ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 22, 2011

ಮೂಢ ಉವಾಚ -71


ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ |
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ ||


ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕರಸುವ ಸಂಶಯಿ ಹಾಳು
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ
ಪರರಿಗೂ ಅವನಿಂದ ಸುಖವಿಲ್ಲ ಮೂಢ || 


ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ಹೆಚ್ಚು ಸುಖ ಬಯಸುವನು |
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ || 


ಲೌಕಿಕ ಸುಖಕಾಗಿ ಹೊರಗೆ ಸುತ್ತಲು ಬೇಕು
ಅಂತರಂಗದ ಸುಖಕೆ ಒಳಗೆ ಸಾಗಲು ಬೇಕು |
ಸುಖ ದುಃಖಗಳೆರಡು ಅವಳಿ ಜವಳಿಗಳು
ಒಂದು ಬಿಟ್ಟಿನ್ನೊಂದಿಲ್ಲ ಮೂಢ ||
****************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: