ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಸೆಪ್ಟೆಂಬರ್ 30, 2011

ಮೂಢ ಉವಾಚ - 73


ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ
ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ |
ಸುಖಿಸುವರ ಕಂಡು ಕರುಬುವರು ಪರರು
ಶ್ರಮಿಸುವರ ಮಚ್ಚರಿಪರಿಹರೆ ಮೂಢ ||


ವಿಷಯರಾಗವನು ಮೂಡಿಪುದೆ ಮನಸು
ಪಶುತರದಿ ಬಂಧಗೊಳಿಪುವುದು ಮನಸೆ |
ವಿರಾಗದಲಿ ಬಂಧ ಬಿಡಿಸುವುದು ಮನಸು
ಮನಸಿನಿಂದಲೆ ಕನಸು ನನಸು ಮೂಢ ||


ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ
ತಾಯ ಋಣ ತೀರಿಸಲು ಆಗುವುದೆ ಜಗದಿ |
ನೋವನುಂಡು ನಲಿವ ನೀಡುವಳು ಮುದದಿ
ಆಕೆಯನು ನೋಯಿಪನು ಕಡುಪಾಪಿ ಮೂಢ ||


ಸಾಲ ಪಡೆದೆವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

****************
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ