ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಸೆಪ್ಟೆಂಬರ್ 27, 2011

ಮೂಢ ಉವಾಚ - 72

ಬುದ್ಧಿಗೂ ಹೃದಯಕೂ ಎನಿತೊಂದು ಅಂತರ
ಬುದ್ಧಿಯದು ಚಮತ್ಕಾರ ಹೃದಯದಿಂದುಪಕಾರ |
ಬುದ್ಧಿಯ ಬಲದಲಿ ಜಗವನೆ ಗೆಲಲೇಕೆ
ಹೃದಯವಂತ ಜಗದೊಡೆಯ ಮೂಢ ||

ಹೃದಯವಿರದ ಬುದ್ಧಿ ಅಪಾಯ ತಂದೀತು
ಸ್ವಾರ್ಥ ಮೇಲಾಗಿ ಲೋಕಕಪಕಾರಿಯಾದೀತು |
ಹೃದಯದ ಒಲವಿರಲು ಬುದ್ಧಿ ಜೊತೆಗಿರಲು
ಲೋಕವೊಪ್ಪಿ ಅಹುದೆನದೆ ಮೂಢ || 


ಮೇಲು ಕೀಳುಗಳಿಗೆ ಕಾರಣರು ಪರರಲ್ಲ
ಆಲಸಿಕೆ ಕುಚಟಗಳ ದಾಸರಾಗರೆ ಕೀಳು |
ಮುನ್ನಡೆಯ ಹಂಬಲಿಸೆ ಆಗುವರು ಮೇಲು
ಪರರ ದೂಷಿಸಿ ಫಲವೇನು ಮೂಢ ||


ಸಮರಾರಿಹರು ಜಗದೊಳು ಸಮರಾರಿಹರು
ಅಸಮಾನರೆನಿಸೆ ಹಂಬಲಿಸಿ ಹೋರಾಡುತಿಹರು |
ಗುರಿ ಸಮನಿರಬಹುದು ದಾರಿ ಸಮನಹುದೆ
ನಿಜಸಮತೆ ಕಂಡೀತು ಸಾವಿನಲಿ ಮೂಢ ||
**************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ