್ಚೆ, ಪ್ರಶ್ನೋತ್ತರಗಳಲ್ಲಿ ಪಾಲುಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ನಾನು ಸೆರೆ ಹಿಡಿದಿದ್ದ ಕೆಲವು ಚಿತ್ರಗಳನ್ನು ಸಂಪದಿಗರ ಮುಂದಿಡುತ್ತಿರುವೆ.






ನನ್ನ ಅನಿಸಿಕೆ:
೧. ಇತಿಹಾಸ ಅಧ್ಯಯನಕ್ಕೆ ಎಲ್ಲರೂ ಮನಸ್ಸು ಮಾಡಬೇಕು. ತನ್ನ ನಾಡು, ತನ್ನ ಜನ, ತನ್ನ ಪರಂಪರೆಗಳ ಅರಿವು ಮೂಡಲು ಇತಿಹಾಸದ ಅಧ್ಯಯನ ಅವಶ್ಯಕ.
೨. ಇತಿಹಾಸವನ್ನು ಅದು ಹೇಗಿತ್ತೋ ಹಾಗೆ ಬೋಧಿಸಬೇಕು. ಆಳುವವರ, ರಾಜಕಾರಣಿಗಳ ಮರ್ಜಿ ಅನುಸರಿಸಿ ಇತಿಹಾಸ ತಿದ್ದಬಾರದು. ಜಾತ್ಯಾತಿತತೆ, ಕೋಮುಸೌಹಾರ್ದ, ಇತ್ಯಾದಿಗಳ ನೆಪದಲ್ಲಿ ಇತಿಹಾಸಕ್ಕೆ ಅಪಚಾರ ಮಾಡಬಾರದು, ಸತ್ಯ ಮುಚ್ಚಿಡಬಾರದು.
೩. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಹಿಂದಿನವರ ತಪ್ಪುಗಳನ್ನು ಮಾಡದಿರುವಂತೆ ಜಾಗೃತಿ ವಹಿಸಬೇಕು.
*****************
-ಕ.ವೆಂ.ನಾಗರಾಜ್.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ